51 ನಾಮಪತ್ರ ತಿರಸ್ಕಾರ, ಕಣದಲ್ಲಿ 553 ಅಭ್ಯರ್ಥಿಗಳು
ಬೆಂಗಳೂರು, ಮಾ.28 : ಕರ್ನಾಟಕದಲ್ಲಿನ ಲೋಕಸಭೆ ಚುನಾವಣೆ ಕಣದ ಬಗ್ಗೆ ಸ್ಪಷ್ಟ ಚಿತ್ರಣ ಲಭ್ಯವಾಗಿದೆ. ರಾಜ್ಯದ 28 ಕ್ಷೇತ್ರಗಳಲ್ಲಿ 553 ಅಭ್ಯರ್ಥಿಗಳು ಸಲ್ಲಿಸಿದ್ದ 865 ನಾಮಪತ್ರಗಳು ಅಂಗೀಕಾರಗೊಂಡಿದೆ. ವಿವಿಧ ಕಾರಣಗಳಿಂದಾಗಿ 51 ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಹೇಳಿದ್ದಾರೆ.
ಗುರುವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ, ವಿವಿಧ ಕಾರಣಗಳಿಗಾಗಿ 51 ನಾಮಪತ್ರಗಳನ್ನು ತಿರಸ್ಕರಿಸಲಾಗಿದ್ದು, ಒಟ್ಟಾರೆ 553 ಅಭ್ಯರ್ಥಿಗಳ 865 ನಾಮಪತ್ರಗಳು ಅಂಗೀಕಾರಗೊಂಡಿದೆ ಎಂದು ಮಾಹಿತಿ ನೀಡಿದರು. ಬೀದರ್ ಕ್ಷೇತ್ರದಲ್ಲಿ 38 ಅಭ್ಯರ್ಥಿಗಳು, ಉತ್ತರ ಕನ್ನಡದಲ್ಲಿ ಅತಿ ಕಡಿಮೆ 10 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ ಎಂದರು.
ಎಲ್ಲಾ ನಾಮಪತ್ರಗಳ ಪರಿಶೀಲನೆ ಮುಕ್ತಾಯಗೊಂಡಿದ್ದು, ಮಾರ್ಚ್ 29ರ ಶನಿವಾರ ಮಧ್ಯಾಹ್ನ 3 ಗಂಟೆಯ ತನಕ ನಾಮಪತ್ರಗಳನ್ನು ವಾಪಸ್ ಪಡೆಯಲು ಅವಕಾಶವಿದೆ. ನಂತರ ಅಂತಿಮವಾಗಿ ಕಣದಲ್ಲಿ ಉಳಿದವರಿಗೆ ಚಿಹ್ನೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ಅನಿಲ್ ಕುಮಾರ್ ಝಾ ತಿಳಿಸಿದರು. ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಕತ್ತಿ ನಾಮತ್ರ ತಿರಸ್ಕೃತ
ಚಿಕ್ಕೋಡಿ ಕ್ಷೇತ್ರದಲ್ಲಿ ಬಿಜೆಪಿ ಹೆಚ್ಚುವರಿ ಅಭ್ಯರ್ಥಿ ಉಮೇಶ್ ಕತ್ತಿ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಅನಿಲ್ ಕುಮಾರ್ ಝಾ ಹೇಳಿದ್ದಾರೆ. ಬಿಜೆಪಿ ಅಭ್ಯರ್ಥಿಗಳಾಗಿ ರಮೇಶ್ ಕತ್ತಿ ಮತ್ತು ಉಮೇಶ್ ಕತ್ತಿ ನಾಮಪತ್ರ ಸಲ್ಲಿಸಿದ್ದರು. ಬಿಫಾರಂ ಇಲ್ಲದ ಕಾರಣ ಒಂದು ನಾಮಪತ್ರವನ್ನು ತಿರಸ್ಕರಿಸಲಾಗಿದೆ. ಉಳಿದಂತೆ ಬೆಳಗಾವಿ, ವಿಜಾಪುರಗಳಲ್ಲಿ ಜೆಡಿಎಸ್ ಅಭ್ಯರ್ಥಿ, ಬೀದರ್ನಲ್ಲಿ ಜೆಡಿಯು ಮತ್ತು ಎನ್ಸಿಪಿ ಅಭ್ಯರ್ಥಿ, ಬಳ್ಳಾರಿ ಮತ್ತು ಹಾವೇರಿಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಹೆಚ್ಚುವರಿ ಅಭ್ಯರ್ಥಿಗಳ ನಾಮಪತ್ರ ತಿರಸ್ಕರಿಸಲಾಗಿದೆ ಎಂದರು.
ಸಾಮೂಹಿಕ ವಿವಾಹಕ್ಕೆ ಅವಕಾಶವಿಲ್ಲ
ಮದುವೆ, ನಾಮಕರಣ ಸೇರಿದಂತೆ ಯಾವುದೇ ಖಾಸಗಿ ಕಾರ್ಯಕ್ರಮಗಳಿಗೆ ಚುನಾವಣಾಧಿಕಾರಿಗಳ ಅನುಮತಿ ಪಡೆಯುವ ಅವಶ್ಯಕತೆ ಇಲ್ಲ ಎಂದು ಅನಿಲ್ ಕುಮಾರ್ ಝಾ ಸ್ಪಷ್ಟಪಡಿಸಿದ್ದಾರೆ. ಮದುವೆ ಸಮಾರಂಭಕ್ಕೆ ಅನುಮತಿ ನೀಡುವಂತೆ ಸಾಕಷ್ಟು ಕಡೆ ಚುನಾವಣಾಧಿಕಾರಿಗಳ ಕಚೇರಿಗೆ ಲಗ್ನ ಪತ್ರಿಕೆ ಹಿಡಿದು ಜನರು ಬರುತ್ತಿದ್ದಾರೆ. ಆದ್ದರಿಂದ ಈ ಸ್ಪಷ್ಟನೆ ನೀಡಲಾಗಿದೆ. ಆದರೆ, ಸಾಮೂಹಿಕ ವಿವಾಹ ಏರ್ಪಡಿಸಲು ಅವಕಾಶವಿಲ್ಲ ಎಂದು ತಿಳಿಸಿದರು.
ಅಕ್ರಮವಾಗಿ ಸಾಗಿಸುತ್ತಿದ್ದ ಹಣ ವಶ
ಬುಧವಾರ ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 7.5 ಲಕ್ಷ ರೂ. ನಗದು, ವೀರಾಜಪೇಟೆಯಲ್ಲಿ 4 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಗುರುವಾರ ಕೊಡಗು ಜಿಲ್ಲೆಯ ಬೈಲಕುಪ್ಪೆ ಬಳಿ 2.4 ಲಕ್ಷ ರೂ., ಹಾಸನದಲ್ಲಿ 3.2 ಲಕ್ಷ ರೂ. ಸೇರಿದಂತೆ ಒಟ್ಟಾರೆ 2.64 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಅನಿಲ್ ಕುಮಾರ್ ಝಾ ಹೇಳಿದರು.
ಅಕ್ಕಿ,ಬೆಳ್ಳಿ, ಮದ್ಯ ವಶ
ಹಣದ ಜೊತೆಗೆ ಅಕ್ಕಿ, ಬೆಳ್ಳಿ ಮತ್ತು ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅನಿಲ್ ಕುಮಾರ್ ಝಾ ಹೇಳಿದ್ದಾರೆ. ಯಲಹಂಕದಲ್ಲಿ 3.5 ಲಕ್ಷ ಟನ್ ಅಕ್ಕಿ ವಶಪಡಿಸಿಕೊಂಡ ಏಳು ಮಂದಿಯನ್ನು ಬಂಧಿಸಲಾಗಿದೆ. ಧಾರವಾಡ ಜಿಲ್ಲೆಯ ಅಳ್ನಾವರ್ನಲ್ಲಿ 608 ಗ್ರಾಂ ಚಿನ್ನ, 7.7 ಕೆ.ಜಿ. ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಗೌರಿಬಿದನೂರು, ವಿಜಾಪುರ, ಬಳ್ಳಾರಿಗಳಲ್ಲಿ 243 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.