ಕೊರೊನಾ ಕಠಿಣ ರೂಲ್ಸ್ನಿಂದ ಕರ್ನಾಟಕಕ್ಕೆ ಮುಕ್ತಿ
ಬೆಂಗಳೂರು ಜನವರಿ 31: ಕೊರೊನಾ ರೂಲ್ಸ್ನಿಂದ ರಾಜ್ಯಕ್ಕೆ ಇಂದಿನಿಂದ ಮುಕ್ತಿ ಸಿಕ್ಕಿದೆ. ರಾಜ್ಯದಲ್ಲಿ ಇಂದಿನಿಂದ ಹೊಸ ದುನಿಯಾ ಆರಂಭವಾಗಲಿದೆ. ಹೊಸ ವ್ಯಾಪಾರ ವಹಿವಾಟು ಆರಂಭವಾಗಲಿದೆ. ಈವರೆಗೆ ಇದ್ದ 50-50 ರೂಲ್ಸ್ನ್ನು ರಾಜ್ಯ ಸರ್ಕಾರ ತೆರವುಗೊಳಿಸಿದೆ. ಜಿಮ್, ಚಿತ್ರಮಂದಿರಗಳು, ಸ್ವಿಮ್ಮಿಂಗ್ ಹೊರತುಪಡಿಸಿ ಎಲ್ಲಾ ಕ್ಷೇತ್ರಗಳು ಎಂದಿನಂತೆ ವ್ಯಾಪಾರ ವಹಿವಾಟು ಆರಂಭಿಸಲಿವೆ.
ಹೋಟೆಲ್, ಬಾರ್ ಆಂಡ್ ರೆಸ್ಟೋರೆಂಟ್, ಪಬ್ಗಳಿಗರುವ 50% ಅವಕಾಶ ರದ್ದುಗೊಳಿಸಿ ಸಂಪೂರ್ಣ ಭರ್ತಿಗೆ ಅವಕಾಶ ನೀಡಲಾಗಿದೆ. ಇದರಿಂದಾಗಿ ಹೋಟೆಲ್ ಉದ್ಯಮಕ್ಕೆ ದೊಡ್ಡ ಚೇತರಿಕೆ ನೀಡಿದಂತಾಗಿದೆ. ಹೋಟೆಲ್ ಉದ್ಯಮದಾರರ ಬೇಡಿಕೆಗೆ ಸರ್ಕಾರ ಸ್ಪಂದಿಸಿ ನೂರರಷ್ಟು ಆಸನ ಭರ್ತಿಗೆ ಅವಕಾಶ ಮಾಡಿಕೊಟ್ಟಿದೆ. ಜೊತೆಗೆ ಇಂದಿನಿಂದ ನೈಟ್ ಕರ್ಪ್ಯೂ ಕೂಡ ರದ್ದಾಗಲಿದೆ.

ನೈಟ್ಕರ್ಫ್ಯೂ ರದ್ದು
ಕೊರೊನಾ ಕಾರಣದಿಂದ ನೈಟ್ಕರ್ಫ್ಯೂ ಜಾರಿಯಲ್ಲಿತ್ತು. ಆದರೆ ರಾಜ್ಯದಲ್ಲಿ ಇಂದಿನಿಂದ ನೈಟ್ ಕರ್ಫ್ಯೂ ರದ್ದಾಗಲಿದೆ. ರಾತ್ರಿ 10ರಿಂದ ಬೆಳಗ್ಗೆ 5ರವರೆಗೂ ಇದ್ದ ನೈಟ್ ಕರ್ಫ್ಯೂ ಇಂದಿನಿಂದ ರದ್ದಾಗಲಿವೆ. ಇಂದಿನಿಂದ ಹೋಟೆಲ್, ಬಾರ್, ಪಬ್, ರೆಸ್ಟೋರೆಂಟ್ ರಾತ್ರಿ 10 ಗಂಟೆ ಮೇಲೂ ತೆರೆದಿರುತ್ತವೆ. ವಾಹನಗಳ ಸಂಚಾರಕ್ಕೂ ಇಂದಿನಿಂದ ರಾತ್ರಿ ಅವಕಾಶವಿರುತ್ತದೆ.

ಸಂಪೂರ್ಣ ಸೀಟ್ ಭರ್ತಿಗೆ ಅವಕಾಶ
ಇಂದಿನಿಂದ ಬಸ್ಗಳಲ್ಲಿ ಸೀಟಿಂಗ್ ಸಾಮಾರ್ಥ್ಯವನ್ನು ಪೂರ್ತಿಯಾಗಿ ಬಳಸಿಕೊಳ್ಳಬಹುದು. ಬಸ್ಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಯಾಣಿಕರು ಪ್ರಯಾಣ ಮಾಡಬಹುದಾಗಿದೆ. ಕೊರೊನಾ ಕಾರಣದಿಂದ ಇಬ್ಬರು ಕುಳಿತುಕೊಳ್ಳುವ ಸೀಟುಗಳಲ್ಲಿ ಒಬ್ಬ ಪ್ರಯಾಣಿಕ ಕುಳಿತುಕೊಳ್ಳಬೇಕಿತ್ತು. ಆದರೆ ಇಂದಿನಿಂದ ಸರ್ಕಾರ ಬಸ್ಗಳಲ್ಲಿ ಸಂಪೂರ್ಣ ಸೀಟ್ ಭರ್ತಿಗೆ ಅವಕಾಶ ನೀಡಿದೆ.

ರಾಜಧಾನಿಯತ್ತ ಕಾರ್ಮಿಕರ ಆಗಮನ
ಮದುವೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವವರ ಸಂಖ್ಯೆಯನ್ನು ಒಳಾಂಗಣದಲ್ಲಿ ನೂರರಿಂದ ಇನ್ನೂರಕ್ಕೆ, ಹೊರಂಗಣದಲ್ಲಿ ಇನ್ನೂರರಿಂದ ಮುನ್ನೂರಕ್ಕೆ ಮಿತಿಗೊಳಿಸಲಾಗಿದೆ. ಪ್ರವಾಸಿ ತಾಣಗಳಲ್ಲೂ ಮಾಸ್ಕ್ ಕಡ್ಡಾಯಗೊಳಿಸಿ ಮಿತಿ ಸಡಿಲಗೊಳಿಸಲಾಗಿದೆ. ಇನ್ನೂ ಇಂದಿನಿಂದ ಕೊರೊನಾ ರೂಲ್ಸ್ ಸಡಿಲಗೊಳ್ಳುತ್ತಿದ್ದಂತೆ ಬೇರೆ ಬೇರೆ ರಾಜ್ಯಗಳಿಂದ ರಾಜಧಾನಿಗೆ ಕಾರ್ಮಿಕರು ಆಗಮಿಸುತ್ತಿದ್ದಾರೆ. ಮೆಜೆಸ್ಟಿಕ್ನಲ್ಲಿ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಬೆಳ್ಳಂಬೆಳಗ್ಗೆ ಕಾರ್ಮಿಕರು ಬೆಂಗಳೂರಿನತ್ತ ಆಗಮಿಸುತ್ತಾ ಇದ್ದಾರೆ.

ಶಾಲೆಗಳಲ್ಲಿ ಮಾಸ್ಕ್ ಕಡ್ಡಾಯ
ಕೊರೊನಾ ಅಧಿಕವಾಗಿದ್ದ ಬೆಂಗಳೂರಿನಲ್ಲಿ ಶಾಲೆಗಳನ್ನು ಬಂದ್ ಮಾಡಲಾಗಿತ್ತು. ಇಂದಿನಿಂದ ಆಫ್ ಲೈನ್ ಕ್ಲಾಸ್ ಪ್ರಾರಂಭಿಸಲು ಸರ್ಕಾರ ಆದೇಶಿಸಿದೆ. ಇಂದಿನಿಂದ ಒಂದರಿಂದ ಒಂಬತ್ತನೇ ತರಗತಿಗಳು ಆರಂಭವಾಗಲಿವೆ. ಜೊತೆಗೆ ಶನಿವಾರವೂ ಶಾಲೆಗಳು ನಡೆಯಲಿವೆ. ತಜ್ಞರು ಹಾಗೂ ಸಿಎಂ ಜೊತೆಗಿನ ಸಭೆ ಬಳಿಕ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕರ್ಫ್ಯೂ ಇದ್ದ ಕಾರಣ ಶನಿವಾರ ಮತ್ತು ಭಾನುವಾರ ಶಾಲೆ ಕ್ಲೋಸ್ ಮಾಡಲಾಗಿತ್ತು. ಆದರೆ ಈಗ ಶನಿವಾರವೂ ಕ್ಲಾಸ್ ನಡೆಯಲಿವೆ. ಮಕ್ಕಳಿಗೆ ಕೊರೊನಾ ಬಂದರೆ ಶಾಲೆ ಕ್ಲೋಸ್ ಮಾಡುವ ವಿಚಾರ ಡಿಸಿ ಅವರಿಗೆ ಬಿಟ್ಟ ವಿಚಾರವಾಗಿದೆ ಎಂದು ಸರ್ಕಾರ ಹೇಳಿದೆ.

ಪೂಜೆ, ಅರ್ಚನೆ ಅವಕಾಶ
ದೇವಸ್ಥಾನಗಳಿಗೂ ಭಕ್ತರ ಪ್ರವೇಶ ಮಿತಿಯನ್ನು ಸಡಿಲಗೊಳಿಸಲಾಗಿದೆ. ದೇವಸ್ಥಾನಗಳಲ್ಲಿ ಪೂಜೆ ಅರ್ಚನೆಗೆ ಅವಕಾಶ ನೀಡಲಾಗಿದೆ. ಧಾರ್ಮಿಕ ಕ್ಷೇತ್ರಗಳಿಗೆ ಜನ ಆಗಮಿಸಬಹುದು, ಪೂಜೆ, ಅರ್ಚನೆ ಮಾಡಿಸಬಹುದಾಗಿದೆ. ದೇವಸ್ಥಾನಕ್ಕೆ ಬರುವವರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಜೊತೆಗೆ ಸರ್ಕಾರಿ ಕಚೇರಿಗಳಿಗೂ ಪೂರ್ಣ ಪ್ರಮಾಣದ ಅವಕಾಶ ನೀಡಲಾಗಿದೆ. ಆದರೆ ಕೆಲವು ಕ್ಷೇತ್ರಗಳಿಗೆ ಇನ್ನೂ ಅವಕಾಶ ನೀಡಿಲ್ಲ.

ಚಿತ್ರಮಂದಿಗಳಿಗಿದೆ 50-50 ರೂಲ್ಸ್
ಇಂದಿನಿಂದ ಕೆಲ ಕ್ಷೇತ್ರಗಳಿಗೆ ಇದ್ದ 50-50 ರೂಲ್ಸ್ ರದ್ದಾಗಿದೆ. ಆದರೆ ಜಿಮ್, ಚಿತ್ರಮಂದಿರಗಳು, ಸ್ವಿಮ್ಮಿಂಗ್ ಗೆ 50-50 ರೂಲ್ಸ್ ರದ್ದಾಗಿಲ್ಲ. ಹೀಗಾಗಿ ಈ ಬಗ್ಗೆ ನಟ ಶಿವರಾಜಕುಮಾರ್ ಧ್ವನಿ ಎತ್ತಿದ್ದಾರೆ. ಈ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸುವುದಾಗಿ ನಟ ಶಿವರಾಜಕುಮಾರ್ ಹೇಳಿಕೊಂಡಿದ್ದಾರೆ. ಇವತ್ತು ಕೂಡ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಯಲಿದ್ದು. ಥಿಯೇಟರ್ ಗಳಿಗೂ 50-50 ರೂಲ್ಸ್ ತೆರವಾಗುವ ಸಾಧ್ಯತೆ ಇದೆ.












Click it and Unblock the Notifications