ಕೊಪ್ಪಳದಲ್ಲಿ 4 ಲಂಬಾಣಿ ಕುಟುಂಬಗಳಿಗೆ ಬಹಿಷ್ಕಾರ
ಕೊಪ್ಪಳ, ಅಕ್ಟೋಬರ್ 20 : ಆ ಕುಟುಂಬಗಳಿಗೆ ದೇವಾಲಯಕ್ಕೂ ಪ್ರವೇಶವಿಲ್ಲ. ಆ ಕುಟುಂಬದ ಮಕ್ಕಳು ಶಾಲೆಗೂ ಹೋಗಲು ಸಹ ಬಿಡುತ್ತಿಲ್ಲ. ನಮಗೆ ಬಂದಿರೋ ಕಷ್ಟ ಯಾರಿಗೂ ಬರಬಾರದು ಅಂತಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ 4 ಲಂಬಾಣಿ ಕುಟುಂಬಗಳಿಗೆ ತಾಂಡಾದಿಂದ ಸಾಮಾಜಿಕ ಬಹಿಷ್ಕಾರ ಹಾಕಿದ ಘಟನೆ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ದಮ್ಮೂರ ತಾಂಡಾದಲ್ಲಿ ನಡೆದಿದೆ. ತಾಂಡಾದ ನಾರಾಯಣಪ್ಪ ರಾಠೋಡ, ಕೃಷ್ಣಪ್ಪ ರಾಠೋಡ, ರಾಮಪ್ಪ ರಾಠೋಡ,ಹಾಗೂ ಹನಮಪ್ಪ ರಾಠೋಡ ಅವರ ಕುಟುಂಬಗಳಿಗೆ ಬಹಿಷ್ಕಾರ ಹಾಕಲಾಗಿದೆ.

ತಾಂಡಾದ ಹನಮಂತ ಕಾರಬಾರಿ ಎನ್ನುವ ವ್ಯಕ್ತಿ ಶ್ರೀ ಧರ್ಮಸ್ಥಳ ಆಸ್ಪತ್ರೆಯಲ್ಲಿ ಗ್ಯಾಂಗ್ರೀನ್ ಆಗಿ ಮೃತಪಟ್ಟಿರೋ ವಿಚಾರವಾಗಿ ಈ ನಾಲ್ಕು ಕುಟುಂಬದವರಿಗೆ ಬಹಿಷ್ಕಾರ ಹಾಕಲಾಗಿದೆ. ಕಳೆದ ನಾಲ್ಕೈದು ತಿಂಗಳಿಂದ ಬಹಿಷ್ಕಾರಕ್ಕೊಳಗಾಗಿರುವ ಕುಟುಂಬದವರು ಹೊಲದಲ್ಲಿ ವಾಸ ಮಾಡುತ್ತಿದ್ದಾರೆ.
ಹಬ್ಬದ ದಿನವೂ ದೇಗುಲಕ್ಕೆ ಪ್ರವೇಶ ನೀಡುತ್ತಿಲ್ಲ. ಮಕ್ಕಳಿಗೆ ಶಾಲೆಗೆ ಹೋಗೋಲು ಬಿಡುತ್ತಿಲ್ಲ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬಹಿಷ್ಕಾರಕ್ಕೊಳಗಾದ ಕುಟುಂಬದ ಮಹಿಳೆಯರು ದಮ್ಮೂರ ತಾಂಡಾದಲ್ಲಿರೋ ದೇಗುಲಕ್ಕೆ ಬಂದಿದ್ದಾರೆ. ಆಗ ಅವರಿಗೆ ಬೈದು ಕಳುಹಿಸಲಾಗಿದೆ.
ನೊಂದ ಕುಟುಂಬದವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೊರೆ ಹೋಗಿದ್ದಾರೆ. ಯಲಬುರ್ಗಾ ಠಾಣೆಗೆ ದೂರು ಕೊಡಿ ಎಂದು ಕುಟುಂಬ ಎಸ್ಪಿ ಸೂಚಿಸಿದ್ದಾರೆ. ಕುಟುಂಬದವರು ದೂರು ಕೊಡಲು ಸಿದ್ಧರಾಗಿದ್ದಾರೆ. 1ಲಕ್ಷ 20 ಸಾವಿರ ದಂಡ ಕಟ್ಟಿದರೆ ಮಾತ್ರ ಬಹಿಷ್ಕಾರ ಹಿಂಪಡೆಯಲಾಗುತ್ತದೆ ಎಂದು ತಾಂಡಾದ ಹಿರಿಯರು ಹೇಳುತ್ತಿದ್ದಾರೆ.
ಆಧುನಿಕ ಕಾಲದಲ್ಲೂ ಬಹಿಷ್ಕಾರ ಪದ್ಧತಿ ಜೀವಂತವಾಗಿದೆ. ಕುಟುಂಬದವರಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವುದು ವಿಪರ್ಯಾಸದ ಸಂಗತಿಯಾಗಿದೆ. ನೊಂದ ಕುಟುಂಬದವರಿಗೆ ಪೊಲೀಸರು ನ್ಯಾಯ ಕೊಡಿಸುವರೇ ಕಾದು ನೋಡಬೇಕು.












Click it and Unblock the Notifications