3 ಕ್ಷೇತ್ರದ ಉಪ ಚುನಾವಣೆ : ಕಾಂಗ್ರೆಸ್ನಿಂದ ವೀಕ್ಷಕರ ನೇಮಕ
ಬೆಂಗಳೂರು, ಜನವರಿ 18 : ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಆಡಳಿತಾರೂಢ ಕಾಂಗ್ರೆಸ್ ಪಕ್ಷ ತಯಾರಿ ಆರಂಭಿಸಿದೆ. ಹೆಬ್ಬಾಳ, ಬೀದರ್ ಮತ್ತು ದೇವದುರ್ಗ ಕ್ಷೇತ್ರಗಳ ಚುನಾವಣೆಗೆ ಪಕ್ಷ ವೀಕ್ಷಕರನ್ನು ನೇಮಕ ಮಾಡಿದೆ.
ಮೂರು ಕ್ಷೇತ್ರಗಳಿಗೆ ಭೇಟಿ ನೀಡಲಿರುವ ವೀಕ್ಷಕರು ಸ್ಥಳೀಯ ನಾಯಕರೊಂದಿಗೆ ಚರ್ಚೆ ನಡೆಸಿ, ಉಪ ಚುನಾವಣೆ ಅಭ್ಯರ್ಥಿ ಆಯ್ಕೆ, ಚುನಾವಣಾ ಪ್ರಕ್ರಿಯೆಗಳ ಸಿದ್ಧತೆ ಮುಂತಾದ ವಿಚಾರಗಳ ಕುರಿತು ತಿರ್ಮಾನ ಕೈಗೊಳ್ಳಲಿದ್ದಾರೆ. ಫೆ.13ರಂದು ಮೂರು ಕ್ಷೇತ್ರಗಳಲ್ಲಿಯೂ ಮತದಾನ ನಡೆಯಲಿದೆ. [ಉಪ ಚುನಾವಣೆಗೆ ದಿನಾಂಕ ಘೋಷಣೆ]

ಹೆಬ್ಬಾಳ ಕ್ಷೇತ್ರ : ಬೆಂಗಳೂರಿನ ಹೆಬ್ಬಾಳ ಕ್ಷೇತ್ರಕ್ಕೆ ವೀಕ್ಷಕರಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಬಿ.ಎ.ಮೊಹಿದ್ದೀನ್, ತುಮಕೂರು ಸಂಸದ ಮುದ್ದಹನುಮೇಗೌಡ, ಬಿ.ಎಲ್. ಶಂಕರ್, ಎಂ.ಡಿ.ಲಕ್ಷ್ಮೀ ನಾರಾಯಣ,ಎನ್.ಎ.ಬೋಸರಾಜು, ಐವಾನ್ ಡಿಸೋಜಾ, ಡಾ.ಲೋಹಿತ್ ಡಿ.ನಾಯ್ಕರ್ ಅವರನ್ನು ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. [ಹೆಬ್ಬಾಳ ಉಪ ಚುನಾವಣೆ : ಕಾಂಗ್ರೆಸ್ ನಲ್ಲಿ ಟಿಕೆಟ್ ಗೆ ಪೈಪೋಟಿ]
ಬೀದರ್ ಕ್ಷೇತ್ರ : ಬೀದರ್ ಕ್ಷೇತ್ರಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ, ಮಾಜಿ ಸಚಿವೆ ರಾಣಿ ಸತೀಶ್, ಶಾಸಕರಾದ ಇಕ್ಬಾಲ್ ಅಹಮದ್ ಸಡರಗಿ, ಎಚ್.ಆರ್.ಅಲ್ಗೂರು, ಶ್ರೀನಿವಾಸ ಮಾನೆ ಅವರನ್ನು ನೇಮಕ ಮಾಡಲಾಗಿದೆ. [2013ರ ಚುನಾವಣೆ : ಗೆದ್ದವರು, ಸೋತವರು]
ದೇವದುರ್ಗ ಕ್ಷೇತ್ರ : ದೇವದುರ್ಗ ಕ್ಷೇತ್ರಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ಸಣ್ಣ ಕೈಗಾರಿಕಾ ಸಚಿವ ಸತೀಶ್ ಜಾರಕಿಹೊಳಿ, ಚಿತ್ರದುರ್ಗ ಸಂಸದ ಬಿ.ಎನ್.ಚಂದ್ರಪ್ಪ, ಶಾಸಕರಾದ ಎಚ್.ವೈ.ಮೇಟಿ, ಡಾ.ಎ.ಬಿ.ಮಾಲಕ ರೆಡ್ಡಿ, ಸಂತೋಷ್ ಲಾಡ್ ಅವರು ಉಸ್ತುವಾರಿಗಳಾಗಿದ್ದಾರೆ.
ಹೆಬ್ಬಾಳ ಶಾಸಕ ಜಗದೀಶ್ ಕುಮಾರ್ (ಬಿಜೆಪಿ), ಬೀದರ್ ಶಾಸಕ ಗುರುಪಾದಪ್ಪ ನಾಗಮಾರಪಲ್ಲಿ (ಕೆಜೆಪಿ) ಮತ್ತು ದೇವದುರ್ಗ ಶಾಸಕ ವೆಂಕಟೇಶ ನಾಯಕ್ (ಕಾಂಗ್ರೆಸ್) ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಫೆಬ್ರವರಿ 13ರಂದು ಚುನಾವಣೆ ನಡೆಯಲಿದ್ದು, ಫೆ.16ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.












Click it and Unblock the Notifications