ಅನರ್ಹರ ತೀರ್ಪು; ಶಾಸಕರ ಜೊತೆಗಿದ್ದಾರೆ ಉಪ ಮುಖ್ಯಮಂತ್ರಿ
ಬೆಂಗಳೂರು, ನವೆಂಬರ್ 13 : 17 ಶಾಸಕರ ಅನರ್ಹತೆ ಬಗ್ಗೆ ಸುಪ್ರೀಂಕೋರ್ಟ್ ಇಂದು ತೀರ್ಪು ಪ್ರಕಟಿಸಲಿದೆ. ಆಪರೇಷನ್ ಕಮಲದ ರೂವಾರಿ ಎಂದು ಹೇಳಲಾಗುವ ಬಿಜೆಪಿ ನಾಯಕ ಅನರ್ಹ ಶಾಸಕರ ಜೊತೆ ದೆಹಲಿಯಲ್ಲಿದ್ದಾರೆ.
ಬುಧವಾರ ಬೆಳಗ್ಗೆ 10.30ಕ್ಕೆ ಸುಪ್ರೀಂಕೋರ್ಟ್ ಅನರ್ಹ ಶಾಸಕರ ಅರ್ಜಿಯ ತೀರ್ಪನ್ನು ಪ್ರಕಟಿಸಲಿದೆ. ಅನರ್ಹಗೊಂಡಿರುವ ಶಾಸಕರು ಮಂಗಳವಾರವೇ ದೆಹಲಿಗೆ ತಲುಪಿದ್ದಾರೆ. ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ಸಹ ದೆಹಲಿಯಲ್ಲಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಮಧ್ಯಾಹ್ನ 3 ಗಂಟೆ ತನಕ 'ಧವಳಗಿರಿ' ನಿವಾಸದಲ್ಲಿಯೇ ಇರಲಿದ್ದಾರೆ. ದೆಹಲಿಯಲ್ಲಿ ನಡೆಯುವ ಬೆಳವಣಿಗೆ ಬಗ್ಗೆ ಡಾ. ಅಶ್ವತ್ಥ್ ನಾರಾಯಣ ಯಡಿಯೂರಪ್ಪಗೆ ಮಾಹಿತಿಗಳನ್ನು ನೀಡಲಿದ್ದಾರೆ.

14 ಕಾಂಗ್ರೆಸ್ ಮತ್ತು 3 ಜೆಡಿಎಸ್ ಶಾಸಕರು ರಾಜೀನಾಮೆ ನೀಡಿದ ದಿನದಿಂದ ಅವರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ ಡಾ. ಅಶ್ವತ್ಥ್ ನಾರಾಯಣ. ಮುಂಬೈಗೆ ಸಹ ಅವರು ಭೇಟಿ ನೀಡಿದ್ದರು. ಆಪರೇಷನ್ ಕಮಲದ ರೂವಾರಿ ಎನಿಸಿಕೊಂಡಿದ್ದಾರೆ.
ಆನಂದ್ ಸಿಂಗ್ ಹೊರತುಪಡಿಸಿ ಉಳಿದ ಅನರ್ಹ ಶಾಸಕರು ಮಂಗಳವಾರವೇ ದೆಹಲಿ ತಲುಪಿದ್ದಾರೆ. ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಸಹ ರಾತ್ರಿ ದೆಹಲಿ ತಲುಪಿದ್ದಾರೆ. ತೀರ್ಪಿನ ಬಳಿಕ ನಡೆಯಲಿರುವ ಬೆಳವಣಿಗೆಗಳು ಕುತೂಹಲಕ್ಕೆ ಕಾರಣವಾಗಿವೆ.
ಅನರ್ಹ ಶಾಸಕ ಎಚ್. ವಿಶ್ವನಾಥ್ ಮಾಧ್ಯಮಗಳ ಜೊತೆ ಮಾತನಾಡಿದ್ದು, "ವಿಧಾನಸಭೆ ಸ್ಪೀಕರ್, ಸೋ ಕಾಲ್ಡ್ ಬುದ್ದಿಜೀವಿ ರಮೇಶ್ ಕುಮಾರ್ ಅವರು ನೀಡಿರುವ ಆದೇಶದ ಸಿಂಧುತ್ವ ಪ್ರಶ್ನಿಸಿರುವ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನಮ್ಮ ಪರ ತೀರ್ಪು ನೀಡಲಿದೆ ಎಂಬುದೇ ನಿರೀಕ್ಷೆ" ಎಂದು ಹೇಳಿದರು.
ಅನರ್ಹ ಶಾಸಕ ಬಿ. ಸಿ. ಪಾಟೀಲ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, "ಸುಪ್ರೀಂಕೋರ್ಟ್ ಮಧ್ಯಂತರ ಆದೇಶವನ್ನು ಸ್ಪೀಕರ್ ಉಲ್ಲಂಘನೆ ಮಾಡಿದ್ದಾರೆ. ಹಾಗಾಗಿ ನಮ್ಮ ಪರ ತೀರ್ಪು ಬರುತ್ತದೆ ಎಂಬ ಭರವಸೆ ಇದೆ" ಎಂದು ಹೇಳಿದ್ದಾರೆ.












Click it and Unblock the Notifications