ವಿಮಾನದಲ್ಲಿ ಪ್ರಯಾಣ ಮಾಡಿ ಸಂಭ್ರಮಿಸಿದ 15 ಜನ ಅನಾಥ ಮಕ್ಕಳು!
ವಿಮಾನದಲ್ಲಿ ಒಂದು ಸಲನಾದ್ರೂ ಹೋಗಬೇಕು. ಆ ಅನುಭವವನ್ನು ಅನುಭವಿಸಬೇಕು ಎನ್ನುವುದು ಎಲ್ಲರ ಕನಸು. ಅದರಲ್ಲೂ ಮಧ್ಯಮ ವರ್ಗದವರು ಜೀವನದಲ್ಲಿ ಒಮ್ಮೆಯಾದರೂ ನಾವು ವಿಮಾನದಲ್ಲಿ ಪ್ರಯಾಣ ಮಾಡ್ತೀವಾ ಅಂತ ಕನಸು ಕಾಣ್ತಿರ್ತಾರೆ. ಈಗಾಗಲೇ ಯಾರಾದರೂ ವಿಮಾನದಲ್ಲಿ ಹೋಗಿದ್ದರೆ, ವಿಮಾನ ಪ್ರಯಾಣ ಹೆಂಗಿತ್ತು. ಹಾರುವಾಗ ಭಯ ಆಗುತ್ತಾ ಅಂತೆಲ್ಲ ಪ್ರಶ್ನೆ ಮಾಡ್ತಾರೆ. ಇದೀಗ 15 ಜನ ಅನಾಥ ಮಕ್ಕಳಿಗೆ ಮೊದಲ ಬಾರಿ ವಿಮಾನದಲ್ಲಿ ಹಾರಾಡುವ ಅವಕಾಶ ಸಿಕ್ಕಿದ್ದು, ಮಕ್ಕಳು ಕುಣಿದು ಕುಪ್ಪಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮನ ಮಿಡಿಯುವ ಘಟನೆ ನಡೆದಿದೆ. ಹುಬ್ಬಳ್ಳಿಯ ಅನಾಥ ಮಕ್ಕಳಲ್ಲಿ ಆತ್ಮಸ್ಥೆರ್ಯ ಹೆಚ್ಚಿಸುವ ಸಪ್ಪೋಂ ಕೀ ಉಡಾನ್ ಕಾರ್ಯಕ್ರಮಕ್ಕೆ ಹುಬ್ಬಳ್ಳಿಯಲ್ಲಿ ಚಾಲನೆ ನೀಡಲಾಗಿದೆ. ಇದು ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದೆ.

ಕೇಂದ್ರ ಸರ್ಕಾರದ ಸಪ್ಪೋಂ ಕೀ ಉಡಾನ್ ಕಾರ್ಯಕ್ರಮದಡಿ ನಗರದ ಸೇವಾ ಭಾರತಿ ಟ್ರಸ್ಟ್ನ ಅನಾಥ ಹಾಗೂ ನಿರ್ಗತಿಕ 15 ಜನ ಮಕ್ಕಳು ಹಾಗೂ ಇಬ್ಬರು ತಾಯಂದಿರು ಹುಬ್ಬಳ್ಳಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಮೊದಲ ಬಾರಿ ಪ್ರಯಾಣ ಬೆಳೆಸಿದ್ದಾರೆ.
ಈ ಮಕ್ಕಳು ಬೆಂಗಳೂರಿನ ನೆಹರು ಪ್ಲಾನೆಟ್ನಲ್ಲಿ ಭಾನುವಾರ ಆಯೋಜಿಸಿದ್ದ ವಿಜ್ಞಾನ ವಿಷಯ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಸೇವಾ ಭಾರತಿಯಲ್ಲಿ ಆಶ್ರಯ ಪಡೆದು ಸುಂದರ ಬದುಕಿನ ಕನಸು ಕಾಣುತ್ತಿರುವ ಅನಾಥ ಮಕ್ಕಳಲ್ಲಿ ಈ ಬಾನಂಗಳ ಹಾರಾಟ ಹೊಸ ಚೈತನ್ಯ, ಹುಮ್ಮಸ್ಸು ಮೂಡಿಸಿದೆ.
ಮಕ್ಕಳಲ್ಲಿ ಮನೆ ಮಾಡಿದ್ದ ಸಂಭ್ರಮ: ಈ ಮಕ್ಕಳು ಹುಬ್ಬಳ್ಳಿಯಿಂದ ಇದೇ ಮೊದಲ ಬಾರಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಮೊದಲ ಬಾರಿ ವಿಮಾನದಲ್ಲಿ ಹಾರಾಟ ಮಾಡುವುದು ಅವರಲ್ಲಿ ಇನ್ನಿಲ್ಲದ ಸಂತೋಷವನ್ನು ಮೂಡಿಸಿತ್ತು. ವಿಮಾನದಲ್ಲಿ 15 ಜನ ಮಕ್ಕಳು ಪ್ರಯಾಣಿಸಿದ್ದು, ಅವರ ಮುಖದಲ್ಲಿ ಸಂತೋಷ ತುಂಬಿ ತುಳುಕುತ್ತಿತ್ತು. ಈ ಮಕ್ಕಳು ಮೊದಲ ಬಾರಿ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದು, ಕೆಲವರು ಮಕ್ಕಳ ಪ್ರಯಾಣದ ವಿಡಿಯೋ ಹಾಗೂ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕೇಂದ್ರ ಸರ್ಕಾರ ಅನಾಥ ಹಾಗೂ ನಿರ್ಗತಿಕ ಮಕ್ಕಳಿಗಾಗಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಮಕ್ಕಳು ಭಾಗಿಯಾಗಿ ಸಂಭ್ರಮಿಸಿದ್ದಾರೆ. ಬೆಂಗಳೂರಿನ ನೆಹರು ಪ್ಲಾನೆಟ್, ವಿಧಾನಸೌಧ, ಹೈಕೋರ್ಟ್, ಕಬ್ಬನ್ ಪಾರ್ಕ್ ಸೇರಿ ಮತ್ತಿತರ ಪ್ರದೇಶಗಳಿಗೆ ಕೊಂಡೊಯ್ದು ವಿವಿಧ ರೀತಿಯ ತಿಳಿವಳಿಕೆ ನೀಡುವ ಈ ಕಾರ್ಯಕ್ರಮ ನಿಜಕ್ಕೂ ಅನಾಥ ಮಕ್ಕಳ ಬದುಕಿನಲ್ಲಿ ಆಶಾ ಭಾವನೆ ಮತ್ತಷ್ಟು ಹೆಚ್ಚಿಸಿದೆ.
ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಬಿಜೆಪಿ ಅಧ್ಯಕ್ಷತಿಪ್ಪಣ್ಣ ಮಜ್ಜಗಿ, ಉದ್ಯಮಿ ಡಾ.ಎಸ್ ವಿ. ಪ್ರಸಾದ ಇದ್ದರು. ಹುಬ್ಬಳ್ಳಿಯ ರೌಂಡ್ ಟೇಬಲ್-37ರ ಆಶ್ರಯದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಪಾಲಿಕೆ ಮಾಜಿ ಮೇಯರ್ ವೀರಣ್ಣ ಸವಡಿ ಹಾಗೂ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ನೆರವು ನೀಡಿದ್ದಾರೆ. ರೌಂಡ್ ಟೇಬಲ್-37ರ ಅಧ್ಯಕ್ಷೆ ಡಾ. ಅಪೂರ್ವಾ ಪಾಟೀಲ ಹಾಗೂ ಡಾ. ವಿವೇಕ ಪಾಟೀಲ ನೇತೃತ್ವವಹಿಸಿದ್ದರು.












Click it and Unblock the Notifications