ಅಟಲ್ ಭೂಜಲ ಯೋಜನೆ; ಕರ್ನಾಟಕದ 14 ಜಿಲ್ಲೆಗಳು ಆಯ್ಕೆ
ಬೆಂಗಳೂರು, ಡಿಸೆಂಬರ್ 24 : 'ಅಟಲ್ ಭೂಜಲ ಯೋಜನೆ'ಗೆ ಕರ್ನಾಟಕದ 14 ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಕೇಂದ್ರ ಸರ್ಕಾರ ಕರ್ನಾಟಕ ಸೇರಿದಂತೆ ದೇಶದ 8 ರಾಜ್ಯಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ.
ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನವನ್ನು ಕೈಗೊಳ್ಳಲಾಗಿದೆ. ಭೂ-ಜಲ ಸಂಪನ್ಮೂಲ ಸಂರಕ್ಷಣೆ, ಸದ್ಬಳಕೆ ಹಾಗೂ ನಿರ್ವಹಣೆ ಉದ್ದೇಶದಿಂದ 'ಅಟಲ್ ಭೂಜಲ ಯೋಜನೆ' ಜಾರಿಗೊಳಿಸಲಾಗುತ್ತಿದೆ.
ಮುಂದಿನ 5 ವರ್ಷಗಳ ಅವಧಿಯಲ್ಲಿ ಈ ಯೋಜನೆಗಾಗಿ 6 ಸಾವಿರ ಕೋಟಿ ವೆಚ್ಚ ಮಾಡಲು ಸಚಿವ ಸಂಪುಟ ಒಪ್ಪಿಗೆ ಕೊಟ್ಟಿದೆ. ಕೇಂದ್ರ ಸರ್ಕಾರ ಮತ್ತು ವಿಶ್ವಬ್ಯಾಂಕ್ 50:50ರ ಅನುಪಾತದಲ್ಲಿ ಯೋಜನೆಗೆ ಅನುದಾನವನ್ನು ನೀಡಲಿವೆ.

ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಹರ್ಯಾಣ, ಉತ್ತರ ಪ್ರದೇಶ ರಾಜ್ಯಗಳ 8,350 ಗ್ರಾಮಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ಕರ್ನಾಟಕದ 14 ಜಿಲ್ಲೆಗಳನ್ನು ಯೋಜನೆಗಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.
ಅತಿಯಾದ ಅಂತರ್ಜಲ ಬಳಕೆಯಿಂದ ಪ್ಲೋರೈಡ್ಯುಕ್ತ ನೀರಿನ ಸಮಸ್ಯೆ ಎದುರಿಸುತ್ತಿರುವ ರಾಜ್ಯದ 14 ಜಿಲ್ಲೆಗಳ ವಿವಿಧ ತಾಲೂಕುಗಳನ್ನು ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. 1,199 ಗ್ರಾಮ ಪಂಚಾಯಿತಿಗಳಲ್ಲಿ ಯೋಜನೆ ಜಾರಿಯಾಗಲಿದೆ.
ಯಾವ-ಯಾವ ತಾಲೂಕು: ಪಾವಗಡ, ಮಧುಗಿರಿ, ಕೊರಟಗೆರೆ, ಚಿಕ್ಕನಾಯಕನಹಳ್ಳಿ, ಚಿಕ್ಕಬಳ್ಳಾಪುರ, ಚಿಂತಾಮಣಿ, ಗುಡಿಬಂಡೆ, ಗೌರಿಬಿದನೂರು, ಬಾಗೇಪಲ್ಲಿ, ಶಿಡ್ಲಘಟ್ಟ, ಬಂಗಾರಪೇಟೆ, ಮುಳಬಾಗಿಲು, ಶ್ರೀನಿವಾಸಪುರ, ಕನಕಪುರ ಮತ್ತು ಮಾಗಡಿ ಮುಂತಾದ ತಾಲೂಕುಗಳು ಸೇರಿವೆ.
'ಅಟಲ್ ಭೂಜಲ ಯೋಜನೆ' ಅನ್ವಯ ಜಲ ಬಳಕೆದಾರರ ಸಂಘವನ್ನು ರಚನೆ ಮಾಡಲಾಗುತ್ತದೆ. ಅಂತರ್ಜಲ ದತ್ತಾಂಶದ ಸಂಗ್ರಹ ನಡೆಯಲಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಲ ಸುರಕ್ಷೆ ಯೋಜನೆಗಳ ರಚನೆ ಮತ್ತು ಅನಿಷ್ಠಾನ ಮಾಡಲಾಗುತ್ತದೆ.












Click it and Unblock the Notifications