ಖಾದಿಧಾರಿಯ ಪರಿಸರ ಕಾಯಕ, ಜು.9ರಂದು 2ನಿಮಿಷದಲ್ಲಿ 12ಸಾವಿರ ಸಸಿ ನಾಟಿ
ಹಾವೇರಿ, ಜುಲೈ 07 : ರಾಜ್ಯದಲ್ಲಿ ಮಳೆ ಕೊರತೆ ತೀವ್ರವಾಗಿದ್ದು, ಇದಕ್ಕೆ ಅರಣ್ಯ ನಾಶವೇ ಕಾರಣವೆಂಬುದನ್ನು ಅರಿತ ಹಾವೇರಿ ಜಿಲ್ಲೆಯ ಅಗಡಿ ಮಠದ ಸಂತರೊಬ್ಬರು ವೃಕ್ಷ ಅಭಿಯಾನಕ್ಕೆ ಮುಂದಾಗಿದ್ದಾರೆ.
ಬರಗಾಲ ನಿವಾರಣೆ, ಪರಿಸರ ಸಂರಕ್ಷಣೆ, ಮಳೆಗಾಗಿ ಪ್ರಾರ್ಥನೆ ಸೇರಿದಂತೆ 12 ಧಾರ್ಮಿಕ ವಿಶೇಷತೆಗಳ ಹಿನ್ನೆಲೆಗಳಲ್ಲಿ ಅಗಡಿ ಅಕ್ಕಿಮಠದ ಆಶ್ರಯದಲ್ಲಿ ಜುಲೈ 9ರಂದು ಕೆವಲ 2 ನಿಮಿನಿಷದಲ್ಲಿ 12 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಆಯೋಜಿಸಿದ್ದಾರೆ.
ಗಿಡ ನೆಡುವ ಸೆಲ್ಫಿ ಕಳಿಸಿ, ರೋಚಕ ಬಹುಮಾನ ಗೆಲ್ಲಿರಿ!
ಅಂದು ಬೆಳಿಗ್ಗೆ 11 ಗಂಟೆಗೆ ಹಾವೇರಿ ನಗರದ ಮುನಿಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಸಸಿ ನೆಡುವ ಮೂಲಕ ಸಾಲಮರದ ತಿಮ್ಮಕ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಆಗಲೇ ಪೂರ್ವ ತಯಾರಿಯಂತೆ ತಾಲೂಕಿನ 33 ಗ್ರಾಮಗಳಲ್ಲಿ ಏಕ ಕಾಲಕ್ಕೆ 12 ಸಾವಿರ ಸಸಿಗಳನ್ನು ನೆಡಲಾಗುತ್ತದೆ.
ಪರಿಸರ ಜಾತ್ರೆ-2017: ಮಠದ ವತಿಯಿಂದ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಜುಲೈ 4 ರಿಂದ 9ರ ವರೆಗೆ 'ಪರಿಸರ ಜಾತ್ರೆ-2017'ಎಂಬ ಹೆಸರಿನಲ್ಲಿ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
12 ಧಾರ್ಮಿಕ ವಿಶೇಷತೆಗಳ ಹಿನ್ನೆಲೆಯಲ್ಲಿ ತಾಲೂಕಿನ ಆಯ್ದ 33 ಗ್ರಾಮಗಳಲ್ಲಿ ಒಟ್ಟು 12 ಸಾವಿರ ಸಸಿಗಳನ್ನು ಎರಡೇ ನಿಮಿಷದಲ್ಲಿ ನೆಡುವ ಮೂಲಕ ಹೊಸ ದಾಖಲೆ ನಿರ್ಮಿಸಲು ಉದ್ದೇಶಿಸಲಾಗಿದೆ.
ಬಸವ ಸಸಿ : ಜುಲೈ 9ರಂದು ನೆಡುವ ಸಸಿಗಳಿಗೆ ಕೂಡಲ ಸಂಗಮದಿಂದ ತರಿಸಲಾದ ಪವಿತ್ರ ನೀರಿನಿಂದ ಸಿಂಪಡಿಸಿ ಅವುಗಳಿಗೆ 'ಬಸವ ಸಸಿ'ಎಂದು ನಾಮಕರಣ ಮಾಡಲಾಗಿದೆ.
ಸಂಜೆ ವಿಶೇಷ ಕಾರ್ಯಕ್ರಮ: ಸಸಿ ನೆಡುವ ಕಾರ್ಯಕ್ರಮದ ನಂತರ ಸಂಜೆ 4ಗಂಟೆಗೆ ಸಭಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಾಲುಮರದ ತಿಮ್ಮಕ್ಕ ಅವರನ್ನು ವಿವಿಧ ಜಾನಪದ ಕಲಾತಂಡಗಳೊಂದಿಗೆ ಕರೆತರಲಾಗುವುದು ಎಂದು ಸಸಿ ನೆಡುವ ಕಾಯಕ್ರಮದ ರೂವಾರಿ ಗುರುಲಿಂಗ ಸ್ವಾಮೀಜಿ ತಿಳಿಸಿದ್ದಾರೆ.
ಈ ಸಮಾರಂಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಬಸವ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಅರವಿಂದ ಜತ್ತಿ, ಚಲನಚಿತ್ರ ನಟ ಚೇತನ್, ಕಿರುತೆರೆ ನಟರಾದ ಸಿದ್ಧಾರ್ಥ ಹಾಗೂ ಸಾನ್ವಿ, ಚಲನಚಿತ್ರ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್, ಸಾಹಿತಿ ರಂಜಾನ್ ದರ್ಗಾ, ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ, ಸಂಸದ ಶಿವಕುಮಾರ ಉದಾಸಿ, ಶಾಸಕ ಬಸವರಾಜ ನೀಲಣ್ಣನವರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದೂ ಅವರು ತಿಳಿಸಿದರು.