ಕರ್ನಾಟಕ ವಿಧಾನಸಭೆ ಚುನಾವಣೆಗೆ ಶಿವಸೇನೆ ಅಭ್ಯರ್ಥಿಗಳ ಸ್ಪರ್ಧೆ?
ಕಲಬುರಗಿ, ನವೆಂಬರ್ 2 : ಮಹಾರಾಷ್ಟ್ರದಲ್ಲಿ ಶಕ್ತಿಶಾಲಿಯಾಗಿರುವ ಶಿವಸೇನೆ 2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ. ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಶಿವಸೇನೆ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 'ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಕಾರ್ಯಕರ್ತರು ಮತ್ತು ಪ್ರಮುಖರು ಬಿಜೆಪಿಯನ್ನು ಸಂಪರ್ಕಿಸುತ್ತಿದ್ದೇವೆ. ಆದರೆ, ಸೌಜನ್ಯಕ್ಕೂ ನಮ್ಮನ್ನು ಸಂಪರ್ಕಿಸಿಲ್ಲ' ಎಂದು ದೂರಿದರು.

'ಬಿಜೆಪಿ ಪಕ್ಷ ಸ್ಪರ್ಧಿಸಲು ನಮಗೆ ಅವಕಾಶ ನೀಡದಿದ್ದರೆ ಬಿಜೆಪಿಗೆ ಪರ್ಯಾಯವಾಗಿ ಶಿವಸೇನೆಯನ್ನು ರಾಜ್ಯಕ್ಕೆ ಕರೆತರಲು ನಿರ್ಧಿಸಲಾಗಿದೆ. ಚುನಾವಣೆಯಲ್ಲಿಯೇ ಬಿಜೆಪಿ ನಾಯಕರಿಗೆ ಉತ್ತರ ನೀಡುತ್ತೇವೆ' ಎಂದು ಹೇಳಿದರು.
'ಶಿವಸೇನೆ ಜೊತೆಗೆ ಈಗಾಗಲೇ 2 ಸುತ್ತಿನ ಮಾತುಕತೆ ನಡೆಸಲಾಗಿದೆ. ಈ ಮಾತುಕತೆ ಫಲ ನೀಡಿದ್ದು, ಮುಂಬೈಗೆ ಬರಲು ಸೂಚನೆ ಕೊಟ್ಟಿದ್ದಾರೆ. ಅಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ. ಒಪ್ಪಿಗೆ ಸಿಕ್ಕರೆ 100 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ' ಎಂದರು.
'ಚಿಕ್ಕಮಗಳೂರು, ಶೃಂಗೇರಿ, ವಿಜಯಪುರ, ಬೆಳಗಾವಿ ಉತ್ತರ, ತೆರದಾಳ ಕ್ಷೇತ್ರಗಳ ಪೈಕಿ ಒಂದರಲ್ಲಿ ಮುಂದಿನ ಚುನಾವಣೆಗೆ ನಾನು ಕಣಕ್ಕಿಳಿಯುತ್ತೇನೆ. ನವೆಂಬರ್ 10ರಂದು ಮುಂಬೈನಲ್ಲಿ ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ' ಎಂದು ತಿಳಿಸಿದರು.












Click it and Unblock the Notifications