ಮುಷ್ಕರ; ಕೆಲಸಕ್ಕೆ ಬಂದ ನೌಕರರಿಗೆ ಮಾರ್ಚ್ ತಿಂಗಳ ವೇತನ
ಕಲಬುರಗಿ, ಏಪ್ರಿಲ್ 12; ಕರ್ನಾಟಕದಲ್ಲಿ ನಾಲ್ಕು ಸಾರಿಗೆ ನಿಗಮಗಳ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ 6ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರಿ ಬಸ್ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಮುಷ್ಕರ ನಡೆಸುತ್ತಿರುವ ನೌಕರರ ಮಾರ್ಚ್ ತಿಂಗಳ ವೇತನವನ್ನು ತಡೆ ಹಿಡಿಯಲಾಗಿದೆ. ಮುಷ್ಕರದ ನಡುವೆಯೂ ಕೆಲವು ನೌಕರರು ಸ್ವಯಂ ಪ್ರೇರಿತವಾಗಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಅಂತಹವರಿಗೆ ವೇತನವನ್ನು ನೀಡಲಾಗಿದೆ.
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಕೂರ್ಮರಾವ್ ಈ ಕುರಿತು ಮಾಹಿತಿ ನೀಡಿದ್ದಾರೆ. "ರಸ್ತೆ ಸಾರಿಗೆ ನೌಕರರ ಮುಷ್ಕರ ಮತ್ತು ಸಹ ಸಿಬ್ಬಂದಿಗಳ ಜೀವ ಬೆದರಿಕೆಯ ಹೊರತಾಗಿ ಕರ್ತವ್ಯಕ್ಕೆ ಹಾಜರಾಗಿ ಬಸ್ ಕಾರ್ಯಾಚರಣೆ ಮಾಡಿ ಸಾರ್ವಜನಿಕ ಸೇವೆಯ ಬದ್ಧತೆ ತೋರಿದ ಸಂಸ್ಥೆಯ ಸಿಬ್ಬಂದಿಗಳಿಗೆ ಮಾರ್ಚ್ ತಿಂಗಳ ವೇತನ ಪಾವತಿಗೆ ಆದೇಶಿಸಿದೆ" ಎಂದು ಹೇಳಿದ್ದಾರೆ.

"ಮುಷ್ಕರಕ್ಕೆ ಪ್ರಚೋದನೆ ಮತ್ತು ಕರ್ತವ್ಯನಿರತ ಸಿಬ್ಬಂದಿಗೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಕೊಪ್ಪಳ ಹಾಗೂ ಕಲಬುರಗಿ ವಿಭಾಗದ ಕೆಲ ಸಿಬ್ಬಂದಿಗಳ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ" ಎಂದು ತಿಳಿಸಿದ್ದಾರೆ.
ಮುಷ್ಕರದ ನಡುವೆಯೂ 436 ಖಾಸಗಿ ಬಸ್, 258 ಆಂಧ್ರಪ್ರದೇಶ ಮತ್ತು ತೆಲಂಗಾಣಾ ಸಾರಿಗೆ ಸಂಸ್ಥೆಯ ವಾಹನಗಳು ಹಾಗೂ 3201 ಇತರೆ ವಾಹನಗಳನ್ನು ಬಸ್ ನಿಲ್ದಾಣದ ಮೂಲಕ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸಿಬ್ಬಂದಿಗಳ ಅನುಕೂಲಕ್ಕಾಗಿ ಕಾರ್ಯನಿರತ ಸ್ಥಳಗಳಲ್ಲಿ ಕೋವಿಡ್ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ.
ಭಾನುವಾರ ಮುಷ್ಕರದಲ್ಲಿ ನಿರತ ಸಿಬ್ಬಂದಿಗಳ ಮನವೊಲಿಸಿದ ಪರಿಣಾಮ ಸಂಸ್ಥೆಯ ಹೊಸಪೇಟೆ ವಿಭಾಗದ ಹಡಗಲಿ ಘಟಕದಲ್ಲಿ ಶೇ 90, ಹಗರಿಬೊಮ್ಮನಳ್ಳಿಯಲ್ಲಿ ಶೇ 62ರಷ್ಟು ವಾಹನಗಳು ರಸ್ತೆಗೆ ಇಳಿದಿವೆ.
ಹೊಸಪೇಟೆ ವಿಭಾಗದ 6 ಘಟಕದಿಂದ ಶೇ 56ರಷ್ಟು ಬಸ್ ಕಾರ್ಯಾಚರಣೆ ನಡೆಸಿವೆ. ಬಳ್ಳಾರಿ ಘಟಕ-1ರಲ್ಲಿ ಶೇ 53 ಬಸ್ ರಸ್ತೆಗೆ ಇಳಿದಿವೆ. ಸಂಸ್ಥೆಯ 9 ವಿಭಾಗದಲ್ಲಿ ಶನಿವಾರ ಶೇ 18ರಷ್ಟು ಬಸ್ ಕಾರ್ಯಾಚರಣೆ ನಡೆಸಿವೆ.
22.50 ಕೋಟಿ ಆದಾಯ ಕೊರತೆ : ಸಾರಿಗೆ ನೌಕರರ ಮುಷ್ಕರದಿಂದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಇಲ್ಲಿಯವರೆಗೆ 22.50 ಕೋಟಿ ರೂ. ಆದಾಯದ ಕೊರತೆಯಾಗಿದೆ. ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ನೌಕರರಿಗೆ ಮನವಿ ಮಾಡಲಾಗಿದೆ.












Click it and Unblock the Notifications