ಕರ್ನಾಟಕದ ಈ ವೃದ್ಧಾಶ್ರಮದಲ್ಲಿ ಒಬ್ಬರಿಗೂ ಕೊವಿಡ್-19 ಭೀತಿಯಿಲ್ಲ!
ಕಲಬುರಗಿ, ಅಕ್ಟೋಬರ್.05: ಕೊರೊನಾವೈರಸ್ ಸೋಂಕಿನ ಭೀತಿಯಲ್ಲಿ ಇಡೀ ಜಗತ್ತಿಗೆ ಜಗತ್ತೇ ತತ್ತರಿಸಿ ಹೋಗಿದೆ. ಭಾರತದಲ್ಲಿ ಕೊವಿಡ್-19 ಪ್ರಕರಣಗಳ ಸಂಖ್ಯೆ 66 ಲಕ್ಷದ ಗಡಿ ದಾಟಿದೆ. ಕರ್ನಾಟಕದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 6 ಲಕ್ಷಕ್ಕಿಂತ ಹೆಚ್ಚಿದೆ.
ಇದೇ ಕರ್ನಾಟಕದ ಕಲಬುರಗಿಯಲ್ಲಿರುವ ಒಂದು ವೃದ್ಧಾಶ್ರಮದಲ್ಲಿ ಇದುವರೆಗೂ ಒಂದೇ ಒಂದು ಸೋಂಕಿತ ಪ್ರಕರಣ ಪತ್ತೆಯಾಗಿಲ್ಲ ಎಂಬುದು ಹುಬ್ಬೇರಿಸುವಂತೆ ಮಾಡಿದೆ. ನಗರದ ಮಹಾದೇವಿ ತಾಯಿ ಮಹಿಳಾ ವಿದ್ಯಾ ವರ್ಧಕ ಸಂಘ ಎಂಬ ವೃದ್ಧಾಶ್ರಮದಲ್ಲಿ ಈವರೆಗೂ ಒಬ್ಬೇ ಒಬ್ಬರಿಗೂ ಕೊವಿಡ್-19 ಸೋಂಕು ಅಂಟಿಕೊಂಡಿಲ್ಲ ಎಂದು ತಿಳಿದು ಬಂದಿದೆ.
ಕರ್ನಾಟಕದಲ್ಲಿ ಒಂದೇ ದಿನ 10145 ಮಂದಿಗೆ ಕೊವಿಡ್-19
ಕೊರೊನಾವೈರಸ್ ಮಹಾಮಾರಿಯಿಂದ ವೃದ್ಧರಿಗೆ ಮತ್ತು ಮಕ್ಕಳಿಗೆ ಹೆಚ್ಚು ಆಪಾಯವಿರುವ ಬಗ್ಗೆ ಮೊದಲಿನಿಂದಲೂ ಎಚ್ಚರಿಕೆ ನೀಡುತ್ತಿದೆ. ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಿರುವ ವೃದ್ಧಾಶ್ರಮದ ಆಡಳಿತ ಮಂಡಳಿ ಮತ್ತು ಮುಖ್ಯಸ್ಥರು ಕೊವಿಡ್-19 ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಶಿಷ್ಟಾಚಾರವನ್ನು ಪಾಲನೆ ಮಾಡುತ್ತಿದ್ದಾರೆ.
60 ವರ್ಷಕ್ಕಿಂತ ಮೇಲ್ಪಟ್ಟವರೇ ಹೆಚ್ಚಾಗಿದ್ದಾರೆ
ಕಲಬುರಗಿಯಲ್ಲಿರುವ ಮಹಿಳಾ ವಿದ್ಯಾ ವರ್ಧಕ ಸಂಘ ಎಂಬ ವೃದ್ಧಾಶ್ರಮವನ್ನು ಕಳೆದ 25 ವರ್ಷಗಳಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಪ್ರಸ್ತುತ ನಮ್ಮ ವೃದ್ಧಾಶ್ರಮದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರೇ 30ಕ್ಕೂ ಹೆಚ್ಚು ಜನರಿದ್ದಾರೆ. ಇವರ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ವೃದ್ಧಾಶ್ರಮದಲ್ಲಿ ಆರಂಭದಿಂದಲೂ ಶಿಸ್ತುಕ್ರಮಗಳನ್ನು ಅನುಸರಿಸಲಾಗುತ್ತಿತ್ತು ಎಂದು ವೃದ್ಧಾಶ್ರಮದ ಉಸ್ತುವಾರಿ ವಹಿಸಿರುವ ಸೂಪರಿಟೆಂಡೆಂಟ್ ನೀಲಾಂಬಿಕಾ ಅವರು ಎಎನ್ಐಗೆ ತಿಳಿಸಿದ್ದಾರೆ.
ವೃದ್ಧಾಶ್ರಮದಿಂದ ಹೊರ ಹೋಗಲು ಅವಕಾಶವಿಲ್ಲ
ಪ್ರತಿನಿತ್ಯ ವದ್ಧಾಶ್ರಮದಲ್ಲಿರುವ ಪ್ರತಿಯೊಬ್ಬ ಸದಸ್ಯರಿಗೂ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಕೊರೊನಾವೈರಸ್ ಸೋಂಕಿನ ಭೀತಿ ಎದುರಾದ ದಿನದಿಂದ ಇಂದಿನವರೆಗೂ ಅನಗತ್ಯವಾಗಿ ಯಾರೊಬ್ಬರನ್ನು ವೃದ್ಧಾಶ್ರಮದಿಂದ ಹೊರಗೆ ಕಳುಹಿಸದಂತೆ ಮುನ್ನೆಚ್ಚರಿಕೆ ವಹಿಸಿದ್ದೇವೆ. ಇದರಿಂದ ಕೊವಿಡ್-19 ಸೋಂಕು ಹರಡದಂತೆ ತಡೆಯಲು ಸಾಧ್ಯವಾಗಿದೆ ಎನ್ನುತ್ತಾರೆ ವೃದ್ಧಾಶ್ರಮದ ಸೂಪರಿಟೆಂಡೆಂಟ್ ನೀಲಾಂಬಿಕಾ.
ವೃದ್ಧಾಶ್ರಮಕ್ಕೆ ಪ್ರತಿನಿತ್ಯ ವೈದ್ಯರ ಭೇಟಿ ಮತ್ತು ಪರೀಕ್ಷೆ
ಇನ್ನು, ಮಹಿಳಾ ವಿದ್ಯಾ ವರ್ಧಕ ಸಂಘ ಎಂಬ ವೃದ್ಧಾಶ್ರಮದಲ್ಲಿರುವ ವ್ಯವಸ್ಥೆಯ ಬಗ್ಗೆ ಅಲ್ಲಿನ ನಿವಾಸಿ ಬಾಸುಮ್ ಎಂಬುವವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. "ಪ್ರತಿನಿತ್ಯ ನಮ್ಮ ವೃದ್ಧಾಶ್ರಮಕ್ಕೆ ವೈದ್ಯರು ಭೇಟಿ ನೀಡುತ್ತಾರೆ. ಪ್ರತಿಯೊಬ್ಬರ ಆರೋಗ್ಯದ ಮೇಲೆ ನಿಗಾ ವಹಿಸುವ ವೈದ್ಯರು ವೈದ್ಯಕೀಯ ಪರೀಕ್ಷೆಗಳನ್ನು ನಡೆಸುತ್ತಿರುತ್ತಾರೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ 6 ಲಕ್ಷ ದಾಟಿದ ಕೊವಿಡ್-19 ಕೇಸ್
ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 640661ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲೇ 10145 ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ. ರಾಜ್ಯದಲ್ಲಿ ಒಂದೇ ದಿನ ಕೊರೊನಾವೈರಸ್ ಸೋಂಕಿಗೆ 67 ಜನರು ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 9286ಕ್ಕೆ ಏರಿಕೆಯಾಗಿದೆ. ಕೊವಿಡ್-19 ಸೋಂಕಿತ ಪ್ರಕರಣ ಸಂಬಂಧ ರಾಜ್ಯ ಆರೋಗ್ಯ ಮತ್ತು ಕುಟುಂಬ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಕೊರೊನಾವೈರಸ್ ಒಟ್ಟು 640661 ಸೋಂಕಿತ ಪ್ರಕರಣಗಳ ಪೈಕಿ 515782 ಸೋಂಕಿತರು ಗುಣಮುಖರಾಗಿದ್ದಾರೆ. 115574 ಸಕ್ರಿಯ ಪ್ರಕರಣಗಳಿವೆ ಎಂದು ತಿಳಿದು ಬಂದಿದೆ. ಕಳೆದ 24 ಗಂಟೆಗಳಲ್ಲಿ 7287 ಕೊವಿಡ್-19 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.