ಕಲಬುರಗಿಗೆ ಬಂದರೂ ಖರ್ಗೆ ಹೆಸರೆತ್ತಲಿಲ್ಲ ಮೋದಿ, ಕಾರಣ ಏನಿರಬಹುದು?
Recommended Video
ಕಲಬುರಗಿ, ಮಾರ್ಚ್ 06: ನರೇಂದ್ರ ಮೋದಿ ಅವರು ಇಂದು ಕರ್ನಾಟಕಕ್ಕೆ ಬಂದಿದ್ದರು. ಅವರ ಈ ಆಗಮನಕ್ಕೆ ಮುನ್ನಾ ಈ ಭೇಟಿ ಬಹಳ ಚರ್ಚೆಗೆ ಕಾರಣವಾಗಿತ್ತು. ಮಲ್ಲಿಕಾರ್ಜುನ ಖರ್ಗೆ ಕ್ಷೇತ್ರದಲ್ಲಿ ಸಮಾವೇಶ ಎಂಬುದು ಕುತೂಹಲಕ್ಕೆ ಮೊದಲ ಕಾರಣವಾಗಿತ್ತು.
ಆದರೆ ಇಂದು ನಡೆದ ಸಮಾವೇಶದಲ್ಲಿ ಮೋದಿ ಅವರು ಕಾಂಗ್ರೆಸ್ನ ಹಿರಿಯ ನಾಯಕ ಖರ್ಗೆ ಬಗ್ಗೆ ತುಟಿ ಬಿಚ್ಚಿಲ್ಲದೇ ಇರುವುದು ರಾಜ್ಯ ಬಿಜೆಪಿಗೆ ಮಾತ್ರವಲ್ಲ ಸ್ವತಃ ಕಾಂಗ್ರೆಸ್ಗೂ ಆಶ್ಚರ್ಯ ತಂದಿರಲಿಕ್ಕೂ ಸಾಕು.
ಕುಮಾರಸ್ವಾಮಿ ರಿಮೋಟ್ ಕಂಟ್ರೋಲ್ ಸಿಎಂ : ಮೋದಿ
ಈ ಲೋಕಸಭಾ ಚುನಾವಣೆಯಲ್ಲಿ ಖರ್ಗೆ ಅವರನ್ನು ಬಗ್ಗುಬಡಿಯಲೆಂದೇ ಬಿಜೆಪಿಯು ಖರ್ಗೆ ಅವರ ಕ್ಷೇತ್ರ ಕಲಬುರಗಿಯಲ್ಲಿ ಮೋದಿ ಅವರ ಸಮಾವೇಶ ಆಯೋಜಿಸಿದೆ ಎನ್ನಲಾಗಿತ್ತು. ಖರ್ಗೆ ಹಾಗೂ ಅವರ ಮಗ ಪ್ರಿಯಾಂಕ್ ಖರ್ಗೆ ವಿರುದ್ಧ ಮೋದಿ ಬೆಂಕಿ ಉಗುಳಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು ಆದರೆ ಅದೆಲ್ಲವೂ ಸುಳ್ಳಾಗಿದೆ.
ದೊಡ್ಡ ರಾಜಕೀಯ ಹೇಳಿಕೆಗಳು ಇಲ್ಲ
ಮೋದಿ ಅವರ ಇಂದಿನ ಭಾಷಣದಲ್ಲಿ, ಕುಮಾರಸ್ವಾಮಿ ಅವರನ್ನು 'ರಿಮೋಟ್ ಕಂಟ್ರೋಲ್ ಸಿಎಂ' ಎಂದಿದ್ದು ಹೊರತುಪಡಿಸಿದರೆ ಗುರುತರವಾದ ರಾಜಕೀಯ ಹೇಳಿಕೆಗಳು ಕೇಳಲು ಸಿಗಲಿಲ್ಲ. ಮಹಾಘಟಬಂಧನ್ ಬಗ್ಗೆ ಮೋದಿ ಹಿಂದೆ ಹೇಳಿದ್ದನ್ನೆ ಇಂದು ಮತ್ತೆ ಹೇಳಿದರು. ಇದು ಸ್ವತಃ ಬಿಜೆಪಿಗೆ ನಿರಾಸೆ ಉಂಟು ಮಾಡಿದೆ.
ದಲಿತ ವಿರೋಧಿ ಪಟ್ಟಕ್ಕೆ ಹೆದರಿದರೆ?
ಖರ್ಗೆ ಅವರ ವಿರುದ್ಧ ಮಾತನಾಡಿದರೆ ದಲಿತ ವಿರೋಧಿ ಪಟ್ಟ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಭೀತಿಯಿಂದ ಮೋದಿ ಅವರು ಖರ್ಗೆ ವಿರುದ್ಧ ಮಾತನಾಡಲು ಹಿಂಜರಿದರು ಎಂದು ವಿಶ್ಲೇಷಿಸಲಾಗುತ್ತಿದೆ. ಇದು ಸತ್ಯಕ್ಕೆ ಹತ್ತಿರವಾಗಿಯೂ ಇದೆ. ಬಿಜೆಪಿಗೆ ದಲಿತ ವಿರೋಧಿ ಎಂಬ ಪಟ್ಟ ಅದು ಹೇಗೋ ಅಂಟಿಕೊಂಡು ಬಿಟ್ಟಿದೆ. ಅದರಿಂದ ಹೊರಬರುವ ಭಗೀರತ ಪ್ರಯತ್ನದಲ್ಲಿ ಬಿಜೆಪಿ ಇದೆ. ಹಾಗಾಗಿ ರಾಜ್ಯದ ದಲಿತ ನಾಯಕ ಖರ್ಗೆ ಅವರನ್ನು ದಾಳಿಗೆ ಗುರಿ ಮಾಡಿಕೊಳ್ಳದಿರಲು ಮೋದಿ ಅವರು ನಿರ್ಧರಿಸಿದಂತಿದೆ.
ಇದೇ ನನ್ನ ಕೊನೆಯ ಚುನಾವಣೆ : ಮಲ್ಲಿಕಾರ್ಜುನ ಖರ್ಗೆ
ಮುಂಚೆ ಖರ್ಗೆ ಅವರನ್ನು ಟೀಕಿಸಿದ್ದರು
ಈ ಮುಂಚೆಯೂ ಮೋದಿ ಅವರು ದಲಿತ ನಾಯಕರ ಬಗ್ಗೆ ಮಾತನಾಡುವಾಗ ರಕ್ಷಣಾತ್ಮಕ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ರಾಜ್ಯಕ್ಕೆ ಬಂದಾಗ ಖರ್ಗೆ ವಿರುದ್ಧ ಟೀಕಾ ಪ್ರಹಾರಗಳನ್ನು ಅವರು ಮಾಡಿದ್ದರು. ಆದರೆ ಈ ಬಾರಿ ಖರ್ಗೆ ಉಲ್ಲೇಖವೇ ಮಾಡದೆ ಭಾಷಣ ಮುಗಿಸಿದ್ದು ಆಶ್ಚರ್ಯ ತಂದಿರುವ ವಿಷಯ.
ಮಲ್ಲಿಕಾರ್ಜುನ ಖರ್ಗೆ ಸೋಲಿಸಲು ಒಂದಾದ ಮೂವರು ನಾಯಕರು!
ಸ್ಥಳೀಯತೆಗೆ ಭಾಷಣದಲ್ಲಿ ಒತ್ತು ಕೊಡುವ ಮೋದಿ
ಮೋದಿ ಅವರು ಎಲ್ಲಿಯೇ ಭಾಷಣ ಮಾಡಲಿ ಆ ನೆಲದ ಬಗ್ಗೆ, ಅಲ್ಲಿನ ಸ್ಥಳೀಯ ರಾಜಕಾರಣದ ಬಗ್ಗೆ ಉಲ್ಲೇಖ ಮಾಡಿಯೇ ಮಾಡುತ್ತಾರೆ. ಸ್ಥಳೀಯ ರಾಜಕಾರಣಿ ವಿರೋಧ ಪಕ್ಷದವರಾದರೆ ಅವರಿಗೆ ವ್ಯಂಗ್ಯದ ಮೊನಚು ತಿವಿಯುವುದು ಮರೆಯುವುದಿಲ್ಲ. ಆದರೆ ಇಂದು ಹಾಗೆ ಆಗಲಿಲ್ಲ.
'ರಿಮೋಟ್ ಕಂಟ್ರೋಲ್ ಸಿಎಂ' ಎಂದ ಮೋದಿಯ ಕಾಲೆಳೆದ ಸಿದ್ದರಾಮಯ್ಯ
ಕೇಂದ್ರದ ಸಾಧನೆಗಳನ್ನು ಹೇಳಿದ ಮೋದಿ
ಮೋದಿ ಅವರ ಇಂದಿನ ಭಾಷಣದಲ್ಲಿ ವಿರೋಧಿಗಳನ್ನು ಹಣಿಯುವುದಕ್ಕಿಂತಲೂ ಹೆಚ್ಚು ಕೇಂದ್ರದ ಸಾಧನೆಗಳನ್ನು ಜನರಿಗೆ ತಲುಪಿಸುವುದಕ್ಕೆ ಹೆಚ್ಚು ಆದ್ಯತೆಯನ್ನು ನೀಡಿದ್ದರು. ಚುನಾವಣೆ ಸಮೀಪದಲ್ಲಿರುವುದರಿಂದ ಇದು ಹೆಚ್ಚು ಅಗತ್ಯ ಎಂದು ಮೋದಿ ಅವರು ಮನಗಂಡಂತಿದೆ, ಅವರ ಇತ್ತೀಚಿಗಿನ ಬಹುತೇಕ ಭಾಷಣಗಳಲ್ಲಿ ಕೇಂದ್ರದ ಸಾಧನೆಯ ಬಗೆಗಿನ ಮಾತುಗಳೇ ಹೆಚ್ಚಾಗಿರುತ್ತವೆ. ಇದು ಧನಾತ್ಮಕ ರಾಜಕೀಯದ ಹೌದು.