ಕಲಬುರಗಿಯಲ್ಲಿ ಮಳೆ-ಚಳಿಯ ಜುಗಲ್ ಬಂದಿ
ಕಲಬುರಗಿ, ಸೆಪ್ಟೆಂಬರ್ 15: ಅಂತೂ ಒಳ್ಳೆ ಮಳೆ ಆಗ್ತಿದೆ. ವಿಜಯಪುರ ಜಿಲ್ಲೆಯ ತಿಡಗುಂಡಿಯಲ್ಲಿ ಹತ್ತು ಸೆಂ.ಮೀ, ರಾಯಚೂರಿನ ದೇವದುರ್ಗದಲ್ಲಿ ಒಂಬತ್ತು ಸೆಂ.ಮೀ, ಇಂಡಿಯಲ್ಲಿ 9, ಯಾದಗಿರಿಯ ಕೆಂಭಾವಿ, ಕ್ವಾಡಮಟ್ಟಿಯಲ್ಲಿ 8, ದೇವರಹಿಪ್ಪರಗಿ, ಯಡ್ರಾಮಿ ಹಾಗೂ ಹಯ್ಯಾಳದಲ್ಲಿ 7 ಸೆಂ.ಮೀ ಮಳೆಯಾಗಿದೆ.
ಇನ್ನು ಕಲಬುರಗಿ ಎಂದ ಕೂಡಲೇ ದೂರದ ಬೆಂಗಳೂರಿನವರು ಅಲ್ಲಿಯೇ ಬೆವರುತ್ತಾರೆ. ಬಿಸಿಲುಗಾಲದ ಕತೆಯನ್ನು ಕೇಳಿ ಅವರು ಅಲ್ಲಿಯೇ ಬೆಚ್ಚಿಬೀಳುತ್ತಾರೆ. ಆದರೆ ಯಾವುದಾದರೂ ನೆಪ ಮಾಡಿಕೊಂಡು ಒಂದು ದಿನದ ಮಟ್ಟಿಗೆ ಇಲ್ಲಿಗೆ ಬಂದರೆ, ಅವರು ಬೆಚ್ಚನೆಯ ಉಡುಪು ತೊಡಬೇಕು. ಕೈಯಲ್ಲಿ ಛತ್ರಿ ಹಿಡಿಯಬೇಕು.[ಬೀದರ್, ಕಲಬುರಗಿಯಲ್ಲಿ ನಿರಂತರ ಮಳೆ, ಜನತೆ ತತ್ತರ]
ಕಾರಣ, ಕಲಬುರಗಿ ಎಂಬ ಬಿಸಿಲಿನ ಕೋಟೆ ಈಗ ಅಕ್ಷರಶಃ ಮಳೆಯ ವಶವಾಗಿದೆ. ಮಲೆನಾಡು ವಾತಾವರಣ ಆವರಿಸಿಕೊಂಡಿದ್ದು, ಮಳೆ ಮತ್ತು ಚಳಿ ಜೊತೆಗೂಡಿ ಇಲ್ಲಿ ಎಲ್ಲವನ್ನೂ ಮತ್ತು ಎಲ್ಲರನ್ನೂ ಹಿಡಿದಿಟ್ಟಿವೆ. ದಟ್ಟವಾಗಿ ಕವಿದಿರುವ ಮೋಡಗಳು ಸೂರ್ಯನನ್ನು ಕ್ಷಣ ಮಾತ್ರವೂ ಇಣುಕಲು ಅವಕಾಶ ಕೊಡುತ್ತಿಲ್ಲ.
ಹಲವು ವರ್ಷಗಳ ನಂತರ ಇಂಥ ಮಳೆ ಆಗುತ್ತಿದ್ದು, ಜನರಿಗೆ ತಂಪು ಜೊತೆ ಬೆಚ್ಚನೆಯ ಹಿತ ನೀಡಿದೆ. ಇನ್ನು ಗ್ರಾಮೀಣ ಭಾಗದಲ್ಲಿ ಬಹುತೇಕ ಕೆರೆಕುಂಟೆ ಕೋಡಿ ಹರಿಯುತ್ತಿವೆ. ಸೇತುವೆ, ರಸ್ತೆಗಳು ನದಿ ನೀರಿನಿಂದ ಮುಳುಗಿ, ಜನರು ಸಂವಹನ ಮತ್ತು ಸಂಚಾರ ಸಂಪರ್ಕ ಕಳೆದುಕೊಂಡಿದ್ದಾರೆ.[ಕಲಬುರಗಿ-ಹೈದರಾಬಾದ್ ರೈಲಿನ ಸಮಯ ಬದಲಾಯಿಸಿ]
ಇನ್ನು ಇಲ್ಲಿನ ಜನರು ಎಂತಹದ್ದೇ ಬಿಸಿಲಿದ್ದರೂ ಛತ್ರಿ ಹಿಡಿಯುವುದಿಲ್ಲ. ನೆತ್ತಿಯ ಮೇಲೆ ಸೂರ್ಯ ಸುಡುತ್ತಿದ್ದರೂ ಚಹ ಕುಡಿಯುವುದು ಬಿಡುವುದಿಲ್ಲ. ಆದರೆ ಈ ಬಾರಿ ಮಳೆ ಜನರನ್ನು ಛತ್ರಿ ಹಿಡಿಯುವಂತೆ ಮಾಡಿದೆ.