ಕಲಬುರಗಿ; ಭಾರೀ ಮಳೆ, ಬಾಳೆ ಬೆಳೆ ನಾಶ
ಕಲಬುರಗಿ, ಮೇ 22: ಭಾರೀ ಗಾಳಿ ಮಳೆಗೆ ಮೂರು ಎಕರೆಯಲ್ಲಿ ಬೆಳೆದಿದ್ದ ಬಾಳೆ ಫಸಲು ನೆಲಕಚ್ಚಿದ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ನಾವದಗಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.
ಗ್ರಾಮದ ರೈತ ನಾಗಪ್ಪ ಹತ್ತಿಗೆ ಸೇರಿದ ಎರಡು ಸಾವಿರ ಬಾಳೆ ಗಿಡ ಬಿರುಗಾಳಿ, ಮಳೆಗೆ ಸಿಲುಕಿ ನೆಲಕಚ್ಚಿದೆ. ಕಟಾವು ಹಂತದಲ್ಲಿದ್ದ ಬಾಳೆ ಗಿಡಗಳು ಉರುಳಿ ಬಿದ್ದಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ.
ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರೋ ರೈತ ನಾಗಪ್ಪ ಹತ್ತಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಬಾಳೆ ಬೆಳೆದಿದ್ದರು. ಸುಮಾರು ಲಕ್ಷ ಮೌಲ್ಯದ ಬಾಳೆ ಬೆಳೆ ಕಳೆದುಕೊಂಡಿದ್ದಾರೆ. ಇದರಿಂದಾಗಿ ಮುಂದೆ ಜೀವನ ನಡೆಸುವುದು ಹೇಗೆ? ಎಂಬ ಆತಂಕ ಎದುರಾಗಿದೆ.
ಮಳೆಗೆ ಜಿಲ್ಲೆಯಲ್ಲಿ ಸುಮಾರು 200 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿದೆ, 150ಕ್ಕೂ ಹೆಚ್ವು ಹೆಕ್ಟೇರ್ ಬಾಳೆ ಬೆಳೆ ನೆಲಕಚ್ಚಿದೆ. ಸುಮಾರು 50 ಹೆಕ್ಟೇರ್ ಪಪ್ಪಾಯ, ಕಲ್ಲಂಗಡಿ, ಈರುಳ್ಳಿ, ತರಕಾರಿ ಇತರೆ ಬೆಳೆ ಹಾನಿಯಾಗಿದೆ. ಮೇ ತಿಂಗಳಲ್ಲಿ ಸುರಿದ್ದ ಅಬ್ಬರದ ಮಳೆಗೆ ಬೆಳೆ ಕಳೆದುಕೊಂಡಿರುವ ರೈತರು ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.
ಜನಜೀವನ ಅಸ್ತವ್ಯಸ್ತ; ಸುಮಾರು ಮೂರು ಗಂಟೆಗಳ ಬಿರುಸಿನ ಮಳೆ ನಗರದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಳ್ಳುವಂತೆ ಮಾಡಿದೆ. ಹಳೇ ಕಲಬುರಗಿ ಪರಿಸದಲ್ಲಿರುವ ತಗ್ಗು ಪ್ರದೇಶದ ಮನೆಗಳು ಜಲಾವೃತ ಭೀತಿ ಎದುರಿಸುತ್ತಿದ್ದರೆ ಹೊಸ ಪ್ರದೇಶಗಳಾದ ಪೂಜಾ ಕಾಲೋನಿ, ಜನತಾ ಬಡಾವಣೆ ಸೇರಿದಂತೆ ಹಲವು ಬಡಾವಣೆಗಳಲ್ಲಿಯೂ ಮಳೆ ನೀರು ಮನೆಗಳಿಗೆ ನುಗ್ಗುವ ಭೀತಿ ಎದುರಾಗಿದೆ.
ನಗರದ ಕೆಬಿಎನ್ ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿ ಮಳೆ ನೀರು ನಿಂತಿದ್ದರಿಂದಾಗಿ ವಾಹನ ಸಂಚಾರ, ಜನ ಸಂಚಾರ ಸ್ಥಗಿತಗೊಂಡಿದೆ. ಇದಲ್ಲದೆ ರೇಲ್ವೆ ಮೇಲ್ಸೇತುವೆ ಇಕ್ಕೆಲ ರಸ್ತೆಗಳು, ಕೋರಂಟಿ ಹನುಮಂತ ದೇವರ ಮಂದಿರದ ರೈಲ್ವೆ ಕೆಳ ಸೇತುವೆ ರಸ್ತೆಯಲ್ಲಿಯೂ ಭಾರೀ ಪ್ರಮಾಣದಲ್ಲಿ ಮಳೆ ನೀರು ಶೇಖರಣೆಯಾಗಿದ್ದು ಜನರು ರಸ್ತೆಗಳನ್ನು ಬಳಸದಂತಾಗಿದೆ.
ಕಲಬುರಗಿ ಮಹಾನಗರದ ರಿಂಗ್ ರಸ್ತೆ ಇಕ್ಕೆಲಗಳಲ್ಲಿರುವ ರಾಮಮಂದಿರ, ಸಾಯಿ ಮಂದಿರ, ಧನ್ವಂತರಿ ಆಸ್ಪತ್ರೆ, ಗುರು ಕಾಲೇಜ್ ಅಕ್ಕಪಕ್ಕದ ಆರ್. ಟಿ. ನಗರ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ವಿದ್ಯುತ್ ಕೈ ಕೊಟ್ಟು ಜನ ಪರದಾಡುವಂತಾಗಿದೆ.