ಕಲಬುರಗಿ ಜಿಲ್ಲೆ 4 ದಿನ ಸಂಪೂರ್ಣ ಲಾಕ್ಡೌನ್; ಯಾವುದಕ್ಕೆ ಅನುಮತಿ?
ಕಲಬುರಗಿ, ಮೇ 26; ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕಾಗಿ ಕಲಬುರಗಿ ಜಿಲ್ಲೆಯಾದ್ಯಂತ ನಾಲ್ಕು ದಿನದ ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ರಾಜ್ಯಾದ್ಯಂತ ಜೂನ್ 7ರ ತನಕ ಲಾಕ್ಡೌನ್ ಜಾರಿಯಲ್ಲಿದ್ದು, ಕಠಿಣ ನಿಯಮ ಜಾರಿಗೊಳಿಸಲು ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ.
ಕಲಬುರಗಿ ಜಿಲ್ಲಾಧಿಕಾರಿ ವಿ. ವಿ. ಜ್ಯೋತ್ಸ್ನಾ ಸಂಪೂರ್ಣ ಲಾಕ್ಡೌನ್ ಆದೇಶ ಹೊರಡಿಸಿದ್ದಾರೆ. "ಮೇ 27ರ ಬೆಳಗ್ಗೆ 6 ಗಂಟೆಯಿಂದ ಮೇ 31ರ ಬೆಳಗ್ಗೆ 6 ಗಂಟೆ ವರೆಗೆ ಅತ್ಯಗತ್ಯ ಸೇವೆಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ" ಎಂದು ಹೇಳಿದ್ದಾರೆ.
ಆಟೋ ಅಂಬ್ಯುಲೆನ್ಸ್; ಕಲಬುರಗಿ ಪಾಲಿಕೆ ವಿನೂತನ ಪ್ರಯತ್ನ
ಅತ್ಯಗತ್ಯ ವಸ್ತುಗಳಾದ ಹಾಲು, ಮೊಟ್ಟೆ, ಹೋಟೆಲ್ಗಳಲ್ಲಿ ಊಟ ಮತ್ತು ಉಪಹಾರ ಪಾರ್ಸಲ್ ಸೇವೆ ಲಭ್ಯವಿರಲಿವೆ. ಆಸ್ಪತ್ರೆ, ಔಷಧಿ ಅಂಗಡಿಗಳು, ಅಂಬುಲೆನ್ಸ್, ಅಗ್ನಿ ಶಾಮಕ, ಪೆಟ್ರೋಲ್ ಬಂಕ್ ಹಾಗೂ ಇತರೆ ತುರ್ತು ವೈದ್ಯಕೀಯ ಸೇವೆಗಳು ಎಂದಿನಂತೆ ಇರಲಿವೆ.
ಕಲಬುರಗಿ ಜಿಲ್ಲೆಯಲ್ಲಿ ಮೇ 20ರಿಂದ ಸಂಪೂರ್ಣ ಲಾಕ್ಡೌನ್
ರೈಸ್ ಮಿಲ್, ದಾಲ್ ಮಿಲ್ ಒಳಗಿನ ಚಟುವಟಿಕೆಗಳಿಗೆ ಸ್ಥಳದಲ್ಲಿಯೇ ಲಭ್ಯವಿರುವ ಕಾರ್ಮಿಕರನ್ನು ಬಳಸಿಕೊಂಡು ಕಾರ್ಯ ನಿರ್ವಹಣೆಗೆ ಮಾಡಬಹುದು. ಸರ್ಕಾರಿ ಸಾರಿಗೆ ಸೇವೆಯನ್ನು ನಿರ್ಬಂಧಿಸಲಾಗಿದೆ. ತುರ್ತು ವೈದ್ಯಕೀಯ ಸೇವೆಗಳ ಸಂದರ್ಭದಲ್ಲಿ ಖಾಸಗಿ ಸಾರಿಗೆ ಸೇವೆ ಬಳಕೆಗೆ ಅವಕಾಶವಿದ್ದು, ವೈದ್ಯಕೀಯ ದಾಖಲೆಗಳನ್ನು ಚೆಕ್ ಪೋಸ್ಟ್ ಗಳಲ್ಲಿ ತೋರಿಸಿ ಪ್ರಯಾಣಿಸಬಹುದು.
ಕಲಬುರಗಿ; ಶಹಾಬಾದ್ ಇಎಸ್ಐ ಆಸ್ಪತ್ರೆ ಶೀಘ್ರವೇ ಕೋವಿಡ್ ಕೇರ್ ಸೆಂಟರ್
ಸಾರಿಗೆ ಸಂಚಾರ ಸಂಪೂರ್ಣ ಬಂದ್
ಎಲ್ಲಾ ರೀತಿಯ ಖಾಸಗಿ ಸಾರಿಗೆಯನ್ನು ನಿರ್ಬಂಧಿಸಲಾಗಿದೆ. ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೋವಿಡ್, ನಾನ್ ಕೋವಿಡ್ ರೋಗಿಗಳ ಆರೈಕೆಗೆ ಸಂಬಂಧಪಟ್ಟ ಇಬ್ಬರು ವ್ಯಕ್ತಿಗಳಿಗೆ ಆರೈಕೆ ಮಾಡುವುದಕ್ಕೆ ಅನುಮತಿ ನೀಡಲಾಗಿದೆ. ಸಂಬಂಧಿಸಿದ ಆಸ್ಪತ್ರೆಗಳ ನೋಡಲ್ ಅಧಿಕಾರಿಗಳಿಂದ ಇದಕ್ಕಾಗಿ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಪಡೆಯಬೇಕು. ಸರಕುಗಳ ಸಾಗಾಣಿಕೆಗೆ ಮತ್ತು ಖಾಲಿ ವಾಹನಗಳ ಸಂಚಾರಕ್ಕೆ ಅನುಮತಿ ಇದೆ. ದಿನ ಪ್ರತಿಕೆ, ಎಟಿಎಂ ಸೇವೆಗಳಿಗೆ ಅನುಮತಿ ಕೊಡಲಾಗಿದೆ. ಕೃಷಿ ಸಂಬಂಧಿತ ಚಟುವಟಿಕೆಗಳು ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ನಡೆಯಬೇಕು.
ಕಾರ್ಮಿಕರಿಗೆ ಅನುಮತಿ
ಬೀಜ, ರಸಗೊಬ್ಬರ ಸಾಗಾಣಿಕೆ ಸಂಬಂಧ ರೈಲ್ವೆ ರೇಕ್ಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಅನುಮತಿ ಇದೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಅಂಗಡಿ ಮುಂಗಟ್ಟುಗಳಿಗೆ ಅನುಮತಿ ಇರುವುದಿಲ್ಲ. ಆಹಾರ ಸಂಸ್ಕರಣೆಯ ಸೇವೆಗಳಾದ ಕೋಲ್ಡ್ ಸ್ಟೋರೇಜ್ಗಳು, ಔಷಧ ಉದ್ಯಮಗಳು, ರಾಸಾಯನಿಕ ಉದ್ಯಮಗಳಲ್ಲಿ ಶೇ.೫೦ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಣೆ ಮಾಡಬಹುದು.
ಖಾನಾವಳಿ/ ಹೋಟೆಲ್ಗಳಿಂದ ಮನೆ-ಮನೆಗೆ ಪಾರ್ಸಲ್ ಮೂಲಕ ಊಟ, ಉಪಹಾರ ಸರಬರಾಜು ಮಾಡಲು ಅವಕಾಶವಿದೆ. ನಗರ, ಪಟ್ಟಣಗಳಲ್ಲಿ ಇಂದಿರಾ ಕ್ಯಾಂಟೀನ್ ದಿನ ಪೂರ್ತಿ ತರೆಯಲು ಅನುಮತಿ ಇದೆ. ನಗರ ಸ್ಥಳೀಯ ಸಂಸ್ಥೆಯ ಮುಖ್ಯಸ್ಥರು ಆಸ್ಪತ್ರೆಗಳಲ್ಲಿ ರೋಗಿಗಳನ್ನು ನೋಡಿಕೊಳ್ಳುವವರಿಗೆ ಊಟದ ವ್ಯವಸ್ಥೆಯನ್ನು ಮಾಡಲು ಸೂಚನೆ ನೀಡಲಾಗಿದೆ.
ಯಾವುದಕ್ಕೆ ನಿರ್ಬಂಧವಿಲ್ಲ
ಸಂಪೂರ್ಣ ಲಾಕ್ಡೌನ್ ಸಂದರ್ಭದಲ್ಲಿ ಕಂದಾಯ, ಗ್ರಾಮೀಣಾಭಿವೃದ್ದಿ, ನಗರ ಸ್ಥಳೀಯ ಸಂಸ್ಥೆಗಳು, ಆರೋಗ್ಯ, ಪಶು ವೈದ್ಯಕೀಯ, ವೈದ್ಯಕೀಯ ಶಿಕ್ಷಣ, ಪೊಲೀಸ್, ಗೃಹ ರಕ್ಷಕ ದಳ, ನಾಗರಿಕ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ವಿಪತ್ತು ನಿರ್ವಹಣೆ, ಕಾರಾಗೃಹ ಸೇವೆಗಳಿಗೆ ಯಾವುದೇ ನಿರ್ಬಂಧವಿಲ್ಲ. ಖಜಾನೆ ಇಲಾಖೆಯು ಶೇ 50ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ಇದೆ.
ಕೋವಿಡ್-19 ಕಾರ್ಯಕ್ಕೆ ನಿಯೋಜಿಸಿದ ಎಲ್ಲಾ ಕಛೇರಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಗೂ ವೈದ್ಯಕೀಯ ಹಾಗೂ ತುರ್ತು ಸೇವೆಗಳ ಎಲ್ಲಾ ಅಧಿಕಾರಿಗಳು / ಸಿಬ್ಬಂದಿಗಳ ಕರ್ತವ್ಯ ನಿಮಿತ್ಯ ಓಡಾಟಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ. ರಾತ್ರಿ ವಸತಿ ರಹಿತ ನಿರ್ಗತಿಕರ ಕೇಂದ್ರ, ವೃದ್ಧಾಶ್ರಮ, ಬಾಲ ಮಂದಿರ, ಬಾಲಾಶ್ರಮ, ಅನಾಥಾಶ್ರಮಗಳಿಗೆ ಅನುಮತಿಸಲಾಗಿದೆ.
ಮದುವೆ/ ಅಂತ್ಯ ಸಂಸ್ಕಾರ
ಮದುವೆಗೆ 10 ಜನ, ಅಂತ್ಯಕ್ರಿಯೆಗೆ 5 ಜನರಿಗೆ ಅವಕಾಶವಿದೆ. ಸಾರ್ವಜನಿಕವಾಗಿ ಮದುವೆ ಕಾರ್ಯಕ್ರಮ ಆಯೋಜಿಸುವಂತಿಲ್ಲ. ಮನೆಯೊಳಗಿನ ಮದುವೆಗೆ ಅನುಮತಿಸಿದ್ದು, ಸಂಬಂಧಿಸಿದ ತಹಶೀಲ್ದಾರರ್ ಪೂರ್ವಾನುಮತಿ ಪಡೆಯಬೇಕು.
ದಂಡ ಹಾಕಲಾಗುತ್ತದೆ; ಕೋವಿಡ್ ನಿಯಮಾವಳಿಗಳನ್ನು ಜನರು ಪಾಲನೆ ಮಾಡಬೇಕು. ಸಾರ್ವಜನಿಕ ಸ್ಥಳ, ಕೆಲಸದ ಸ್ಥಳ ಹಾಗೂ ಪ್ರಯಾಣದ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಇಲ್ಲದಿದ್ದಲ್ಲಿ ನಗರ ಪ್ರದೇಶಗಳಲ್ಲಿ 250 ರೂ. ಮತ್ತು ಗ್ರಾಮೀಣ ಪ್ರದೇಶದಲ್ಲಿ 100 ರೂ. ದಂಡ ವಿಧಿಸಲಾಗುತ್ತದೆ.