ಬೀದರ್-ಯಶವಂತಪುರ ರೈಲು ಕಲಬುರಗಿ ಮಾರ್ಗವಾಗಿ ಸಂಚಾರ
ಕಲಬುರಗಿ, ಮಾರ್ಚ್ 01; ಕಲಬುರಗಿ ಭಾಗದ ಜನರ ಬಹುದಿನಗಳ ಬೇಡಿಕೆಗೆ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ವಾರದಲ್ಲಿ ನಾಲ್ಕು ದಿನ ಸಂಚಾರ ನಡೆಸುವ ಬೀದರ್-ಯಶವಂತಪುರ ರೈಲು ಕಲಬುರಗಿ ಮಾರ್ಗವಾಗಿ ಸಂಚಾರ ನಡೆಸಲಿದೆ.
ಬೀದರ್ ಸಂಸದ ಮತ್ತು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಈ ಕುರಿತು ಮಾಹಿತಿ ನೀಡಿದ್ದಾರೆ. 'ಬೀದರ್-ಯಶವಂತಪುರ ರೈಲು ಕಲಬುರಗಿ ಮಾರ್ಗವಾಗಿ ಚಲಿಸಬೇಕೆನ್ನುವುದು ನನ್ನ ಕ್ಷೇತ್ರದ ಜನತೆಯ ಕನಸಾಗಿತ್ತು" ಎಂದು ಹೇಳಿದ್ದಾರೆ.
ಕಲಬುರಗಿ ಮೂಲಕ ಬೀದರ್-ಯಶವಂತಪುರ ರೈಲು ಸಂಚಾರ ನಡೆಸಲು ಇಲಾಖೆ ಒಪ್ಪಿಗೆ ನೀಡಿದೆ. ಮುಂದಿನ 15 ದಿನದೊಳಗೆ ರೈಲು ಸಂಚಾರಕ್ಕೆ ರೈಲ್ವೆ ಖಾತೆ ಸಚಿವರಿಂದ ಚಾಲನೆ ನೀಡಲಾಗುತ್ತದೆ ಎಂದು ಸಂಸದರು ಫೇಸ್ಬುಕ್ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ.

ರೈಲು ಸಂಖ್ಯೆ 16571 ಯಶವಂತಪುರ-ಬೀದರ್ ನಡುವೆ ಮತ್ತು ರೈಲು ಸಂಖ್ಯೆ 16572 ಬೀದರ್-ಯಶವಂತಪುರ ನಡುವೆ ಸಂಚಾರ ನಡೆಸುತ್ತದೆ. ಈ ರೈಲುಗಳು ವಾರದಲ್ಲಿ ನಾಲ್ಕು ದಿನಗಳ ಕಾಲ ಸಂಚಾರ ನಡೆಸಲಿವೆ.
ವೇಳಾಪಟ್ಟಿ; ರೈಲು ಸಂಖ್ಯೆ 16571 ಯಶವಂತಪುರ-ಬೀದರ್ ಭಾನುವಾರ, ಸೋಮವಾರ, ಮಂಗಳವಾರ ಮತ್ತು ಗುರುವಾರ ಯಶವಂತಪುರದಿಂದ ಸಂಜೆ 7 ಗಂಟೆಗೆ ಹೊರಡಲಿದೆ. ವಾಡಿ, ಕಲಬುರಗಿ, ತಾಜಸುಲ್ತಾನಪುರ, ಕಮಲಾಪುರ, ಹುಮನಾಬಾದ್, ಹಳ್ಳಿಖೇಡ ಮಾರ್ಗವಾಗಿ ಸಂಚಾರ ನಡೆಸಲಿದ್ದು, ಮರುದಿನ ಬೆಳಗ್ಗೆ 8.45ಕ್ಕೆ ಬೀದರ್ ತಲುಪಲಿದೆ.
ರೈಲು ಸಂಖ್ಯೆ 16571 ಬೀದರ್-ಯಶವಂತಪುರ ಸೋಮವಾರ, ಮಂಗಳವಾರ, ಬುಧವಾರ ಮತ್ತು ಶುಕ್ರವಾರ ಬೀದರ್ನಿಂದ ಸಂಜೆ 6.15ಕ್ಕೆ ಹೊರಡಲಿದೆ. ಇದೇ ಮಾರ್ಗದ ಮೂಲಕ ಸಂಚಾರ ನಡೆಸಿ ಮರುದಿನ ಬೆಳಗ್ಗೆ 7.40ಕ್ಕೆ ಬೆಂಗಳೂರಿನ ಯಶವಂತಪುರ ತಲುಪಲಿದೆ.
ಬೀದರ್-ಯಶವಂತಪುರ ರೈಲು ಕಲಬುರಗಿ ಮಾರ್ಗವಾಗಿ ಸಂಚಾರ ನಡೆಸುವುದರಿಂದ ಬೀದರ್ ಕ್ಷೇತ್ರದ ಜನರಿಗೆ ಅನುಕೂಲವಾಗಲಿದೆ. ಮುಂದಿನ 15 ದಿನಗಳಲ್ಲಿ ಕಲಬುರಗಿ ಮಾರ್ಗವಾಗಿ ರೈಲು ಸಂಚಾರ ನಡೆಸಲು ಚಾಲನೆ ನೀಡುವ ನಿರೀಕ್ಷೆ ಇದೆ.
ಮುಂದಿನ ದಿನಗಳಲ್ಲಿ ಕಲಬುರಗಿ ಮಾರ್ಗವಾಗಿ ಬೀದರ್ಗೆ ಇನ್ನೂ ಹೆಚ್ಚಿನ ರೈಲುಗಳು ಸಂಚಾರ ನಡೆಸಲಿವೆ ಎಂದು ಸಚಿವ ಭಗವಂತ ಖೂಬಾ ಹೇಳಿದ್ದಾರೆ. ಕಲಬುರಗಿ ಮಾರ್ಗವಾಗಿ ರೈಲು ಸಂಚಾರ ನಡೆಸಲು ಒಪ್ಪಿಗೆ ನೀಡಿದ ರೈಲ್ವೆ ಸಚಿವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ರೈಲು ಸೇವೆ ರದ್ದು ಮಾಹಿತಿ; ದೇಸೂರು-ಖಾನಾಪುರ-ಗುಂಜಿ ಭಾಗದಲ್ಲಿ ದೇಸೂರು ಮೊದಲನೇ ಹಂತದ ಜೋಡಿ ಮಾರ್ಗ ಕಾರ್ಯ ನಡೆಯುತ್ತಿರುವುದರಿಂದ ಈ ಕೆಳಕಂಡ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ಮಾರ್ಚ್ 5 ರಿಂದ 20ರ ತನಕ ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 17317 ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬಳ್ಳಿ-ದಾದರ್ ನಿತ್ಯ ಸೇವೆಯ ಎಕ್ಸ್ಪ್ರೆಸ್ ರೈಲು ಸಂಚಾರ ರದ್ದುಗೊಳಿಸಲಾಗಿದೆ.
ಮಾರ್ಚ್ 6 ರಿಂದ 21ರ ತನಕ ದಾದರ್ ನಿಲ್ದಾಣದಿಂದ ಆರಂಭವಾಗುವ ರೈಲು ಸಂಖ್ಯೆ 17318 ದಾದರ್-ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿತ್ಯ ಸೇವೆಯ ಎಕ್ಸ್ಪ್ರೆಸ್ ರೈಲು ಸೇವೆ ರದ್ದುಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ರೈಲು ಭಾಗಶಃ ರದ್ದು ; ಮಾರ್ಚ್ 1 ರಿಂದ 31ರ ತನಕ ಮೈಸೂರು-ಅರಸೀಕೆರೆ ಭಾಗದ ನಡುವೆ ಇಂಜಿನಿಯರಿಂಗ್ ಸಂಬಂಧಿತ ಕಾಮಗಾರಿ ನಡೆಯುವ ಹಿನ್ನಲೆಯಲ್ಲಿ ಕೆಳಕಂಡ ರೈಲುಗಳ ಸೇವೆಯನ್ನು ಭಾಗಶಃ ರದ್ದುಗೊಳಿಸಲಾಗಿದೆ.
1/3/2022 ರಿಂದ 31/3/2022ರ ತನಕ ರೈಲು ಸಂಖ್ಯೆ 07313 ಮೈಸೂರು-ಯಶವಂತಪುರ ನಿತ್ಯ ಸೇವೆಯ ವಿಶೇಷ ಪ್ಯಾಸೆಂಜರ್ ರೈಲಿನ ಸೇವೆಯು ಮೈಸೂರು-ಹಾಸನ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿರುತ್ತದೆ ಹಾಗೂ ಈ ರೈಲು ಹಾಸನ ನಿಲ್ದಾಣದಿಂದ ತನ್ನ ನಿಗದಿತ ನಿರ್ಗಮನ ಸಮಯಕ್ಕೆ ಹೊರಡುತ್ತದೆ.












Click it and Unblock the Notifications