ಉಮೇಶ್ ಜಾಧವ್ ಕಾಂಗ್ರೆಸ್ ತೊರೆಯಲು 3 ಕಾರಣಗಳು
Recommended Video

ಕಲಬುರಗಿ, ಜನವರಿ 29 : ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಈಗಾಗಲೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಗೈರಾಗಿದ್ದ ಅವರು, ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ.
ಉಮೇಶ್ ಜಾಧವ್ ಕಾಂಗ್ರೆಸ್ ತೊರೆಯುವ ನಿರ್ಧಾರ ಕೈಗೊಳ್ಳಲು ಕಾಂಗ್ರೆಸ್ ನಾಯಕರೇ ಕಾರಣ ಎಂಬುದು ಅವರ ಅಭಿಮಾನಿಗಳ ಮಾತು. ಅದರಲ್ಲೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ನಡುವಿನ ಅಸಮಾಧಾನವೇ ಕಾರಣ ಎಂಬುದು ಜಿಲ್ಲೆಯಲ್ಲಿ ಹಬ್ಬಿರುವ ಸುದ್ದಿ.
ಉಮೇಶ್ ಜಾಧವ್ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿದ್ದರೂ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮೌನಕ್ಕೆ ಶರಣಾಗಿದ್ದಾರೆ. ಅವರನ್ನು ಕರೆದು ಮಾತನಾಡಿಸುವ, ಮನವೊಲಿಸುವ ಯಾವ ಪ್ರಯತ್ನವನ್ನು ಮಾಡಿಲ್ಲ.
'ಆಪರೇಷನ್ ಕಮಲಕ್ಕೆ ಜಾಧವ್ ಬಲಿಯಾಗಿದ್ದಾರೆ' ಎಂದು ಆರೋಪಿಸಿ ಅವರ ನಿವಾಸದ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಇದನ್ನು ಪ್ರಿಯಾಂಕ್ ಖರ್ಗೆ ಅವರೇ ಮಾಡಿಸಿದ್ದಾರೆ ಎಂಬುದು ಉಮೇಶ್ ಜಾಧವ್ ಅವರ ಆರೋಪವಾಗಿದೆ.

ಕಾರಣ - 1
ಕಾರು ಅಪಘಾತದಲ್ಲಿ ಡಾ.ಉಮೇಶ್ ಜಾಧವ್ ಅವರು ಗಾಯಗೊಂಡು ಹೈದರಾಬಾದ್ನ ಆಸ್ಪತ್ರೆಗೆ ದಾಖಲಾಗಿದ್ದರು. ಅಜಯ್ ಸಿಂಗ್ ಅವರು ಅಲ್ಲಿಗೆ ಹೋಗಿ ಆರೋಗ್ಯ ವಿಚಾರಿಸಿದ್ದರು. ಆದರೆ, ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದು ಕಲಬುರಗಿಗೆ ಆಗಮಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು ಆಸ್ಪತ್ರೆಗೆ ಬಂದು ಆರೋಗ್ಯ ವಿಚಾರಿಸಿಲಿಲ್ಲ ಎಂಬುದು ಅಸಮಾಧಾನಕ್ಕೆ ಕಾರಣವಾಗಿದೆ.

ಕಾರಣ - 2
ಕೆಲವು ದಿನಗಳ ಹಿಂದೆ ಉಮೇಶ್ ಜಾಧವ್ ಅವರ ಪುತ್ರನ ವಿವಾಹ ಕಲಬುರಗಿಯಲ್ಲಿ ನಡೆಯಿತು. ವಿವಾಹದ ಹಿಂದಿನ ದಿನ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿಯಲ್ಲಿದ್ದರು. ಆದರೆ, ಉಮೇಶ್ ಜಾಧವ್ ಅವರ ನಿವಾಸಕ್ಕೆ ಭೇಟಿ ನೀಡಲಿಲ್ಲ. ಪ್ರಿಯಾಂಕ್ ಖರ್ಗೆ ಅವರು ವಿವಾಹದ ದಿನ ಬಂದಿದ್ದರು. ದೆಹಲಿಗೆ ಹೋಗಿ ಆಮಂತ್ರಣ ಕೊಟ್ಟು ಬಂದರೂ, ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿಯಲ್ಲಿದ್ದರೂ ಮನಗೆ ಬಂದು ಹೋಗಲಿಲ್ಲ ಎಂದು ಜಾಧವ್ ಮುನಿಸಿಕೊಂಡಿದ್ದಾರೆ.

ಕಾರಣ -3
ಉಮೇಶ್ ಜಾಧವ್ ಅವರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳು ಹಲವು ದಿನದಿಂದ ಹರಿದಾಡುತ್ತಿವೆ. ಆದರೆ, ಮಲ್ಲಿಕಾರ್ಜುನ ಖರ್ಗೆ ಅವರು ಜಾಧವ್ ಅವರನ್ನು ಕರೆದು ಮಾತನಾಡಿಲ್ಲ. ಉದ್ದೇಶಪೂರ್ವಕವಾಗಿ ನನ್ನನ್ನು ನಿರ್ಲಕ್ಷ್ಯಿಸುತ್ತಿದ್ದಾರೆ ಎಂದು ಡಾ.ಉಮೇಶ್ ಜಾಧವ್ ಅವರು ಆರೋಪ ಮಾಡುತ್ತಿದ್ದಾರೆ.

ಲೋಕಸಭೆ/ವಿಧಾನಸಭೆಗೆ ಸ್ಪರ್ಧೆ
ಡಾ.ಉಮೇಶ್ ಜಾಧವ್ ಕಾಂಗ್ರೆಸ್ ತೊರೆಯುವುದು ಬಹುತೇಕ ಖಚಿತವಾಗಿದೆ. ಗುಲ್ಪರ್ಗಾ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ ದೊರೆಯದಿದ್ದರೆ ಚಿಂಚೋಳಿಯಿಂದಲೇ ಬಿಜೆಪಿ ಅಭ್ಯರ್ಥಿಯಾಗಿ ಉಪ ಚುನಾವಣೆ ಎದುರಿಸುವ ಲೆಕ್ಕಾಚಾರದಲ್ಲಿ ಅವರು ಇದ್ದಾರೆ.












Click it and Unblock the Notifications