ರಾಜಸ್ಥಾನ: ಮೇಲ್ಜಾತಿಯವರ ಮಡಿಕೆಯ ನೀರು ಕುಡಿದ ದಲಿತನ ಮೇಲೆ ಅಮಾನುಷ ಹಲ್ಲೆ
ಜೈಪುರ, ಸೆ.15: ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಲ್ಲಿ ಮೇಲ್ಜಾತಿ ಜನರಿಗೆಂದು ಇರಿಸಲಾಗಿದ್ದ ಮಡಿಕೆಯಲ್ಲಿ ನೀರು ಕುಡಿದ ಕಾರಣ ಜನರ ಗುಂಪು ದಲಿತ ವ್ಯಕ್ತಿಯೊಬ್ಬನನ್ನು ಅಮಾನುಷವಾಗಿ ಥಳಿಸಿರುವ ಘಟನೆ ವರದಿಯಾಗಿದೆ.
ಮೇಲ್ವರ್ಗದ ಜನರಿಗೆ ಮೀಸಲಾದ ಮಡಿಕೆಯಲ್ಲಿ ನೀರು ಕುಡಿದ ದಲಿತ ವ್ಯಕ್ತಿ ಮೇಲೆ ಜನರ ಗುಂಪು ಕಬ್ಬಿಣದ ರಾಡ್ ಮತ್ತು ದೊಣ್ಣೆಗಳಿಂದ ಥಳಿಸಿದ್ದಾರೆ ಈ ಘಟನೆ ಗುರುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೈಸಲ್ಮೇರ್ ಜಿಲ್ಲೆಯ ದಿಗ್ಗಾ ಗ್ರಾಮದಲ್ಲಿ ಹಲ್ಲೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ಚತುರ ರಾಮ್ ತನ್ನ ಪತ್ನಿಯೊಂದಿಗೆ ದಿಗ್ಗಾಕ್ಕೆ ಹೋಗುತ್ತಿದ್ದಾಗ ಕಿರಾಣಿ ಅಂಗಡಿಯೊಂದರ ಬಳಿ ನಿಲ್ಲಿಸಿ ಅಂಗಡಿಯ ಹೊರಗೆ ಇಟ್ಟಿದ್ದ ಪಾತ್ರೆಯಲ್ಲಿದ್ದ ನೀರು ಕುಡಿದಿದ್ದಾನೆ. ದಲಿತ ಚತುರ ರಾಮ್ ನೀರು ಕುಡಿಯುವುದನ್ನು ಜಿತೇಂದ್ರ ಸಿಂಗ್ ಎಂಬುವವರು ನೋಡಿದ್ದಾರೆ. ಬಳಿಕ ಆತ ನಾಲ್ಕೈದು ಜನರನ್ನು ಕರೆದು ವಿಷಯ ತಿಳಿಸಿದ್ದಾನೆ.
ಅಲ್ಲಿಗೆ ಬಂದ ನಾಲ್ಕು-ಐದು ಜನರು ನೀರು ಕುಡಿದಿದ್ದಕ್ಕೆ ಆತನನ್ನು ನಿಂದಿಸಿದರು. ಬಳಿಕ ಕಬ್ಬಿಣದ ರಾಡ್ ಮತ್ತು ದೊಣ್ಣೆಗಳಿಂದ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ. ಈ ಕುಡಿಯುವ ನೀರಿನ ಮಡಿಕೆ ಮೇಲ್ಜಾತಿಯ ಜನರಿಗೆ ಇಟ್ಟಿದ್ದರು ಎಂದು ಆರೋಪಿಗಳು ಹೇಳಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
'ನಾನು ನೀರು ಕುಡಿಯುವುದನ್ನು ಜಿತೇಂದ್ರ ಸಿಂಗ್ ಅವರು ನೋಡಿದರು, ಬಳಿಕ ನಾಲ್ವರು ಮದ್ಯಪಾನ ಮಾಡಿ ಥಳಿಸಲು ಪ್ರಾರಂಭಿಸಿದರು. ನಾನು ಓಡಿಹೋಗಲು ಪ್ರಯತ್ನಿಸಿದೆ ಆದರೆ ಅವರು ನನ್ನನ್ನು ಕಬ್ಬಿಣದ ರಾಡ್ನಿಂದ ಹೊಡೆದರು, ಇದರಿಂದಾಗಿ ನಾನು ಕೆಳಗೆ ಬಿದ್ದೆ. ನನ್ನ ಕೂಗು ಕೇಳಿದ ನನ್ನ ಹೆಂಡತಿ ನನ್ನನ್ನು ರಕ್ಷಿಸಲು ಬಂದರು. ನಂತರ, ನನ್ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು" ಎಂದು ಚತುರ ರಾಮ್ ಹೇಳಿದ್ದಾರೆ.
ಸಂತ್ರಸ್ತರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಭನ್ವರ್ ಸಿಂಗ್ ನಥಾವತ್ ತಿಳಿಸಿದ್ದಾರೆ. ಉಪ ಪೊಲೀಸ್ ವರಿಷ್ಠಾಧಿಕಾರಿ ಮಟ್ಟದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಆರೋಪಗಳನ್ನು ನ್ಯಾಯಯುತವಾಗಿ ತನಿಖೆ ಮಾಡಲಾಗುತ್ತಿದೆ ಮತ್ತು ವಿಚಾರಣೆಗಾಗಿ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದರು.
ಇದೇ ರೀತಿಯ ಘಟನೆಯಿಂದ ಅಹಮದಾಬಾದ್ನ ಆಸ್ಪತ್ರೆಯಲ್ಲಿ ಒಂಬತ್ತು ವರ್ಷದ ದಲಿತ ಬಾಲಕ ಸಾವನ್ನಪ್ಪಿದ ಒಂದು ತಿಂಗಳ ನಂತರ ಹೊಸ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದಿದೆ. ಮೇಲ್ಜಾತಿ ಮಕ್ಕಳಿಗೆ ಮೀಸಲಾದ ಮಡಿಕೆಯಲ್ಲಿ ನೀರು ಕುಡಿಯುವುದನ್ನು ಕಂಡ ಶಿಕ್ಷಕನೊಬ್ಬ ಬಾಲಕನಿಗೆ ಥಳಿಸಿದ್ದರು ಎಂದು ಆರೋಪಿಸಲಾಗಿದೆ.