ಶ್ರೀನಿವಾಸ್ ಗಾಗಿ ಗುಂಡೇಟು ತಿಂದವನಿಗೆ 65 ಲಕ್ಷ ರು. ಬಹುಮಾನ
ಕನ್ಸಾಸ್ ಗುಂಡಿನ ದಾಳಿಯಲ್ಲಿ ಭಾರತ ಮೂಲದ ಟೆಕ್ಕಿ ಶ್ರೀನಿವಾಸ್ ಟೆಕ್ಕಿ ಹತರಾಗಿದ್ದರು. ದಾಳಿಯ ವೇಳೆ, ಶ್ರೀನಿವಾಸ್ ಅವರನ್ನು ರಕ್ಷಿಸಲು ಮುಂದಾಗಿದ್ದ ಇಯಾನ್ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಹೂಸ್ಟನ್, ಮಾರ್ಚ್ 27: ಕನ್ಸಾಸ್ ನಲ್ಲಿ ಇತ್ತೀಚೆಗೆ ನಡೆದಿದ್ದ ಭಾರತೀಯ ಇಂಜಿನಿಯರ್ ಶ್ರೀನಿವಾಸ ಕುಚಿಬೋತ್ಲಾ ಹತ್ಯೆ ಪ್ರಕರಣದಲ್ಲಿ ಗುಂಡೇಟು ತಿಂದಿದ್ದ ಅಮೆರಿಕದ ಇಯಾನ್ ಗ್ರಿಲಾಟ್ ಅವರಿಗೆ ಹೂಸ್ಟನ್ ನಲ್ಲಿರುವ ಇಂಡಿಯನ್-ಅಮೆರಿಕನ್ ಸಂಸ್ಥೆಯ ವತಿಯಿಂದ ಭಾನುವಾರ ಸನ್ಮಾನಿಸಿ, 1 ಲಕ್ಷ ಅಮೆರಿಕನ್ ಡಾಲರ್ (ಸುಮಾರು 65 ಲಕ್ಷ ರು.) ಪುರಸ್ಕಾರ ನೀಡಲಾಯಿತು.
ಫೆಬ್ರವರಿ 24ರಂದು, ಶ್ರೀನಿವಾಸ್ ಹಾಗೂ ಇಯಾನ್ ಕನ್ಸಾಸ್ ನ ಬಾರೊಂದರಲ್ಲಿ ಕುಳಿತಿದ್ದಾಗ, ಅಪರಿಚಿತನೊಬ್ಬ ಶ್ರೀನಿವಾಸ್ ಅವರನ್ನು ಇರಾನ್ ದೇಶದ ಪ್ರಜೆಯೆಂದು ತಪ್ಪಾಗಿ ತಿಳಿದು, ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದ. ಆ ವೇಳೆ, ಭಾರತೀಯನ ರಕ್ಷಣೆಗಾಗಿ ಎದ್ದು ನಿಂತ ಇಯಾನ್ ಮೇಲೂ ಗುಂಡಿನ ದಾಳಿಯಾಗಿತ್ತು.[ಫೇಸ್ ಬುಕ್ ನಲ್ಲಿ ಕನ್ಸಾಸ್ ಶೂಟೌಟ್ ದುರ್ದೈವಿ ಶ್ರೀನಿವಾಸ್ ಪತ್ನಿಯ ಬಹಿರಂಗ ಪತ್ರ]
ಆ ಘಟನೆಯಲ್ಲಿ, ಶ್ರೀನಿವಾಸ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇಯಾನ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಸುಮಾರು ದಿನಗಳ ಕಾಲ ಅವರು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದು ಗುಣಮುಖರಾಗಿ ಇತ್ತೀಚೆಗಷ್ಟೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು.[ಅಮೆರಿಕಾ ಶೂಟೌಟ್: ಶ್ರೀನಿವಾಸ್ ಕುಚಿಭೋತ್ಲಾಗೆ ಅಂತಿಮ ವಿದಾಯ]
ಶೂಟೌಟ್ ನಡೆದಾಗ ಗೆಳೆಯನನ್ನು ಬಿಟ್ಟು ಓಡಿಹೋಗದೇ ಅವರ ರಕ್ಷಣೆಗೆ ಮುಂದಾದ ಇಯಾನ್ ಅವರ ಸ್ನೇಹಪರತೆಯನ್ನು ಮೆಚ್ಚಿಕೊಂಡಿರುವ ಇಂಡಿಯನ್-ಅಮೆರಿಕನ್ ಸಂಸ್ಥೆಯು ಅವರಿಗೆ ಈ ನಗದು ಪುರಸ್ಕಾರ ನೀಡಿ ಗೌರವಿಸಿದೆ.