ಶ್ರೀಲಂಕಾದಲ್ಲಿ ಸಾಂವಿಧಾನಿಕ ಬಿಕ್ಕಟ್ಟು; ಗುಂಡು ಹಾರಿಸಿ ಮೂವರಿಗೆ ಗಾಯ
ಕೊಲಂಬೋ (ಶ್ರೀಲಂಕಾ), ಅಕ್ಟೋಬರ್ 28: ದೇಶದಲ್ಲಿ ಕಾಣಿಸಿಕೊಂಡಿರುವ ಸಾಂವಿಧಾನಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾನುವಾರ ಹಾರಿಸಿದ ಗುಂಡಿಗೆ ಮೂವರಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಧಾನಿ ರನಿಲ್ ವಿಕ್ರಮ್ ಸಿಂಘೆ ಅವರನ್ನು ಹುದ್ದೆಯಿಂದ ತೆಗೆದ ಕಾರಣಕ್ಕೆ ಬಿಕ್ಕಟ್ಟು ಸೃಷ್ಟಿಯಾಗಿದೆ.
ಪೆಟ್ರೋಲಿಯಂ ಖಾತೆ ಸಚಿವ ಅರ್ಜುನ ರಣುತುಂಗ (ವಿಕ್ರಮ್ ಸಿಂಘೆಗೆ ನಿಷ್ಠೆ ಇರುವವರು) ಅವರಿಗೆ ಗುಂಪೊಂದು ಬೆದರಿಕೆ ಹಾಕಿದೆ. ಆಗ ಅವರ ಅಂಗರಕ್ಷಕ ಗುಂಪಿನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರದಂದು ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ರನಿಲ್ ವಿಕ್ರಮ್ ಸಿಂಘೆ ಅವರನ್ನು ಪ್ರಧಾನಿ ಹುದ್ದೆಯಿಂದ ಪದಚ್ಯುತಿಗೊಳಿಸಿದ ನಂತರದ ಮೊದಲ ಹಿಂಸಾಚಾರ ಇದು.
ಪ್ರಧಾನಿ ಅಧಿಕೃತ ನಿವಾಸವನ್ನು ತೆರವು ಮಾಡಲು ವಿಕ್ರಮ್ ಸಿಂಘೆ ನಿರಾಕರಿಸಿದ್ದಾರೆ. ತಮ್ಮ ಪದಚ್ಯುತಿ ಕಾನೂನುಬಾಹಿರ ಹಾಗೂ ತುರ್ತಾಗಿ ಸಂಸತ್ ಅಧಿವೇಶನ ನಡೆಸಿ, ಬಹುಮತ ಸಾಬೀತು ಪಡಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಮೈತ್ರಿ ಪಕ್ಷದ ಸದದ್ಯರ ಜತೆಗೆ ರನಿಲ್ ವಿಕ್ರಮ್ ಸಿಂಘೆ ಮಾತುಕತೆ ನಡೆಸುತ್ತಿದ್ದರೆ, ಬೌದ್ಧ ಬಿಕ್ಕುಗಳು ಸೇರಿದಂತೆ ಸಾವಿರಕ್ಕೂ ಹೆಚ್ಚು ಬೆಂಬಲಿಗರು ಬ್ರಿಟಿಷರ ಕಾಲದ ಪ್ರಧಾನಿ ನಿವಾಸದ ಎದುರು ಗುಂಪುಗೂಡಿದ್ದರು.

ಸಂಪುಟ ರಚನೆಗೆ ಮುನ್ನ ಪ್ರಾರ್ಥನೆ ಸಲ್ಲಿಕೆ
ಇತ್ತ ಮಹಿಂದ ರಾಜಪಕ್ಸೆ ಹೊಸ ಪ್ರಧಾನಿ ಆಗಿ ಪದವಿ ಸ್ವೀಕಾರ ಮಾಡಿ, ಹೊಸ ಸಂಪುಟ ರಚನೆಗಾಗಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ರಾಜಪಕ್ಸೆಗೆ ನಿಷ್ಠರಾದ ಅಧಿಕಾರಿಗಳು ಮಾತನಾಡಿ, ಪೊಲೀಸರು ಕೋರ್ಟ್ ಗೆ ಆದೇಶಕ್ಕಾಗಿ ಕೇಳಿದ್ದಾರೆ. ಆ ಮೂಲಕ ರನಿಲ್ ವಿಕ್ರಮ್ ಸಿಂಘೆ ಅವರನ್ನು ತೆರವುಗೊಳಿಸಲು ಮನವಿ ಮಾಡಿದ್ದಾರೆ. ಶ್ರೀಲಂಕಾದ ನೆರೆಹೊರೆ ರಾಷ್ಟ್ರಗಳು ಸಂವಿಧಾನಕ್ಕೆ ಗೌರವ ನೀಡುವಂತೆ ಹೇಳಿವೆ. ಇನ್ನು ಪ್ರಧಾನಿ ನಿವಾಸದ ಬಳಿ ಸೈನಿಕರು ಜಮೆಯಾಗಿದ್ದಾರೆ. ವಿಕ್ರಮ್ ಸಿಂಘೆಗೆ ನೀಡಿದ ಭದ್ರತೆ, ಅಧಿಕೃತ ಕಾರುಗಳನ್ನು ಶನಿವಾರ ವಾಪಸ್ ಪಡೆಯಲಾಗಿದೆ. ಪೆಟ್ರೋಲಿಯಂ ಸಚಿವಾಲಯದ ನಡೆದ ಶೂಟಿಂಗ್ ಹಿಂಸಾಚಾರದ ಮೊದಲ ವರದಿ ಆಗಿದೆ.

ಪದಚ್ಯುತಿ ಮಾಡಿರುವುದನ್ನು ಒಪ್ಪಲು ಸಾಧ್ಯವಿಲ್ಲ
ಶ್ರೀಲಂಕಾ ಸಂಸತ್ ನ ಸ್ಪೀಕರ್ ಕರು ಜಯಸೂರ್ಯ ಭಾನುವಾರ ಮಾತನಾಡಿ, ವಿಕ್ರಮ್ ಸಿಂಘೆ ಪದಚ್ಯುತಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ. ವಿಕ್ರಮ್ ಸಿಂಘೆಗೆ ನೀಡಿದ್ದ ಭದ್ರತೆ ಹಾಗೂ ಸವಲತ್ತುಗಳನ್ನು ಮುಂದುವರಿಸಬೇಕು ಎಂಬುದನ್ನು ಅವರು ಬೆಂಬಲಿಸಿದ್ದಾರೆ. ಮತ್ತೊಬ್ಬರು ಬಹುಮತ ಸಾಬೀತು ಮಾಡುವವರೆಗೆ ಮುಂದುವರಿಸಬೇಕು. ಇದು ಪ್ರಜಾತಾಂತ್ರಿಕ ಹಾಗೂ ನ್ಯಾಯಸಮ್ಮತ ಎಂದು ಹೇಳಿದ್ದಾರೆ.

ನಾಗರಿಕ ದಂಗೆ ಸೃಷ್ಟಿಸಬೇಡಿ
"ದೇಶದಲ್ಲಿ ನಾಗರಿಕ ದಂಗೆ ಸೃಷ್ಟಿಸಲು ಪ್ರಯತ್ನಿಸಬೇಡಿ" ಎಂದು ಕರುಣಾರತ್ನ ಪರಣವಿಥನ ಮಾಧ್ಯಮಗಳಿಗೆ ಪ್ರಧಾನಿ ನಿವಾಸಲ್ಲಿ ಹೇಳಿದ್ದಾರೆ. "ಒಂದು ವೇಳೆ ಅಧ್ಯಕ್ಷರಿಗೆ ಬಹುಮತ ಇದ್ದರೆ ಅವರು ತಕ್ಷಣವೇ ಸಂಸತ್ ನಲ್ಲಿ ಅಧಿವೇಶನ ಕರೆದು, ಅದನ್ನು ಸಾಬೀತು ಪಡಿಸಲಿ" ಎಂದು ಅವರು ಹೇಳಿದ್ದಾರೆ.

ಕೊಲಂಬೋ ಬೆಳವಣಿಗೆಯನ್ನು ಗಮನಿಸುತ್ತಿರುವ ಭಾರತ
ಕೊಲಂಬೊದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಭಾರತ ಗಮನಿಸುತ್ತಿದೆ. ಪ್ರಜಾಪ್ರಭುತ್ವ ಮತ್ತು ನೆರೆಯ ಮಿತ್ರ ದೇಶವಾಗಿ ಅಲ್ಲಿ ಪ್ರಜಾತಾಂತ್ರಿಕ ಮೌಲ್ಯಗಳಿ ಹಾಗೂ ಸಾಂವಿಧಾನಿಕ ಪ್ರಕ್ರಿಯೆಗಳನ್ನು ಗೌರವಿಸಲಾಗುತ್ತದೆ ಎಂದು ಭರವಸೆ ಇಟ್ಟಿದ್ದೇವೆ ಎಂದು ದೇಶದ ವಿದೇಶಾಂಗ ವಕ್ತಾರ ರವೀಶ್ ಕುಮಾರ್ ಭಾನುವಾರ ಹೇಳಿದ್ದಾರೆ.












Click it and Unblock the Notifications