ಗಾಂಜಾಗೆ ಮಾನ್ಯತೆ, ಸೊಪ್ಪು ಮಾರಾಟಕ್ಕೆ ಮುಂದಾದ ಪಾಕಿಸ್ತಾನ..!
ಪಾಕಿಸ್ತಾನದ ಆರ್ಥಿಕತೆ ಬೀದಿಗೆ ಬಿದ್ದಿದೆ. ಅಲ್ಲಿ, ಇಲ್ಲಿ ಹೋಗಿ ಸಾಲ ಕೇಳುವುದೇ ಪಾಕ್ ನಾಯಕರ ನಿತ್ಯದ ಕೆಲಸವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶ ನಡೆಸಲು ಬೇಕಾದ ಕನಿಷ್ಠ ಸಂಪತ್ತು ಕೂಡ ಪಾಕ್ ಸರ್ಕಾರದ ಬಳಿ ಇಲ್ಲ. ಇದೇ ಕಾರಣಕ್ಕೆ ಪಾಕಿಸ್ತಾನ ಹೊಸ ಐಡಿಯಾ ಮಾಡಿದೆ. ಅದೇನೆಂದರೆ ತನ್ನ ದೇಶದಲ್ಲಿ ಗಾಂಜಾ ಬೆಳೆಯಲು ಅನುಮತಿ ನೀಡಿ, ಅದರಿಂದ ದುಡ್ಡು ಮಾಡುವ ಪ್ಲ್ಯಾನ್ ಪಾಕ್ ಸರ್ಕಾರದ್ದು.
Recommended Video
ಮೆಡಿಕಲ್ ಮರಿಜುನಾ ಅಥವಾ ಹೈಡ್ರೋ ಗಾಂಜಾ ಬೆಳೆಯಲು ಪಾಕ್ ತಯಾರಾಗುತ್ತಿದೆ. ಇದಕ್ಕಾಗಿ 3 ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮುಖ್ಯವಾಗಿ ಉಗ್ರರ ಉಪಟಳದಿಂದ ದೂರ ಉಳಿದಿರುವ ಪ್ರದೇಶದಲ್ಲಿ ಗಾಂಜಾ ಬೆಳೆಯಲು ನೀಲಿನಕ್ಷೆ ಸಿದ್ಧವಾಗಿದೆ. ಪಾಕಿಸ್ತಾನದ ಸಿಂಧ್, ಪಂಜಾಬ್ ಸೇರಿದಂತೆ ಕೈಬರ್ನಲ್ಲಿ ಸರ್ಕಾರದ ಉಸ್ತುವಾರಿಯಲ್ಲೇ ಗಾಂಜಾ ಪ್ಲಾಂಟೇಷನ್ ನಡೆಯಲಿದೆ. ಈ ಕುರಿತು ಪಾಕ್ನ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಫವಾದ್ ಚೌಧರಿ ಮಾಹಿತಿ ನೀಡಿದ್ದಾರೆ.
ಕಾನೂನಿಗೆ ತಿದ್ದುಪಡಿ ತಂದ ಪಾಕಿಸ್ತಾನ..!
ಪಾಕಿಸ್ತಾನ ಸರ್ಕಾರ ಕೈಯಲ್ಲಿ ಕಾಸು ಇಲ್ಲದೆ ಅದೆಷ್ಟು ಬರಗೆಟ್ಟು ಹೋಗಿದೆ ಎಂದರೆ, ಗಂಜಾ ಬೆಳೆಯಲು ಅಡ್ಡಿಯಾಗಿದ್ದ ಕಾನೂನನ್ನೇ ತಿದ್ದುಪಡಿ ಮಾಡಿದೆ. 2006ರ ರಫ್ತು ಕಾನೂನಿಗೆ ಈಗ ತಿದ್ದುಪಡಿ ತಂದಿದೆ. ಈ ಮೂಲಕ ಹೇಗಾದರೂ ಸರಿ ಕಾಸು ಮಾಡಲೇಬೇಕು ಎಂಬಂತಹ ಸ್ಥಿತಿಗೆ ಪಾಕಿಸ್ತಾನ ಬಂದುನಿಂತಂತೆ ಕಾಣುತ್ತಿದೆ. ಆದರೆ ಈ ಕೆಲಸದಲ್ಲಾದರೂ ಪಾಕಿಸ್ತಾನ ಸಕ್ಸಸ್ ಕಾಣುತ್ತಾ..? ಅನ್ನೋದು ಬಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಭಾರತದಲ್ಲಿ ಗಾಂಜಾ ಗಮ್ಮತ್ತು: ಅಳತೆ ಮೀರುತ್ತಿದೆ ಯುವಸಮೂಹ
ಸೌದಿ ಅವಮಾನ ಕಲಿಸಿತಾ ಪಾಠ..?
ಇಷ್ಟುದಿನ ಅಲ್ಲಿ, ಇಲ್ಲಿ ಸಾಲ ಮಾಡಿ ಬದುಕುತ್ತಿದ್ದ ಪಾಕ್ಗೆ ಇತ್ತೀಚೆಗೆ ಸೌದಿ ಸರಿಯಾಗೇ ಪಾಠ ಕಲಿಸಿತ್ತು. ಮಾತೆತ್ತಿದರೆ ಸಾಕು ಒಂದೋ ಚೀನಾ, ಇಲ್ಲವಾದರೆ ಸೌದಿ ದೊರೆಗಳ ಕಾಲಿಗೆ ಬಿದ್ದು ಕಾಸು ಕೀಳೋದು ಪಾಕ್ ನಾಯಕರ ಖಯಾಲಿ ಆಗಿತ್ತು. ಆದರೆ ಇತ್ತೀಚೆಗೆ ಸೌದಿ ದೊರೆಗಳು ಪಾಕ್ ಸಾಲ ಕೇಳಿದಾಗ ಮುಖಕ್ಕೆ ಹೊಡೆದಂತೆ ಇಲ್ಲ ಎಂದಿದ್ದರು. ಪಾಕ್ ಪ್ರಧಾನಿ ಇಮ್ರಾನ್ ಖಾನ್ಗೆ ಅವಮಾನವಾಗುವಂತೆ ನಡೆದುಕೊಂಡಿದ್ದರು. ಈ ಅವಮಾನಕ್ಕೆ ತೇಪೆ ಹಾಕಲು ಇಮ್ರಾನ್ ಅದೆಷ್ಟೇ ಪ್ರಯತ್ನಿಸಿದರೂ ವರ್ಕೌಟ್ ಆಗಿರಲಿಲ್ಲ. ಇದರಿಂದ ಎಚ್ಚೆತ್ತುಕೊಂಡಂತೆ ಕಾಣುತ್ತಿರುವ ಪಾಕಿಸ್ತಾನ, ಗಾಂಜಾ ಬೆಳೆದಾದರೂ ಬದುಕಬೇಕು ಎಂಬ ನಿರ್ಧಾರಕ್ಕೆ ಬಂದಿದೆ.
ಉಗ್ರರ ಕೈಗೆ ಸಿಕ್ಕರೆ ಮುಗೀತು ಕತೆ..!
ಪಾಕಿಸ್ತಾನದಲ್ಲಿ ಯಾವಾಗ ಏನು ಆಗುತ್ತೋ ಗೊತ್ತಾಗುವುದಿಲ್ಲ. ಉಗ್ರರ ಕಪಿಮುಷ್ಠಿಗೆ ಸಿಲುಕಿ ಪಾಕ್ ವಿಲವಿಲ ಒದ್ದಾಡುತ್ತಿದೆ. ಒಂದ್ಕಡೆ ಉಗ್ರರ ಉಪಟಳವಾದರೆ, ಮತ್ತೊಂದ್ಕಡೆ ಐಎಸ್ಐ ಗುಪ್ತಚರ ಸಂಸ್ಥೆಯ ಆರ್ಭಟ. ಹೀಗಾಗಿ ಪಾಕಿಸ್ತಾನದಲ್ಲಿ ಸರ್ಕಾರ ಇದ್ದೂ ಇಲ್ಲದಂತಹ ಸ್ಥಿತಿ ಇದೆ. ಇಷ್ಟೆಲ್ಲದರ ಮಧ್ಯೆ ಪಾಕ್ ಬೆಳೆಯಲಿರುವ ಗಾಂಜಾ ಉಗ್ರರ ಕೈಗೆ ಸೇರಿದರೆ ಮುಗಿಯಿತು ಕತೆ. ಪಾಪಿ ಉಗ್ರರು ಮಾಡಬಾರದ್ದನ್ನೆಲ್ಲಾ ಮಾಡಿಬಿಡುತ್ತಾರೆ. ಈ ಕಾರಣಕ್ಕೆ ಗಾಂಜಾ ಪ್ಲಾಂಟ್ ಮಾಡಲಿರುವ ಪ್ರದೇಶಕ್ಕೆ ಪಾಕಿಸ್ತಾನ ಭಾರಿ ಭದ್ರತೆ ಒದಗಿಸುತ್ತದೆಯಂತೆ. ಅಕಸ್ಮಾತ್ ಭದ್ರತೆ ಒದಗಿಸದೆ ಇದ್ದರೆ, ಪಾಕ್ ಬೆಳೆದ ಗಾಂಜಾ ಕ್ಷಣಮಾತ್ರದಲ್ಲಿ ಉಗ್ರರ ಪಾಲಾಗುವುದು ಗ್ಯಾರಂಟಿ.
ಕಮ್ಮನಹಳ್ಳಿಯಲ್ಲಿ ಡ್ರಗ್ ಹಬ್ ಸೃಷ್ಟಿಸಿದ್ದ ಪೆಡ್ಲರ್ ಅನೂಪ್
ಚೀನಾ ಕೊಟ್ಟ ಐಡಿಯಾ..?
ಪಾಕಿಸ್ತಾನದಲ್ಲಿ ಮರಿಜುನಾ ಅಥವಾ ಗಾಂಜಾ ಬೆಳೆಯಲು ಸ್ಫೂರ್ತಿ ಯಾರು ಅನ್ನೋದು ತೀವ್ರ ಕುತೂಹಲ ಕೆರಳಿಸಿದೆ. ಆದರೆ ಇದನ್ನು ಪಾಕ್ ಸರ್ಕಾರ ನೇರವಾಗಿ ಹೇಳಿಲ್ಲವಾದರೂ, ಪಾಕ್ ಸಚಿವ ಫವಾದ್ ಚೌಧರಿ ಮಾತಿನಲ್ಲೇ ಇದಕ್ಕೆ ಉತ್ತರವಿದೆ. ಪಾಕಿಸ್ತಾನದಲ್ಲಿ ಗಾಂಜಾ ಬೆಳೆಯುವ ಉದ್ದೇಶದ ಹಿಂದೆ ಚೀನಾ ಕೈವಾಡ ಇರಬಹುದಾ ಎಂಬ ಗುಮಾನಿ ಮೂಡಿದೆ. ಏಕೆಂದರೆ ಕೆನಡಾ ಹಾಗೂ ಚೀನಾ ರೀತಿಯಲ್ಲೇ ನಾವು ಔಷಧ ಗಾಂಜಾ ರಫ್ತು ಮಾಡಲಿದ್ದೇವೆ ಅಂತಾ ಪಾಕ್ ಸಚಿವರು ಹೇಳಿದ್ದಾರೆ. ಇಷ್ಟುದಿನ ಎಲ್ಲದಕ್ಕೂ ಸಹಾಯ ಮಾಡಿರುವ ಚೀನಾ, ಈಗ ಗಾಂಜಾ ಬೆಳೆಯೋದಕ್ಕೂ ಪಾಕಿಸ್ತಾನಕ್ಕೆ ಸಹಾಯ ಮಾಡದೇ ಇರದು.