ನೀವು ಹೇಳಿದ ಸ್ಥಳಗಳ ಪೈಕಿ 22 ಕಡೆ ಉಗ್ರರ ನೆಲೆಯೇ ಇಲ್ಲ ಎಂದ ಪಾಕ್
ಇಸ್ಲಾಮಾಬಾದ್ (ಪಾಕಿಸ್ತಾನ), ಮಾರ್ಚ್ 28: ಜಮ್ಮು-ಕಾಶ್ಮೀರದಲ್ಲಿನ ಪುಲ್ವಾಮಾದಲ್ಲಿ ನಡೆದ ಉಗ್ರರ ಆತ್ಮಹತ್ಯಾ ದಾಳಿಗೆ ಸಂಬಂಧಿಸಿದಂತೆ ಐವತ್ನಾಲ್ಕು ಮಂದಿಯನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದೇವೆ. ಆದರೆ ಆ ಘಟನೆಗೂ ಅವರಿಗೂ ಯಾವುದೇ ಸಂಬಂಧ ಇರುವುದು ಕಂಡುಬಂದಿಲ್ಲ ಎಂದು ಪಾಕಿಸ್ತಾನ ಹೇಳಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಫೆಬ್ರವರಿ ಹದಿನಾಲ್ಕರಂದು ನಡೆದ ಭಯೋತ್ಪಾದನಾ ದಾಳಿಯಲ್ಲಿ ನಲವತ್ತು ಸಿಆರ್ ಪಿಎಫ್ ಯೋಧರು ಸಾವನ್ನಪ್ಪಿದ್ದರು. ಆ ನಂತರ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಭಾರತ-ಪಾಕಿಸ್ತಾನ ಮಧ್ಯೆ ಪ್ರಕ್ಷುಬ್ಧ ಪರಿಸ್ಥಿತಿ ತಲೆದೋರಿದೆ. ಇದೀಗ ಪಾಕಿಸ್ತಾನದ ವಿದೇಶಾಂಗ ಕಚೇರಿ ಈ ಬಗ್ಗೆ ಹೇಳಿಕೆ ನೀಡಿದೆ.
ಭಾರತವು ನಮ್ಮೊಂದಿಗೆ ಹಂಚಿಕೊಂಡ ಮಾಹಿತಿ ಪ್ರಕಾರ, ಎಲ್ಲೆಲ್ಲಿ ಉಗ್ರ ತರಬೇತಿ ಶಿಬಿರಗಳ ನಡೆಯುತ್ತಿರುವುದಾಗಿ ಹೇಳಿತ್ತೋ, ಆ ರೀತಿ ಆರೋಪ ಮಾಡಿದ ಇಪ್ಪತ್ತೆರಡು ಸ್ಥಳಗಳಲ್ಲಿ ಯಾವುದೇ ತರಬೇತಿ ಶಿಬಿರ ಇಲ್ಲ ಎಂದಿರುವ ಪಾಕಿಸ್ತಾನ, ಒಂದು ವೇಳೆ ಈ ಸ್ಥಳಗಳಿಗೆ ಭೇಟಿ ನೀಡಲು ಭಾರತ ಮನವಿ ಸಲ್ಲಿಸಿದರೆ ಅದಕ್ಕೆ ಅವಕಾಶ ನೀಡಲು ಪಾಕಿಸ್ತಾನ ಸಿದ್ಧವಿದೆ ಎನ್ನಲಾಗಿದೆ.

ಜಮ್ಮು ಕಾಶ್ಮೀರದ ಇಪ್ಪತ್ತೆರಡು ವರ್ಷದ ಯುವಕ ನಡೆಸಿದ ಬಾಂಬ್ ದಾಳಿಯಲ್ಲಿ ಜೈಷ್-ಇ-ಮೊಹ್ಮದ್ ನ ಕೈವಾಡ ಇರುವುದಕ್ಕೆ ಭಾರತವು ವಿಸ್ತೃತವಾದ ಸಾಕ್ಷ್ಯಾಧಾರವನ್ನು ಪಾಕಿಸ್ತಾನಕ್ಕೆ ನೀಡಿತ್ತು. ಅದರಲ್ಲಿ ಜೈಷೆಯ ಪಾಕಿಸ್ತಾನ ಮೂಲದ ಮುಖ್ಯಸ್ಥ ಮಸೂದ್ ಅಜರ್ ಬಗ್ಗೆ ಕೂಡ ಮಾಹಿತಿ ಇತ್ತು. ಕ್ರಮ ತೆಗೆದುಕೊಳ್ಳಬಹುದಾದ ಸಾಕ್ಷ್ಯ ಒದಗಿಸಿದರೆ ನಾವು ತನಿಖೆಗೆ ಸಿದ್ಧ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದರು.
ಭಾರತ ಒದಗಿಸಿರುವ ಮಾಹಿತಿಯನ್ನು ಎಲ್ಲ ರೀತಿಯಿಂದಲೂ ಪರಿಶೀಲಿಸಿದ್ದೇವೆ. ಪುಲ್ವಾಮಾ ದಾಳಿಯ ಹೊಣೆ ಹೊತ್ತ ಅದಿಲ್ ದರ್ ನ ತಪ್ಪೊಪ್ಪಿಗೆಯ ವಿಡಿಯೋ, ಪುಲ್ವಾಮಾ ದಾಳಿ ಪರವಾಗಿ ವಿಡಿಯೋ ಶೇರ್ ಮಾಡಲು ಬಳಸಿರುವ ವಾಟ್ಸ್ ಅಪ್, ಟೆಲಿಗ್ರಾಮ್ ಸಂಖ್ಯೆ, ಜೈಷ್-ಇ-ಮೊಹ್ಮದ್ ನ ತೊಂಬತ್ತು ಮಂದಿ ಶಂಕಿತರು ಮತ್ತು ತರಬೇತಿ ನೆಲೆ ಎಂದು ಇಪ್ಪತ್ತೆರಡು ಸ್ಥಳಗಳನ್ನು ಗುರುತು ಮಾಡಲಾಗಿತ್ತು.
ವಾಟ್ಸ್ ಅಪ್ ನಿಂದ ಅಗತ್ಯ ನೆರವು ದೊರಕಿಸುವಂತೆ ಅಮೆರಿಕ ಸರಕಾರವನ್ನು ಮನವಿ ಮಾಡಲಾಗಿದೆ ಎಂದು ಪಾಕಿಸ್ತಾನ ಹೇಳಿದೆ. ಪುಲ್ವಾಆಮಾ ದಾಳಿ ವಿಚಾರವಾಅಗಿ ತನಿಖೆಯನ್ನು ಇನ್ನಷ್ಟು ಮುಂದಕ್ಕೆ ತೆಗೆದುಕೊಂಡು ಹೋಗಲು ಹೆಚ್ಚಿನ ಸಾಕ್ಷ್ಯಾಧಾರಕ್ಕಾಗಿ ಭಾರತದ ಬಳಿ ಪಾಕಿಸ್ತಾನ ಕೇಳಿದೆ. ಈ ಹಿಂದೆ ಮುಂಬೈ ದಾಳಿ, ಪಠಾಣ್ ಕೋಟ್ ವಾಯು ನೆಲೆ ಮೇಲೆ ದಾಳಿ ನಡೆದಾಗಲೂ ಪಾಕಿಸ್ತಾನವು ಇದೇ ರೀತಿ ಹೆಚ್ಚಿನ ಸಾಕ್ಷ್ಯಾಧಾರ ಕೇಳಿತ್ತು.












Click it and Unblock the Notifications