'600 ತಾಲಿಬಾನಿಗಳ ಹತ್ಯೆಗೈಯಲಾಗಿದೆ' ಎಂದ ಪಂಜ್ಶೀರ್ ಪಡೆ
ಕಾಬೂಲ್, ಸೆಪ್ಟೆಂಬರ್ 05: ಅಫ್ಘಾನಿಸ್ತಾನದ ಈಶಾನ್ಯ ಪ್ರಾಂತ್ಯವಾದ ಪಂಜ್ಶೀರ್ನಲ್ಲಿ ಸುಮಾರು 600 ಮಂದಿ ತಾಲಿಬಾನಿಗಳನ್ನು ಹತ್ಯೆ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಅಫ್ಘಾನಿಸ್ತಾನದ ಈಶಾನ್ಯ ಪ್ರಾಂತ್ಯವಾದ ಪಂಜ್ಶೀರ್ನಲ್ಲಿ ತಾಲಿಬಾನ್ ಹಾಗೂ ವಿರೋಧಿ ಪಡೆ ನ್ಯಾಷನಲ್ ರೆಸಿಸ್ಟೆನ್ಸ್ ಪ್ರಂಟ್ ಆಫ್ ಅಫ್ಘಾನಿಸ್ತಾನ (ಎನ್.ಆರ್.ಎಫ್) ನಡುವಿನ ನಡೆದ ಭಾರೀ ಯುದ್ದದಲ್ಲಿ ಸುಮಾರು 600 ಮಂದಿ ತಾಲಿಬಾನಿಗಳನ್ನು ಹತ್ಯೆಗೈಯಲಾಗಿದೆ ಎಂದು ಎನ್ ಆರ್ ಎಫ್ ಹೇಳಿಕೊಂಡಿದೆ.
ಈ ಬಗ್ಗೆ ಟ್ವೀಟ್ ಮಾಡಿದ ಎನ್ ಆರ್ ಎಫ್ ವಕ್ತಾರ ಫಾಹಿಮ್ ದಸ್ತಿ, "ಇಂದು ಬೆಳಿಗ್ಗೆಯಿಂದೀಚೆಗೆ ಪಂಜ್ಶೀರ್ನ ವಿವಿಧ ಜಿಲ್ಲೆಗಳಲ್ಲಿ 600 ಕ್ಕೂ ಅಧಿಕ ಮಂದಿ ತಾಲಿಬಾನ್ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಹಾಗೆಯೇ ಸಾವಿರಕ್ಕೂ ಅಧಿಕ ತಾಲಿಬಾನ್ ಭಯೋತ್ಪಾದಕರನ್ನು ಬಂಧನ ಮಾಡಲಾಗಿದೆ ಅಥವಾ ಅವರಾಗಿಯೇ ಶರಣಾಗಿದ್ದಾರೆ," ಎಂದು ತಿಳಿಸಿದ್ದಾರೆ.

ಇನ್ನು ಇತರ ಅಫ್ಘಾನ್ ಪ್ರಾಂತ್ಯಗಳಿಂದ ಯುದ್ದ ಸಲಕರಣೆಗಳನ್ನು ಪಡೆಯುವಲ್ಲಿ ತಾಲಿಬಾನ್ಗೆ ಸಮಸ್ಯೆ ಎದುರಾಗಿದೆ ಎಂದು ವಕ್ತಾರರು ತಿಳಿಸಿರುವುದಾಗಿ ಸ್ಪುಟ್ನಿಕ್ ನ್ಯೂಸ್ ವರದಿ ಮಾಡಿದೆ. ಈ ನಡುವೆ ಪಂಜ್ಶೀರ್ನ ವಿರೋಧಿ ಪಡೆಗಳ ವಿರುದ್ದ ತಾಲಿಬಾನ್ ಆಕ್ರಮಣವು ಈ ಪ್ರದೇಶದಲ್ಲಿ ಭೂ ಗಣಿಗಳು ಇರುವ ಕಾರಣದಿಂದಾಗಿ ನಿಧಾನಗತಿಯಲ್ಲಿ ಸಾಗಿದೆ ಎಂದು ಕೂಡಾ ಮಾಧ್ಯಮಗಳು ವರದಿ ಮಾಡಿದೆ.
ಅಫ್ಘಾನಿಸ್ತಾನದ ಮಾಜಿ ಗೆರಿಲ್ಲಾ ಕಮಾಂಡರ್ ಅಹ್ಮದ್ ಶಾ ಮಸೂದ್ ಪುತ್ರ ಅಹ್ಮದ್ ಮಸೂದ್ ಹಾಗೂ ಕಾರ್ಯಾಧ್ಯಕ್ಷ ಅಮರುಲ್ಲಾ ಸಲೇಹ್ ನೇತೃತ್ವದ ಎನ್ ಆರ್ ಎಫ್ ಸಂಘಟನೆಯ ಭದ್ರಕೋಟೆ ಪಂಜ್ಶೀರ್ ಆಗಿದೆ. ಅಮೆರಿಕ ಸೇನೆ ಅಫ್ಘಾನಿಸ್ತಾನದಿಂದ ತನ್ನ ಸೇನೆಯನ್ನು ವಾಪಾಸ್ ಪಡೆಯಲು ಆರಂಭ ಮಾಡಿದ ಕೂಡಲೇ ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿದೆ.
ಕಳೆದ ಕೆಲ ವಾರಗಳ ಹಿಂದೆ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ಕೂಡಾ ತನ್ನ ವಶಕ್ಕೆ ಪಡೆದುಕೊಂಡ ತಾಲಿಬಾನ್ ಆಗಸ್ಟ್ 31 ರಂದು ಯುಎಸ್ ಪಡೆಗಳು ಹಾಗೂ ಇತರೆ ಬೇರೆ ದೇಶಗಳು ಅಫ್ಘಾನಿಸ್ತಾನದಿಂದ ಸ್ಥಳಾಂತರ ಪ್ರಕ್ರಿಯೆ ಕೊನೆಗೊಳಿಸುವಷ್ಟರಲ್ಲಿ ಇಡೀ ಅಫ್ಘಾನಿಸ್ತಾನ ದೇಶವನ್ನೇ ತನ್ನ ವಶಕ್ಕೆ ಪಡೆದುಕೊಂಡಿದೆ. ಆದರೆ 1996 ರಿಂದ 2001 ರವರೆಗೆ ದೇಶದ ಆಡಳಿತವನ್ನು ತಾಲಿಬಾನ್ ನಡೆಸುತ್ತಿದ್ದಾಗಲೂ ತಾಲಿಬಾನ್ಗೆ ಕಣಿವೆ ಪ್ರದೇಶವನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ಆಗಿರಲಿಲ್ಲ.
ವಿರೋಧಿ ಪಡೆ ನ್ಯಾಷನಲ್ ರೆಸಿಸ್ಟೆನ್ಸ್ ಪ್ರಂಟ್ ಆಫ್ ಅಫ್ಘಾನಿಸ್ತಾನ (ಎನ್.ಆರ್.ಎಫ್) ಹಾಗೂ ತಾಲಿಬಾನ್ಗೆ ಪಂಜ್ಶೀರ್ನಲ್ಲಿ ಯುದ್ದ ನಡೆದಿದ್ದು, 600 ಕ್ಕೂ ಅಧಿಕ ಮಂದಿ ತಾಲಿಬಾನ್ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಎನ್ ಆರ್ ಎಫ್ ಹೇಳಿಕೊಂಡಿದ್ದಾರೆ. ಇತ್ತ ತಾಲಿಬಾನ್ ತಾವು ಮೇಲುಗೈ ಸಾಧಿಸಿದ್ದೇವೆ ಎಂದು ಹೇಳಿಕೊಂಡಿದೆ. ಒಟ್ಟಿನಲ್ಲಿ ಎರಡು ಬಣಗಳು ಕೂಡಾ ನಾವು ಈ ಯುದ್ದದಲ್ಲಿ ಮೇಲುಗೈ ಸಾಧಿಸಿದ್ದೇವೆ ಎಂದು ಹೇಳಿಕೊಂಡಿದೆ. ಆದರೆ ಎರಡು ಬಣಗಳು ಕೂಡಾ ಇದನ್ನು ಸಾಬೀತು ಪಡಿಸುವ ಯಾವುದೇ ಸಾಕ್ಷಿಗಳನ್ನು ನೀಡಿಲ್ಲ.
ಇನ್ನು ತಾಲಿಬಾನ್ ಹಾಗೂ ಎನ್ ಆರ್ ಎಫ್ ನಡುವೆ ಪಂಜ್ಶೀರ್ನಲ್ಲಿ ಯುದ್ದ ಮುಂದುವರೆದಿದೆ. ಇನ್ನು ಈ ಯುದ್ದದ ಬಗ್ಗೆ ತಾಲಿಬಾನ್ ಹೇಳಿಕೆಯನ್ನು ಅಲ್ ಜಝೀರಾ ವರದಿ ಮಾಡಿದೆ. ರಾಜಧಾನಿ ಬಝ್ರಕ್ ಹಾಗೂ ಪ್ರಾಂತೀಯ ಗವರ್ನರ್ ನಿವಾಸಕ್ಕೆ ಹೋಗುವ ದಾರಿಯಲ್ಲಿ ನೆಲ ಬಾಂಬ್ಗಳನ್ನು ಇರಿಸಿರುವ ಕಾರಣದಿಂದಾಗಿ ನಮ್ಮ ಮುನ್ನಡೆ ನಿಧಾನವಾಗಿದೆ ಎಂದು ತಿಳಿಸಿದೆ ಎಂದು ಅಲ್ ಜಝೀರಾ ವರದಿ ಮಾಡಿದೆ.
ಈ ನಡುವೆ ತಾಲಿಬಾನ್ ವಕ್ತಾರ ಬಿಲಾಲ್ ಕರೀಮಿ, "ನಾವು ಖಿಂಜ್ ಹಾಗೂ ಉನಬ್ಹ್ ಜಿಲ್ಲೆಗಳನ್ನು ವಶಕ್ಕೆ ಪಡೆದಿದ್ದೇವೆ ಎಂದು ಹೇಳಿದ್ದಾರೆ. "ಈ ಪ್ರಾಂತ್ಯದಲ್ಲಿ ಸುಮಾರು ಏಳು ಜಿಲ್ಲೆಗಳು ಇದ್ದು ಈ ಪೈಕಿ ನಾಲ್ಕು ಜಿಲ್ಲೆಗಳನ್ನು ತಾಲಿಬಾನ್ ಪಡೆಗಳು ತನ್ನ ವಶಕ್ಕೆ ಪಡೆದುಕೊಂಡಿದೆ," ಎಂದು ಕೂಡಾ ತಾಲಿಬಾನ್ ವಕ್ತಾರ ಬಿಲಾಲ್ ಕರೀಮಿ ಹೇಳಿದ್ದಾರೆ.
(ಒನ್ ಇಂಡಿಯಾ ಸುದ್ದಿ)












Click it and Unblock the Notifications