ಭಯೋತ್ಪಾದನೆಯ ತವರು ನೆಲ ಪಾಕ್ ಗೆ ಇರಾನ್ ನ ಖಡಕ್ ವಾರ್ನಿಂಗ್
ಭಯೋತ್ಪಾದಕರನ್ನು ಛೂ ಬಿಟ್ಟು ಪರೋಕ್ಷ ಯುದ್ಧ ನಡೆಸುವ ಪಾಕಿಸ್ತಾನಕ್ಕೆ ಛೀಮಾರಿ ಹಾಕುವ ದೇಶಗಳ ಸಾಲಿಗೆ ಇರಾನ್ ಕೂಡ ಸೇರ್ಪಡೆಯಾಗಿದೆ. ನಿಮ್ಮ ದೇಶದ ಭಯೋತ್ಪಾದಕರ ವಿರುದ್ಧ ಕ್ರಮ ತೆಗೆದುಕೊಳ್ಳಲಿಲ್ಲ ಅಂದರೆ ನಾವೇ ವಿಚಾರಿಸಿಕೊಳ್ಳಬೇಕಾಗುತ್ತದೆ ಎಂದು ಗಟ್ಟಿಯಾದ ಎಚ್ಚರಿಕೆ ಕೂಡ ಇರಾನ್ ನೀಡಿದೆ.
ಇರಾನ್ ನ ಜನರಲ್ ಖಾಸೀಂ ಸೊಲೈಮನಿ ಪಾಕಿಸ್ತಾನ ಸರಕಾರಕ್ಕೆ ಹಾಗೂ ಸೇನೆಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. "ಪಾಕಿಸ್ತಾನ ಸರಕಾರಕ್ಕೆ ನನ್ನ ಪ್ರಶ್ನೆ ಇದೆ: ನೀವು ಯಾವ ಕಡೆ ಸಾಗುತ್ತಿದ್ದೀರಿ? ನೆರೆ-ಹೊರೆ ರಾಷ್ಟ್ರಗಳ ಗಡಿಯಲ್ಲಿ ಅಶಾಂತಿ ವಾತಾವರಣ ಸೃಷ್ಟಿಸುತ್ತಿದ್ದೀರಿ. ನೀವು ಅಭದ್ರತೆ ಸೃಷ್ಟಿಸಲು ಬಯಸುವ ಇನ್ಯಾವುದಾದರೂ ದೇಶ ಬಾಕಿ ಉಳಿದಿದೆಯಾ" ಎಂದು ಸೊಲೈಮನಿ ಕೇಳಿದ್ದಾರೆ.
ಅಣ್ವಸ್ತ್ರ ಇದೆ ಅಂತ ಹೇಳಿಕೊಳ್ಳುವವರು ನೀವೇನಾ? ಈ ಭಾಗದಲ್ಲಿ ಇರುವ ನೂರಾರು ಸಂಖ್ಯೆಯ ಉಗ್ರಗಾಮಿಗಳನ್ನು ನಾಶ ಮಾಡಲು ನಿಮ್ಮಿಂದ ಆಗುತ್ತಿಲ್ಲವೆ? ಎಂದು ಪ್ರಶ್ನಿಸಿದ್ದಾರೆ. ಈ ಸಮಸ್ಯೆಗೆ ಇರಾನ್ ಬಳಿ ಪರಿಹಾರ ಇದೆಯಾ ಎಂದು ಪರೀಕ್ಷಿಸಬೇಡಿ ಎಂದು ಕೂಡ ಹೇಳಿದ್ದಾರೆ.
ಈಚೆಗಿನ ವರ್ಷಗಳಲ್ಲಿ ಭಾರತ ಹಾಗೂ ಇರಾನ್ ಭಯೋತ್ಪಾದನೆ ವಿರೋಧಿ ಚಟುವಟಿಕೆಗಳನ್ನು ಸಹಕಾರದಿಂದ ಕೈಗೊಂಡಿವೆ. ಇದೇ ವಿಚಾರ ಮುಂದಿನ ಎರಡೂ ದೇಶಗಳ ಭೇಟಿ ವೇಳೆ ಮುಖ್ಯವಾಗಿ ಚರ್ಚೆ ಆಗಲಿದೆ. ಕಳೆದ ವಾರಾಂತ್ಯಕ್ಕೆ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಇರಾನ್ ಗೆ ತೆರಳಬೇಕಿತ್ತು. ಆದರೆ ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಉದ್ವಿಗ್ನ ವಾತಾವರಣ ಇರುವುದರಿಂದ ಭೇಟಿ ಮುಂದಕ್ಕೆ ಹೋಗಿದೆ.

ಇರಾನ್-ಪಾಕ್ ಮಧ್ಯೆ ಗೋಡೆ ನಿರ್ಮಾಣ ಮಾಡುತ್ತೇವೆ
ಇರಾನ್ ಒಳಗೆ ನಡೆಯುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆ ತಡೆಯಲು ಪಾಕಿಸ್ತಾನಕ್ಕೆ ಸಾಧ್ಯವಾಗಿಲ್ಲ ಅಂತಾದರೆ ಪಾಕ್ ನೊಳಗೆ ನುಗ್ಗಿ ಇರಾನ್ ತನ್ನ ಕ್ರಮ ತೆಗೆದುಕೊಳ್ಳುತ್ತದೆ. ಪಾಕಿಸ್ತಾನದ ಜತೆಗೆ ಇರಾನ್ ಹಂಚಿಕೊಳ್ಳುವ ಗಡಿಯ ಉದ್ದಕ್ಕೂ ಗೋಡೆ ನಿರ್ಮಾಣ ಮಾಡಲು ದೇಶ ಬಯಸುತ್ತದೆ ಎಂದು ಅಲ್ಲಿನ ವಿದೇಶಾಂಗ ನೀತಿ ಆಯೋಗದ ಅಧ್ಯಕ್ಷ ಹೇಳಿದ್ದಾರೆ.

ಐಎಸ್ ಐನಿಂದ ಉತ್ತರ ಸಿಗಬೇಕು
ಈ ಅಪರಾಧ ಕೃತ್ಯಗಳನ್ನು ಬಲೂಚಿಸ್ತಾನದ ಒಂದು ಬುಡಕಟ್ಟು ನಡೆಸುತ್ತಿದೆ. ನೆರೆ ದೇಶದಲ್ಲಿ ಆತ್ಮಹತ್ಯಾ ದಾಳಿ ನಡೆಸಲು ಅವರಿಗೆ ತರಬೇತಿ ನೀಡಲಾಗುತ್ತದೆ. ಪಾಕಿಸ್ತಾನ ಹಾಗೂ ಅಲ್ಲಿನ ಬೇಹುಗಾರಿಕಾ ಸಂಸ್ಥೆ ಐಎಸ್ ಐ ಇರಾನ್ ಸರಕಾರಕ್ಕೆ ಉತ್ತರ ನೀಡಬೇಕು. ಭಯೋತ್ಪಾದಕರಿಗೆ ಪಾಕಿಸ್ತಾನವು ಸ್ವರ್ಗದಂತಾಗಲು ಕಾರಣ ಏನು ಹಾಗೂ ಉಗ್ರ ಸಂಘಟನೆಗಳನ್ನು ಇರಾನ್ ನೊಳಗೆ ಕಳುಹಿಸುತ್ತಿರುವುದು ಏಕೆ ಎಂದು ಪ್ರಶ್ನಿಸಲಾಗಿದೆ.

ಉಗ್ರರ ಅಡಗುದಾಣಗಳ ಬಗ್ಗೆ ಮಾಹಿತಿ ಇದೆ
ಜೈಶ್-ಅಲ್-ಅದಲ್ ಎಂದು ಇರಾನ್ ನಲ್ಲಿ ಕರೆಯುವ ಭಯೋತ್ಪಾದನಾ ಸಂಘಟನೆಗೆ ಪಾಕಿಸ್ತಾನಿ ಬೇಹುಗಾರಿಕಾ ಸಂಸ್ಥೆ ಬೆಂಬಲ ನೀಡುತ್ತಿದೆ. ಅದಕ್ಕೆ ಪಾಕಿಸ್ತಾನ ತಕ್ಕ ಬೆಲೆ ತೆರಬೇಕಾಗುತ್ತದೆ. ಇನ್ನು ಮುಂದೆ ಇದಕ್ಕೆ ತೆರಬೇಕಾದ ಬೆಲೆ ಭಾರೀ ಆಗಿರುತ್ತದೆ. ಎಲ್ಲೆಲ್ಲಿ ಉಗ್ರರ ಅಡಗುದಾಣಗಳಿವೆ ಎಂದು ಪಾಕ್ ಬೇಹುಗಾರಿಕೆ ಸಂಸ್ಥೆಗೆ ತಿಳಿದಿದ್ದರೂ ಅದು ಸುಮ್ಮನಿದೆ ಎಂದು ಇರಾನ್ ಹೇಳಿದೆ.

ಭಾರತ ಯಾವಾಗಲೋ ದಾಳಿ ಮಾಡಬೇಕಿತ್ತು
ಅಫ್ಘಾನಿಸ್ತಾನ ಅಧ್ಯಕ್ಷೀಯ ಚುನಾವಣೆಯಲ್ಲಿ ಆಕಾಂಕ್ಷಿಯೂ ಆಗಿರುವ, ಗುಪ್ತಚರ ಇಲಾಖೆ ಮಾಜಿ ಮುಖ್ಯಸ್ಥ ರಹಮತ್ ಉಲ್ಲಾ ನಬಿಲ್ ಮಾತನಾಡಿ, ಪಾಕಿಸ್ತಾನದ ಐಎಸ್ ಐ ನಲವತ್ತೈದರಿಂದ ನಲವತ್ತೆಂಟು ಉಗ್ರ ಸಂಘಟನೆಗಳಿಗೆ ನೆಲೆ ಒದಗಿಸಿದೆ. ಬೆಂಬಲ ನೀಡುತ್ತಿದೆ. ಭಯೋತ್ಪಾದನೆಯನ್ನು ಪಾಕಿಸ್ತಾನ ರಣತಂತ್ರದಂತೆ ಹಾಗೂ ಉಪಕರಣದಂತೆ ಬಳಸುತ್ತಿದೆ. ಭಾರತವು ಬಾಲಕೋಟ್ ನ ಮೇಲಿನ ದಾಳಿಯನ್ನು ಬಹಳ ಮುಂಚೆಯೇ ಮಾಡಬೇಕಿತ್ತು ಎಂದಿದ್ದಾರೆ.











Click it and Unblock the Notifications