ಉಕ್ರೇನ್ನ ಸ್ವಾಧೀನ ಖಂಡಿಸಿ ವಿಶ್ವಸಂಸ್ಥೆಯಲ್ಲಿ ಮತದಾರ; ಭಾರತ ತಟಸ್ಥ
ಕೀವ್, ಅಕ್ಟೋಬರ್ 13: ವಿಶ್ವಸಂಸ್ಥೆಯಲ್ಲಿ ಭಾರತವು ಮತ್ತೊಮ್ಮೆ ತನ್ನ ತಟಸ್ಥ ನಿಲುವು ಪ್ರದರ್ಶಿಸಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು(ಯುಎನ್ಜಿಎ) ಬುಧವಾರ ನಾಲ್ಕು ಉಕ್ರೇನಿಯನ್ ಪ್ರದೇಶಗಳನ್ನು ರಷ್ಯಾ ಸ್ವಾಧೀನಪಡಿಸಿಕೊಂಡಿರುವುದನ್ನು ಖಂಡಿಸುವ ನಿರ್ಣಯವನ್ನು ಅಂಗೀಕರಿಸಿತು.
ಒಟ್ಟು 143 ಸದಸ್ಯರು ನಿರ್ಣಯದ ಪರವಾಗಿ ಮತ ಚಲಾಯಿಸಿದರೆ ಐವರು ವಿರುದ್ಧವಾಗಿ ಮತ ಚಲಾಯಿಸಿದರು. ಭಾರತ ಸೇರಿದಂತೆ 35 ರಾಷ್ಟ್ರಗಳು ಈ ನಿರ್ಣಯದ ಸಂದರ್ಭದಲ್ಲಿ ಗೈರಾಗಿದ್ದರು.
ಪುಟಿನ್ ಬೇಡಿಕೆಗೆ ವಿರುದ್ಧವಾಗಿ ಮತ ಚಲಾಯಿಸಿದ ಒಟ್ಟು 107 ರಾಷ್ಟ್ರಗಳು; ರಷ್ಯಾಕ್ಕೆ ಹೊಡೆತ ?
ಭದ್ರತಾ ಮಂಡಳಿಯಲ್ಲಿ ಇದೇ ರೀತಿಯ ಪ್ರಸ್ತಾವನೆಯನ್ನು ರಷ್ಯಾ ವೀಟೋ ಮಾಡಿದ ಕೆಲವು ದಿನಗಳ ನಂತರ ಈ ನಿರ್ಣಯವು ಬಂದಿದೆ. ಅದರಲ್ಲೂ ಸಹ ಭಾರತವು ಅಂತರ ಕಾಯ್ದುಕೊಂಡಿತ್ತು.
ಯುಎನ್ಜಿಎಯಲ್ಲಿ ಉಕ್ರೇನ್-ರಷ್ಯಾ ಘರ್ಷಣೆ:
ಕಳೆದ ಸೋಮವಾರ ಯುಎನ್ಜಿಎಯಲ್ಲಿ ಉಕ್ರೇನ್ ಮತ್ತು ರಷ್ಯಾ ನಡುವೆ ಘರ್ಷಣೆ ನಡೆದಿತ್ತು. ಇದಾಗಿ ಎರಡು ದಿನಗಳ ನಂತರ ಈ ಮತದಾನ ಪ್ರಕ್ರಿಯೆ ನಡೆಯಿತು. ಇತ್ತೀಚಿನ ನಿರ್ಣಯವನ್ನು ಸದಸ್ಯರು ಅಂಗೀಕರಿಸಿದ್ದಾರೆ, ಜನಮತ ಸಂಗ್ರಹಗಳೆಂದು ಕರೆಯಲ್ಪಡುವ ಇಲ್ಲಿ ಯಾರೂ ವೀಟೋವನ್ನು ಚಲಾಯಿಸುವುದಿಲ್ಲ. ನಾಲ್ಕು ಉಕ್ರೇನಿಯನ್ ಪ್ರದೇಶಗಳನ್ನು ರಷ್ಯಾ ಅಕ್ರಮ ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸಿದೆ ಎಂದು ಖಂಡಿಸಲಾಗಿದೆ.
ರಷ್ಯಾದ ಕರೆಯನ್ನು ತಿರಸ್ಕರಿಸಲು ಭಾರತದ ಮತ:
ಉಕ್ರೇನಿಯನ್ ಪ್ರದೇಶಗಳನ್ನು "ಅಕ್ರಮ ಸ್ವಾಧೀನಪಡಿಸಿಕೊಳ್ಳಲು" ಪ್ರಯತ್ನಿಸುತ್ತಿರುವ ಮಾಸ್ಕೋ ನಡೆಯನ್ನು ಖಂಡಿಸುವ ಕರಡು ನಿರ್ಣಯದ ಮೇಲೆ ಯುಎನ್ಜಿಎಯಲ್ಲಿ ರಹಸ್ಯ ಮತದಾನವನ್ನು ನಡೆಸಲು ರಷ್ಯಾ ಕರೆ ನೀಡಿದ್ದು, ಇದನ್ನು ತಿರಸ್ಕರಿಸುವುದರ ಪರವಾಗಿ ಭಾರತವು ಮತ ಚಲಾಯಿಸಿತ್ತು. ಉಕ್ರೇನ್ ಮೇಲಿನ ನಿರ್ಣಯದ ಮೇಲೆ ರಷ್ಯಾ ರಹಸ್ಯ ಮತದಾನವನ್ನು ಪ್ರಸ್ತಾಪಿಸಿದ ನಂತರ ಅಲ್ಬೇನಿಯಾ ಮುಕ್ತ ಮತವನ್ನು ಕೋರಿತು. ಅಲ್ಬೇನಿಯಾ ಕರೆದ ಕಾರ್ಯವಿಧಾನದ ಮತದ ಪರವಾಗಿ ಭಾರತ ಮತ ಹಾಕಿತು.
ಅಲ್ಬೇನಿಯಾದ ಪ್ರಸ್ತಾವನೆ ಪರವಾಗಿ 107 ಮತ:
ಅಲ್ಬೇನಿಯಾದ ಪ್ರಸ್ತಾವನೆಯ ಪರವಾಗಿ 107 ಮತಗಳು ಬಂದಿದ್ದು, 13 ದೇಶಗಳು ಮತವನ್ನು ವಿರೋಧಿಸಿದವು ಮತ್ತು 39 ಗೈರು ಹಾಜರಾಗಿದ್ದವು. ಚೀನಾ, ಇರಾನ್ ಮತ್ತು ರಷ್ಯಾ ಸೇರಿದಂತೆ 24 ದೇಶಗಳು ಮತ ಚಲಾಯಿಸಲಿಲ್ಲ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಡೊನೆಟ್ಸ್ಕ್, ಲುಹಾನ್ಸ್ಕ್, ಖೆರ್ಸನ್ ಮತ್ತು ಜಪೋರಿಝಿಯಾ ಎಂಬ ನಾಲ್ಕು ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳುವ ಔಪಚಾರಿಕ ದಾಖಲೆಗಳಿಗೆ ಸಹಿ ಹಾಕಿದ್ದರು. ಇದೇ ವಾರ ಕ್ರೈಮಿಯಾ ಸೇತುವೆಯ ಸ್ಫೋಟದ ನಂತರ ರಷ್ಯಾ ಮತ್ತು ಉಕ್ರೇನ್ ನಡುವೆ ಉದ್ವಿಗ್ನತೆ ಹೆಚ್ಚಾಗಿದ್ದು, ಮಾಸ್ಕೋದಿಂದ ಪ್ರಮುಖ ಉಕ್ರೇನ್ ನಗರಗಳ ಮೇಲೆ ಕ್ಷಿಪಣಿ ದಾಳಿಯನ್ನು ಪ್ರತೀಕಾರ ರೂಪದಲ್ಲಿ ಹಾರಿಸಲಾಗುತ್ತಿದೆ.
ರಷ್ಯಾ ದಾಳಿಗೆ ಗುಟೆರಸ್ ಖಂಡನೆ:
ಉಕ್ರೇನ್ ಮೇಲೆ ರಷ್ಯಾದ ನಡೆಸುತ್ತಿರುವ ದಾಳಿಯನ್ನು ಖಂಡಿಸಿದ ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಯುದ್ಧದ "ಮತ್ತೊಂದು ಸ್ವೀಕಾರಾರ್ಹವಲ್ಲದ ನಡೆ," ಎಂದು ಹೇಳಿದ್ದಾರೆ. ನಾಗರಿಕ ಪ್ರದೇಶಗಳಿಗೆ ವ್ಯಾಪಕ ಹಾನಿಯನ್ನುಂಟು ಮಾಡಿದ ಮತ್ತು ಹತ್ತಾರು ಮಂದಿ ಸಾವು ಮತ್ತು ಗಾಯಗಳಿಗೆ ಕಾರಣವಾದ ದಾಳಿಯನ್ನು ವಿರೋಧಿಸಿದ್ದಾರೆ. ಕಳೆದ ಫೆಬ್ರವರಿ 24ರಂದು ರಷ್ಯಾ ಆರಂಭಿಸಿದ ಆಕ್ರಮಣಕ್ಕೆ ನಾಗರಿಕರು ಹೆಚ್ಚಿನ ಬೆಲೆ ತೆರುವಂತಹ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ.