Chandrayaan-3: ಪಾಕಿಸ್ತಾನಕ್ಕೆ ಉರಿ ಉರಿ.. ಭಾರತಕ್ಕೆ ಹೆಮ್ಮೆಯ ಗರಿ!
ನವದೆಹಲಿ: ಭಾರತ ಏನೇ ಮಾಡಿದರೂ ವೈರಿ ರಾಷ್ಟ್ರಗಳಿಗೆ ಹೊಟ್ಟೆ ಉರಿಯುತ್ತೆ, ಕಣ್ಣೂ ಕುಕ್ಕುತ್ತೆ. ಅಕಸ್ಮಾತ್ ಎಡವಿದರೆ ಅದನ್ನೇ ಆಡಿಕೊಳ್ಳುತ್ತವೆ ವೈರಿ ರಾಷ್ಟ್ರಗಳು. ಅದರಲ್ಲೂ ಈ ಸಾಲಿನಲ್ಲಿ ಪಾಕಿಸ್ತಾನ ಎತ್ತಿದ ಕೈ. ಇಂತಿಪ್ಪ ಪಾಕಿಸ್ತಾನ ಇದೀಗ ಭಾರತದ 'ಇಸ್ರೋ' ಉಡಾವಣೆ ಮಾಡಿದ 'ಚಂದ್ರಯಾನ-3' ಬಗ್ಗೆ ಪ್ರತಿಕ್ರಿಯೆ ನೀಡಿದೆ. ಹಾಗಾದರೆ ಪಾಕಿಸ್ತಾನ 'ಚಂದ್ರಯಾನ-3' ಬಗ್ಗೆ ಹೇಳಿದ್ದೇನು? ಬನ್ನಿ ತಿಳಿಯೋಣ.
ಪಾಕಿಸ್ತಾನಿ ನಾಯಕರಿಗೆ ಭಾರತ ಏನೇ ಸಾಧನೆ ಮಾಡಿದ್ರೂ ಹೊಟ್ಟೆ ಕಿಚ್ಚು. ಈ ಕಾರಣಕ್ಕೆ ಭಾರತದ ಸಾಧನೆ ಬಗ್ಗೆ ಆಗಾಗ ಬಾಯಿಗೆ ಬಂದಂತೆ ಮಾತನಾಡಿ ಸೈಲೆಂಟ್ ಆಗುತ್ತಿರುತ್ತಾರೆ ಪಾಕ್ ನಾಯಕರು. ಇದೇ ರೀತಿ 2019ರಲ್ಲಿ ಭಾರತದ 'ಚಂದ್ರಯಾನ-2' ಕೊನೇ ಕ್ಷಣದಲ್ಲಿ ಕೈಕೊಟ್ಟಿತ್ತು. ಆಗ ಇಡೀ ಜಗತ್ತೇ ಭಾರತಕ್ಕೆ ಹಾಗೂ 'ಇಸ್ರೋ' ವಿಜ್ಞಾನಿಗಳಿಗೆ ಧೈರ್ಯ ಹೇಳಿತ್ತು. ಆದರೆ ಆ ಸಮಯದಲ್ಲಿ ಬಾಯಿಗೆ ಬಂದಂತೆ ಹೇಳಿಕೆ ನೀಡಿದ್ದ ಅಂದಿನ ಪಾಕ್ ಐಟಿ ಸಚಿವ ಇವತ್ತು ರಾಗ ಬದಲಾಯಿಸಿದ್ದಾನೆ. ಮಾಜಿ ಸಚಿವ ಫಾವದ್ ಚೌಧರಿ ಹೇಳಿಕೆ ಈಗ ಪಾಕಿಸ್ತಾನದ ರಾಜಕೀಯದಲ್ಲಿ ಸಂಚಲನ ಸೃಷ್ಟಿಮಾಡಿದೆ.

ಆಡಿಕೊಂಡವರ ಬಾಯಲ್ಲೇ ಹೊಗಳಿಕೆ!
ಹೌದು, 2019ರಲ್ಲಿ ಭಾರತದ 'ಚಂದ್ರಯಾನ-2' ಕೊನೇ ಕ್ಷಣದಲ್ಲಿ ಸೋತು ಹೋಗಿದ್ದಾಗ ಶತಕೋಟಿ ಭಾರತೀಯರು ಕಣ್ಣೀರು ಹಾಕಿದ್ದರು. ಅದರಲ್ಲೂ ಅಂದಿನ ಇಸ್ರೋ ಅಧ್ಯಕ್ಷರೇ ಅತ್ತುಬಿಟ್ಟರು. ಪರಿಸ್ಥಿತಿ ಹೀಗಿದ್ದಾಗ ಇಡೀ ಜಗತ್ತೇ ಭಾರತದ ಪ್ರಯತ್ನಕ್ಕೆ ನಮಿಸಿತ್ತು. ಆದ್ರೆ ಇದೇ ಹೊತ್ತಲ್ಲಿ ಆಗ ಪಾಕಿಸ್ತಾನದ ಐಟಿ ಸಚಿವನಾಗಿದ್ದ ಫಾವದ್ ಚೌಧರಿ, ಇಸ್ರೋ ಬಗ್ಗೆ ಪರೋಕ್ಷವಾಗಿ ಆಡಿಕೊಂಡಿದ್ದ. ಈಗ ಭಾರತ ಯಶಸ್ವಿಯಾಗಿ 'ಚಂದ್ರಯಾನ-3' ಲಾಂಚ್ ಮಾಡಿದ್ದು, ಸ್ವತಃ ಇದೇ ಫಾವದ್ ಚೌಧರಿ ಭಾರತಕ್ಕೆ ಶುಭ ಕೋರಿದ್ದಾರೆ. ಅಲ್ಲದೆ ಟ್ವೀಟ್ ಮೂಲಕ ಇಸ್ರೋಗೆ ಕಂಗ್ರಾಟ್ಸ್ ಹೇಳಿದ್ದಾರೆ.
ಬಾಹ್ಯಾಕಾಶದಲ್ಲಿ ಭಾರತದ ದಿಗ್ವಿಜಯ ಯಾತ್ರೆ!
ನಿನ್ನೆ ಮಧ್ಯಾಹ್ನ ಸರಿಯಾಗಿ 2:35ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿನ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಭಾರತದ 'ಚಂದ್ರಯಾನ-3' ರಾಕೆಟ್ ಲಾಂಚ್ ಆಗಿ ಯಶಸ್ಸು ಕಂಡಿದೆ. 3900 ಕಿಲೋ ತೂಕವಿರುವ ಬಾಹ್ಯಾಕಾಶ ನೌಕೆ ಮತ್ತು ರೋವರ್ ಹೊತ್ತ ರಾಕೆಟ್ ಬಾಹ್ಯಾಕಾಶ ತಲುಪಿದೆ. ಭೂಮಿಯಿಂದ 3,84,000 ಕಿಲೋಮೀಟರ್ ದೂರದಲ್ಲಿರುವ ಚಂದ್ರನತ್ತ ಭಾರತದ ಯಾತ್ರೆ ಹೊರಟಿದೆ. ಬಾಹ್ಯಾಕಾಶ ವಿಜ್ಞಾನಿಗಳ ಕುತೂಹಲದ ಕೇಂದ್ರ ಬಿಂದು, ಚಂದ್ರನ ದಕ್ಷಿಣ ಧ್ರುವದ ಅಧ್ಯಯನ ನಡೆಸುವುದೇ ಯೋಜನೆ ಟಾರ್ಗೆಟ್. ಹೀಗೆ ಇಡೀ ಜಗತ್ತೇ ಮೆಚ್ಚುವ ಕೆಲಸವನ್ನ ಭಾರತದ ಇಸ್ರೋ ಮಾಡಿದ್ದು, ಪಾಕಿಸ್ತಾನ ಕೂಡ ಈ ಸಾಧನೆಗೆ ಜೈ ಎಂದಿದೆ.
Congratulations to Indian space and Science community on the launch of #Chandrayan3 wishing you all the best
— Ch Fawad Hussain (@fawadchaudhry) July 14, 2023
ಏನೆಲ್ಲಾ ಹುಡುಕಲಿದೆ 'ಚಂದ್ರಯಾನ-3'?
ಚಂದ್ರನ ಮೇಲೆ ನೀರು ಹುಡುಕುವ ಕೆಲಸ ಸೇರಿ, ಸಾಕಷ್ಟು ಅಧ್ಯಯನವನ್ನ ನಡೆಸಲು ಇಸ್ರೋ ವಿಜ್ಞಾನಿಗಳು ಸಜ್ಜಾಗಿದ್ದಾರೆ. ಅಷ್ಟಕ್ಕೂ ಸಾವಿರಾರು ವರ್ಷದಿಂದ ಮಾನವನ ಕುತೂಹಲದ ಕೇಂದ್ರಬಿಂದು ಚಂದ್ರ. ಹೀಗಾಗಿ ಚಂದ್ರನ ಮೇಲೆ ಮನುಷ್ಯನಿಗೆ ಸಾಕಷ್ಟು ಸೆಳೆತ ಇದ್ದೇ ಇದೆ. ಇಸ್ರೋ ಈ ಎಲ್ಲಾ ಕುತೂಹಲಗಳಿಗೆ ಉತ್ತರವನ್ನು ಹುಡುಕಿ ಚಂದ್ರನತ್ತ ಹೊರಟಿದೆ. ಇನ್ನೇನು 'ಚಂದ್ರಯಾನ -3' ಕೆಲವೇ ತಿಂಗಳಲ್ಲಿ ತನ್ನ ಗುರಿ ತಲುಪಿ, ಚಂದ್ರನ ಮೇಲೆ ರೋವರ್ ಇಳಿಸಲಿದೆ. ಜಗತ್ತಿನಲ್ಲೇ ಮೊದಲ ಬಾರಿಗೆ 2008ರಲ್ಲಿ ಇಸ್ರೋ ಸಂಸ್ಥೆ ಚಂದ್ರನ ಮೇಲೆ ನೀರು ಪತ್ತೆ ಮಾಡಿತ್ತು. ಈಗ ಎಲ್ಲ ಪ್ರಶ್ನೆಗೂ ಚಂದ್ರನ ಮೇಲೆ ಇಳಿದು ಉತ್ತರ ಕಂಡುಕೊಳ್ಳಲಿದೆ.
ಹೀಗೆ ಭಾರತ ಇಡೀ ಜಗತ್ತೇ ತಿರುಗಿ ನೋಡುವಂತೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಬೆಳೆಯುತ್ತಿದೆ. ಈ ಬಗ್ಗೆ ಹಿಂದೆ ಭಾರತದ ಸೋಲನ್ನು ಆಡಿಕೊಂಡಿದ್ದ ಮಾಜಿ ಸಚಿವನೇ ಜೈ ಎಂದಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ. ಇಮ್ರಾನ್ ಖಾನ್ ಪಕ್ಷದ ನಾಯಕ ಫಾವದ್ ಚೌಧರಿಯ ಟ್ವೀಟ್ ಈಗ ವೈರಲ್ ಆಗುತ್ತಿದೆ. ಈ ಕುರಿತು ಮಿಶ್ರ ಪ್ರತಿಕ್ರಿಯೆಗಳು ಕೂಡ ಕೇಳಿಬಂದಿವೆ. ಆದರೆ ಈವರೆಗೂ ಪಾಕಿಸ್ತಾನದ ಸರ್ಕಾರ ಅಧಿಕೃತವಾಗಿ ಚಂದ್ರಯಾನ ಯಶಸ್ಸಿನ ಕುರಿತು ಹೇಳಿಕೆ ನೀಡಿಲ್ಲ.












Click it and Unblock the Notifications