ವಿಮಾನ ಪತನದ ದುರಂತದಲ್ಲಿ ಅವರ ಜೀವ ಉಳಿಸಿದ್ದು ಟ್ರಾಫಿಕ್ ಜಾಮ್!
ಜಕಾರ್ತಾ, ಅಕ್ಟೋಬರ್ 30: 'ಆವತ್ತು ಹನುಮಂತನ ಬಾಲದಂಥ ಟ್ರಾಫಿಕ್ ನಲ್ಲಿ ಸಿಕ್ಕಿಹಾಕಿಕೊಂಡು, ಆ ವಿಮಾನವನ್ನು ಮಿಸ್ ಮಾಡಿಕೊಳ್ಳದೆ ಇದ್ದಿದ್ದರೆ... ಲಯನ್ ಏರ್ ವಿಮಾನ ಪತನದಲ್ಲಿ ಮೃತರಾದ 189 ಜನರೊಂದಿಗೆ 190 ನೆಯವರಾಗಿ ಇವರೂ ಇಹಲೋಕ ತ್ಯಜಿಸಬೇಕಿತ್ತು!'
ಆದರೆ ಹಾಗಾಗಲಿಲ್ಲ. ನಾವು ಬಾಯ್ತುಂಬ ಬೈದುಕೊಳ್ಳುವ ಟ್ರಾಫಿಕ್ಕೇ ಆ ವ್ಯಕ್ತಿಯನ್ನು ಸಾವಿನಿಂದ ಬಚಾವ್ ಮಾಡಿತ್ತು! ಇಂಡೋನೇಷ್ಯಾದ ಹಣಕಾಸು ಸಚಿವಾಲಯದ ಆಫೀಸರ್ ಆಗಿರುವ ಸೋನಿ ಸೆಟಿವಾನ್ ಎಂಬುವವರು ತಾವು ಈ ದುರಂತದಿಂದ ಪಾರಾದ ಪವಾಡದ ಬಗ್ಗೆ ಮಾತನಾಡುವಾಗ ರೋಮಾಂಚನವಾಗುತ್ತದೆ, ಆದರೆ 189 ಕ್ಕೂ ಎಹಚ್ಚು ಜನರನ್ನು ಬಲಿತೆಗೆದುಕೊಂಡ ಆ ಕರಾಳ ವಿಮಾನ ದುರಂತವನ್ನು ನೆನೆದರೆ ನೋವೂ ಆಗುತ್ತದೆ.

ಆ ದಿನ ಏನಾಯ್ತು?
ಸೋಮವಾರ ಬೆಳಿಗ್ಗೆ 6:20 ಕ್ಕೆ ಟೇಕಾಫ್ ಆದ ಫ್ಲೈಟ್ ಅನ್ನು ಸೋನಿ ಕೆಲವೇ ಸೆಕೆಂಡುಗಳ ಅಮತರದಲ್ಲಿ ಮಿಸ್ ಮಾಡಿಕೊಂಡರು. ಅವರು ಓಡೋಡಿ ಏರ್ ಪೋರ್ಟ್ ಗೆ ಬರುವ ಹೊತ್ತಿಗಾಗಲೇ ಫ್ಲೈಟು ಹೊರಟುಬಿಟ್ಟಿತ್ತು. ಜಕಾರ್ತಾ ನಗರಕ್ಕೆ ಬೆಳಗ್ಗಿನ ಜಾವ 3 ಗಂಟೆಗೇ ಬಂದಿದ್ದರೂ, ಅಲ್ಲಿನ ಕೆಟ್ಟ ಟ್ರಾಫಿಕ್ ನಿಂದಾಗಿ ಸೋನಿ ವಿಮಾನ ನಿಲ್ದಾಣ ತಲುಪಿದ್ದು ಬರೋಬ್ಬರಿ 6:20 ಕ್ಕೆ! ರಸೆತಯಲ್ಲಿ ಯಾಕಿಷ್ಟು ಟ್ರಾಫಿಕ್ ಎಂದು ಬೈದುಕೊಂಡೇ ಏರ್ ಪೋರ್ಟ್ ಗೆ ಬಂದಿದ್ದ ಸೋನಿ, ಫ್ಲೈಟು ತಪ್ಪಿದ್ದರಿಂದ ಸಾಕಷ್ಟು ಬೇಸರಗೊಂಡಿದ್ದರು.
|
ಜೀವ ಉಳಿಸಿದ ಟ್ರಾಫಿಕ್ ಜಾಮ್!
ವಿಮಾನ ತಪ್ಪಿಹೋದ ಬೇಸರದಲ್ಲಿ ಕುಳಿತ ಸೋನಿಗೆ ಕೆಲವೇ ಕ್ಷಣಗಳಲ್ಲಿ, ವಿಮಾನ ಪತನವಾಗಿ ಸಮುದ್ರದಲ್ಲಿ ಬಿದ್ದಿರುವ ಸುದ್ದಿ ತಿಳಿಯಿತು. ಒಮ್ಮೆ ಎದೆ ಝಲ್ಲೆಂದಿತ್ತು! ಟ್ರಾಫಿಕ್ ಜಾಮ್ ನಲ್ಲಿ ತಾನು ಸಿಲುಕದೆ ಇದಿದ್ದರೆ ಏನಾಗುತ್ತಿತ್ತು ಎಂಬುದನ್ನು ಊಹಿಸಿಕೊಳ್ಳುವುದಕ್ಕೂ ಭಯವಾಗಿ ಸೋನಿ ಕುಳಿತಿದ್ದರು!

ನಾನು ಬದುಕಿದ್ದೇನೆ ಮಗಳೆ...!
ವಿಮಾನ ಪತನದ ಸುದ್ದಿ ಟಿವಿಯಲ್ಲಿ ಬರುತ್ತಿದ್ದಂತೆಯೇ ಸೋನಿ ಅವರ ಕುಟುಂಬ ದಿಗ್ಭ್ರಮೆಗೊಂಡಿತ್ತು. ಅವರ ಮಗಳು ಜೋರಾಗಿ ಅಳುವುದಕ್ಕೆ ಆರಂಭಿಸಿದ್ದಳು. ಮನೆಯಿಂದ ಬಂದ ಫೋನ್ ರಿಸೀವ್ ಮಾಡಿ, 'ನಾನು ಬದುಕಿದ್ದೇನೆ ಮಗಳೇ...' ಎಂದು ಟ್ರಾಫಿಕ್ಕಿನಿಂದಾಗಿ ವಿಮಾನ ತಪ್ಪಿದ ವಿಷಯವನ್ನು ಸೋನಿ ಹೇಳಿದಾಗ ಇಡೀ ಕುಟುಂಬವೂ ವ್ಯಕ್ತಪಡಿಸಲಾರದಷ್ಟು ಸಂತೋಷ ವ್ಯಕ್ತಪಡಿಸಿತ್ತು. ಆದರೆ ವಿಮಾನದಲ್ಲಿದ್ದ ಇತರ 189 ಮಂದಿ ಅಸುನೀಗಿದ್ದಕ್ಕಾಗಿ ಸೋನಿ ಮತ್ತವರ ಕುಟುಂಬ ತೀವ್ರ ವಿಷಾದ ವ್ಯಕ್ತಪಡಿಸಿದೆ.

189 ಮಂದಿ ಬಲಿ?
ಇಂಡೋನೇಷ್ಯಾ ರಾಜಧಾನಿ ಜಕಾರ್ತಾ ವಿಮಾನ ನಿಲ್ದಾಣದಿಂದ ಬೆಳಗ್ಗೆ 6:20 ಕ್ಕೆ ಟೇಕಾಫ್ ಆದ ವಿಮಾನ 6:33 ರ ಸಮಯಕ್ಕೆ ರಾಡರ್ ಸಂಪರ್ಕ ಕಳೆದುಕೊಂಡಿತ್ತು. ಟೇಕಾಫ್ ಆದ 13 ನಿಮಿಷದ ನಂತರ ಸಂಪರ್ಕ ಕಳೆದುಕೊಂಡ ವಿಮಾನ ಸಮುದ್ರವೊಂದರಲ್ಲಿ ಬಿದ್ದಿದ್ದು ನಂತರ ತಿಳಿಯಿತು. ಈ ವಿಮಾದಲ್ಲಿದ್ದ 189 ಜನರೂ ಮೃತರಾಗಿದ್ದಾರೆಂದು ಶಂಕಿಸಲಾಗಿದೆ.

ಮೊದಲೇ ಸೂಚನೆ ಸಿಕ್ಕಿತ್ತಾ?
ವಿಮಾನ ಕೇವಲ 2000 ಅಡಿ ಎತ್ತರ ಹಾರಿತ್ತಷ್ಟೇ. ಆಗಲೇ ಏನೋ ಸರಿಯಿಲ್ಲ ಸನ್ನಿಸಿ ಪೈಲೆಟ್ ಜೊತೆ ಸಂಪರ್ಕದಲ್ಲಿದ್ದ ಅಧಿಕಾರಿಗಳು ವಿಮಾನವನ್ನು ವಾಪಸ್ ಜಕಾರ್ತಾ ನಿಲ್ದಾಣಕ್ಕೆ ತಂದು ಲ್ಯಾಂಡ್ ಮಾಡುವಂತೆ ಮನವಿ ಮಾಡಿದ್ದರು! ಆ ಮನವಿಯನ್ನು ಪೈಲೆಟ್ ಪುರಸ್ಕರಿಸಿ ವಾಪಸ್ ಹೊರಟಿದ್ದರೋ, ಇಲ್ಲವೋ ಎಂಬ ಮಾಹಿತಿಯಿಲ್ಲ. ಏಕೆಂದರೆ ಅದಾಗಿ ಎರಡೇ ನಿಮಿಷಕ್ಕೆ ವಿಮಾನ ರಾಡರ್ ಸಂಪರ್ಕ ಕಳೆದುಕೊಂಡಿತ್ತು. ಕೆಲ ಸಮಯದ ನಂತರ ಈ ದುರ್ಘಟನೆಯ ಮಾಹಿತಿ ಲಭಿಸಿತ್ತು! ದುರಂತಕ್ಕೀಡಾದ ಈ ವಿಮಾನದ ಪೈಲೆಟ್ ಆಗಿದ್ದವರು ದೆಹಲಿ ಮೂಲದ ಕ್ಯಾ.ಭವ್ಯೆ ಸುನೆಜಾ ಎಂಬುದು ನಂತರ ತಿಳಿದುಬಂದಿದೆ.












Click it and Unblock the Notifications