ಚೀನಾ-ಭಾರತ ಕಮಾಂಡರ್ಸ್ ಸಭೆಯಿಂದ ನೆಲೆಸುತ್ತಾ 'ಶಾಂತಿ'?
ನವದೆಹಲಿ, ಜೂನ್.06: ನೊವೆಲ್ ಕೊರೊನಾ ವೈರಸ್ ಹರಡುವಿಕೆ ಆತಂಕದ ನಡುವೆಯೇ ಚೀನಾ ಮತ್ತು ಭಾರತದ ನಡುವೆ ಗಡಿರೇಖೆ ವಿಚಾರದಲ್ಲಿ ಸಂಘರ್ಷ ನಡೆಯುತ್ತಿದೆ. ಅಂತಾರಾಷ್ಟ್ರೀಯ ಗಡಿ ಸಮಸ್ಯೆ ಇತ್ಯರ್ಥಕ್ಕೆ ಉಭಯ ರಾಷ್ಟ್ರಗಳು ಆಸಕ್ತಿ ತೋರಿಸಿವೆ.
ಭಾರತ-ಚೀನಾ ಗಡಿ ಪ್ರದೇಶ ಲಡಾಖ್ ನಲ್ಲಿ ಸಮರ ಸಿದ್ಧ ವಾತಾವರಣ ಸೃಷ್ಟಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಭಾರತ ಮತ್ತು ಚೀನಾದ ಉನ್ನತ ಮಟ್ಟದ ಸೇನಾ ಮುಖ್ಯಸ್ಥರು ಶಾಂತಿ-ಮಾತುಕತೆ ನಡೆಸಲಿದ್ದಾರೆ ಎಂದು ಚೀನಾ ತಿಳಿಸಿದೆ.
ಚೀನಾದ ದಕ್ಷಿಣ ಕ್ಸಿನ್ ಜಿಯಾಂಗ್ ಜಿಲ್ಲೆಯ ಕಮಾಂಡರ್ ಆಗಿರುವ ಮೇಜರ್ ಜನರಲ್ ಲಿಯು ಲಿನ್ ಅವರು ಭಾರತದ ಕಾರ್ಪ್ ಕಮಾಂಡರ್ ಮಟ್ಟದ ಅಧಿಕಾರಿಗಳ ನಿಯೋಗದ ಜೊತೆಗೆ ಚರ್ಚೆ ನಡೆಸಲಿದ್ದಾರೆ.

ಶನಿವಾರ ಬೆ.8 ಗಂಟೆಗೆ ದ್ವಿಪಕ್ಷೀಯ ಮಾತುಕತೆ
ಪೂರ್ವ ಲಡಾಖ್ ನ ಚುಶುಲ್ ಸೆಕ್ಟರ್ ನಲ್ಲಿರುವ ಮಾರ್ಡೋ ಪ್ರದೇಶವನ್ನು ಗಡಿ ಸುರಕ್ಷತಾ ಚರ್ಚೆಯ ಕೇಂದ್ರವನ್ನಾಗಿ ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ಉಭಯ ರಾಷ್ಟ್ರಗಳ ಸೇನಾ ಮುಖ್ಯಸ್ಥರು ಶನಿವಾರ ಬೆಳಗ್ಗೆ 8 ಗಂಟೆಯ ವೇಳೆಗೆ ಚರ್ಚೆ ನಡೆಸಲಿದ್ದಾರೆ. ಲಡಾಖ್ ಪೂರ್ವ ಭಾಗದಲ್ಲಿ ಉಂಟಾಗಿರುವ ಆತಂಕಕಾರಿ ವಾತಾವರಣವನ್ನು ತಿಳಿಗೊಳಿಸುವುದಕ್ಕೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ. ಏಕೆಂದರೆ ಕಳೆದೊಂದು ತಿಂಗಳಿನಿಂದಲೂ ಉಭಯ ರಾಷ್ಟ್ರಗಳ ಸೇನೆಗಳು ಎತ್ತರದ ಪ್ರದೇಶಗಳಲ್ಲಿ ಆಕ್ರಮಣಕಾರಿ ಭಂಗಿಯಲ್ಲಿ ನಿಂತಿದ್ದು, ಯುದ್ಧ ಸನ್ನಿವೇಶವನ್ನು ಹುಟ್ಟು ಹಾಕಿದೆ.

ಸ್ಥಳೀಯ ಕಮಾಂಡರ್ ಗಳು ನಡೆಸಿ ಚರ್ಚೆ ವಿಫಲ
ಎರಡು ರಾಷ್ಟ್ರಗಳ ಗಡಿ ಪ್ರದೇಶದ ಸ್ಥಳೀಯ ಕಮಾಂಡರ್ ಗಳು ನಡೆಸಿದ ಶಾಂತಿ ಮಾತುಕತೆಯು ಲಡಾಖ್ ಗಡಿ ಸಮಸ್ಯೆಯ ಉದ್ವಿಗ್ನತೆಯನ್ನು ತಗ್ಗಿಸಲಿಲ್ಲ. ಹೀಗಾಗಿ ದೆಹಲಿ ಮತ್ತು ಬೀಜಿಂಗ್ ಹಂತದಲ್ಲಿ ರಾಜತಾಂತ್ರಿಕ ಶಾಂತಿ ಮಾತುಕತೆಯ ಮೇಲೆ ಎರಡು ರಾಷ್ಟ್ರಗಳ ಚಿತ್ತ ನೆಟ್ಟಿದೆ. ಶನಿವಾರ ಭಾರತೀಯ ಸೇನೆ ಮತ್ತು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ ಮುಖ್ಯಸ್ಥರು ಗಡಿ ಸಮಸ್ಯೆ ನಿವಾರಣೆ ಬಗ್ಗೆ ಚರ್ಚಿಸಲಿದ್ದಾರೆ.

ಗಡಿಯಲ್ಲಿ ತಾತ್ಕಾಲಿಕ ಶಿಬಿರ ತೆರವುಗೊಳಿಸಲು ಆಗ್ರಹ
ಭಾರತ-ಚೀನಾ ಗಡಿ ಪ್ರದೇಶದಲ್ಲಿ ಶಾಂತಿ ಪುನರ್ ಸ್ಥಾಪನೆಯ ಉದ್ದೇಶದಿಂದಾಗಿ ಯಥಾಸ್ಥಿತಿ ಕಾಯ್ದುಕೊಳ್ಳುವುದಕ್ಕೆ ಭಾರತವು ಮೊದಲ ಆದ್ಯತೆಯನ್ನು ನೀಡುತ್ತದೆ. ಪಂಗೊಂಗ್ ಸೊ ಮತ್ತು ಗಲ್ವಾನ್ ವ್ಯಾಲಿ ಪ್ರದೇಶದಲ್ಲಿ ಸೃಷ್ಟಿಯಾಗಿರುವ ಉದ್ವಿಗ್ನತೆಯನ್ನು ನಿವಾರಿಸಬೇಕು. ಮೇ.5ರಿಂದ ಈ ಗಡಿ ಪ್ರದೇಶಗಳಲ್ಲಿ ಚೀನಾ ಹಾಕಿಕೊಂಡಿರುವ ತಾತ್ಕಾಲಿಕ ಶಿಬಿರಗಳನ್ನು ತೆರವುಗೊಳಿಸುವಂತೆ ಭಾರತೀಯ ಸೇನಾ ಮುಖ್ಯಸ್ಥರು ಆಗ್ರಹಿಸಲಿದ್ದಾರೆ.

ಭಾರತದಿಂದ ಕಾರ್ಯತಂತ್ರ ಮಾರ್ಗಸೂಚಿ ಪಾಲನೆಗೆ ಒತ್ತಾಯ
ಕಳೆದ 2018ರ ಏಪ್ರಿಲ್ ನಲ್ಲಿ ಚೀನಾದ ವುಹಾನ್ ನಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅನೌಪಚಾರಿಕ ಸಭೆ ನಡೆಸಿದ್ದರು. ಈ ಸಂದರ್ಭದಲ್ಲಿ ಭಾರತ-ಚೀನಾ ಗಡಿಯಲ್ಲಿ ಉಭಯ ರಾಷ್ಟ್ರದ ಸೇನೆಗಳಿಗೆ ಕಾರ್ಯತಾಂತ್ರಿಕ ಮಾರ್ಗಸೂಚಿಗಳನ್ನು ರೂಪಿಸಲಾಗಿತ್ತು. ಈ ಮಾರ್ಗಸೂಚಿಗಳನ್ನು ಭಾರತವು ಕಟ್ಟುನಿಟ್ಟಾಗಿ ಪಾಲಿಸಲು ಸಿದ್ಧವಿದ್ದು, ಚೀನಾ ಕೂಡಾ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಭಾರತವು ಒತ್ತಾಯಿಸಲಿದೆ.

ರಾಜತಾಂತ್ರಿಕ ಚರ್ಚೆ ಮೂಲಕ ಗಡಿ ಗೊಂದಲ ಇತ್ಯರ್ಥ
2017ರಲ್ಲಿ ಡೋಕ್ಲಾಂ ಗಡಿ ವಿಚಾರದಲ್ಲೂ ಕೂಡಾ ಭಾರತ ಮತ್ತು ಚೀನಾ ನಡುವೆ ಸಂಘರ್ಷ ನಡೆದಿತ್ತು. 73 ದಿನಗಳ ಉದ್ವಿಗ್ನ ಪರಿಸ್ಥಿತಿಯ ನಂತರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನಡೆಸಿದ ರಾಜತಾಂತ್ರಿಕ ಮಾತುಕತೆಯಿಂದ ಸಮಸ್ಯೆ ಪರಿಹಾರವಾಗಿತ್ತು. ಗಡಿಯಲ್ಲಿ ವಾತಾವರಣ ತಿಳಿಗೊಂಡಿತ್ತು. ಇದಾದ ಬಳಿಕ ಮತ್ತೆ ಲಡಾಖ್ ಗಡಿಗೆ ಸಂಬಂಧಿಸಿದಂತೆ ಗೊಂದಲ ಸೃಷ್ಟಿಯಾಗಿದೆ.

ಚೀನಾ ಸೇನೆಯಿಂದ ವಿವಾದಿತ ಪ್ರದೇಶಗಳಲ್ಲಿ ಲಗ್ಗೆ
ಕಳೆದ ಒಂದು ತಿಂಗಳಿನಲ್ಲಿ ಚೀನಾ ಸರ್ಕಾರವು ಎರಡು ರಾಷ್ಟ್ರಗಳ ನಡುವಿನ ವಿವಾದಿತ ಗಡಿ ಪ್ರದೇಶಗಳಲ್ಲಿ ಶಸ್ತ್ರಸಜ್ಜಿತ ಸೇನಾ ಸಿಬ್ಬಂದಿಯನ್ನು ನಿಯೋಜಿಸುತ್ತಿದೆ. ಪ್ರತಿಯಾಗಿ ಭಾರತವು ಕೂಡಾ ಸೇನಾ ಯೋಧರನ್ನು ಶಸ್ತ್ರ ಸಜ್ಜಿತರನ್ನಾಗಿ ನಿಲ್ಲಿಸುತ್ತಿದೆ. ಇದರಿಂದಾಗಿ ಪಂಗೊಂಗ್ ಸೋ, ಗಲ್ವಾನ್ ವ್ಯಾಲಿ, ಡೆಮ್ಚೋಕ್ ಮತ್ತು ದೌಲತ್ ಬೆಗ್ ಒಲ್ಡಿಯೆ ಪ್ರದೇಶಗಳಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ.

ಶಸ್ತ್ರಸಜ್ಜಿತರಾಗಿ ಗಡಿಯಲ್ಲಿ ನಿಂತ ಚೀನಾ ಸೇನೆ
ಭಾರತ ಮತ್ತು ಚೀನಾ ಗಡಿಯಲ್ಲಿರುವ ಪಂಗೊಂಗ್ ಸೋ, ಗಲ್ವಾನ್ ವ್ಯಾಲಿ ಪ್ರದೇಶದಲ್ಲಿಯೇ ಸುಮಾರು 2,500 ಯೋಧರು ಶಸ್ತ್ರಸಜ್ಜಿತರಾಗಿ ನಿಂತಿದ್ದಾರೆ. ಪಂಗೊಂಗ್ ಸೋ ಸುತ್ತಮುತ್ತಲು 180 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ರಕ್ಷಣಾ ಮೂಲಸೌಕರ್ಯಗಳಿಗೆ ಸಂಬಂಧಿಸಿದಂತೆ ಕಾಮಗಾರಿ ಚಟುವಟಿಕೆಗಳನ್ನು ನಡೆಸುತ್ತಿರುವುದು ಉಪಗ್ರಹವು ಸೆರೆ ಹಿಡಿದ ಫೋಟೋಗಳಲ್ಲಿ ಸಾಬೀತಾಗಿದೆ.

ಗಡಿ ಸಮಸ್ಯೆ ಹುಟ್ಟಿಕೊಳ್ಳುವುದರ ಹಿಂದಿನ ಕಾರಣ?
ದರ್ಬಕ್-ಶಯೊಕ್ ನಿಂದ ದೌಲತ್ ಬೆಗ್ ಒಲ್ಡಿಯೆಗೆ ಗಲ್ವಾನ್ ವ್ಯಾಲಿಯಲ್ಲಿ ರಸ್ತೆ ನಿರ್ಮಿಸುವುದಕ್ಕೆ ಭಾರತವು ಮುಂದಾಗಿತ್ತು. ಪಂಗೊಂಗ್ ಸೋ ತುದಿಯಲ್ಲೇ ಇರುವ ಪ್ರದೇಶದಲ್ಲಿ ರಸ್ತೆ ಕಾಮಗಾರಿ ನಡೆಸುವುದಕ್ಕೆ ಚೀನಾ ತೀವ್ರವಾಗಿ ವಿರೋಧಿಸಿತ್ತು. ಪಂಗೊಂಗ್ ಸೋ ಪ್ರದೇಶ ತೀರಾ ಮಹತ್ವಪೂರ್ಣವಾಗಿದ್ದು ಎಂದು ಭಾರತ ಕೂಡಾ ಪರಿಗಣಿಸಿತ್ತು. ಆದರೆ ಚೀನಾ ವಿರೋಧದ ಹಿನ್ನೆಲೆ ಗಡಿಯಲ್ಲಿ ಯಾವುದೇ ರೀತಿ ಸೇನೆಯನ್ನು ನಿಯೋಜಿಸದಿರಲು ಭಾರತವು ತೀರ್ಮಾನಿಸಿತು.

ಚೀನಾ-ಭಾರತ ಗಡಿಯಲ್ಲಿ ವಾತಾವರಣವೇ ಬದಲು
ಎರಡು ರಾಷ್ಟ್ರಗಳು ಗಡಿಯಲ್ಲಿ ಸೇನಾ ಬಲವರ್ಧನೆಗೆ ಬೇಕಾದಂತಾ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ. ಸೇನಾ ಸಿಬ್ಬಂದಿ, ವಾಹನ ಹಾಗೂ ಶಸ್ತ್ರಾಸ್ತ್ರಗಳನ್ನು ವಿವಾದಿತ ಪ್ರದೇಶಗಳಿಗೆ ರವಾನಿಸಲಾಗಿದೆ. ಪ್ರಚೋದನಾತ್ಮಕ ಬೆಳವಣಿಗೆಗಳು ಪರಸ್ಪರ ಎರಡು ಸೇನೆಗಳ ನಡುವೆ ನಡೆಯುತ್ತಿದ್ದು, ಮೇ.05ರಂದು ಗಡಿಯಲ್ಲಿ ಭಾರತ-ಚೀನಾ ಸೇನಾ ಯೋಧರು ಪರಸ್ಪರ ಮುಖಾಮುಖಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಚೀನಾ ಮತ್ತು ಭಾರತ ನಡುವಿನ ಗಡಿರೇಖೆ
ಭಾರತದ ನಿಯಂತ್ರಣದಲ್ಲಿರುವ ಪ್ರದೇಶ ಮತ್ತು ಚೀನಾ ನಿಯಂತ್ರಣದಲ್ಲಿರುವ ಪ್ರದೇಶವನ್ನು ಈ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯು ವಿಭಾಗಿಸುತ್ತದೆ. ಭಾರತವು ಚೀನಾದೊಂದಿಗೆ 3,488 ಕಿಲೋಮೀಟರ್ ಗಡಿಯನ್ನು ಹಂಚಿಕೊಂಡಿರುವುದಾಗಿ ಪರಿಗಣಿಸುತ್ತದೆ. ಆದರೆ ಚೀನಾ ಮಾತ್ರ ಭಾರತದ ಜೊತೆಗೆ 2,000 ಕಿಲೋಮೀಟರ್ ಗಡಿಯನ್ನು ಹಂಚಿಕೊಂಡಿರುವುದಾಗಿ ಪರಿಗಣಿಸಿದೆ. ಭಾರತ ಮತ್ತು ಚೀನಾ ರಾಷ್ಟ್ರಗಳು ಮೂರು ಪ್ರದೇಶಗಳಲ್ಲಿ ಅಂತಾರಾಷ್ಟ್ರೀಯ ಗಡಿಯನ್ನು ಹಂಚಿಕೊಂಡಿವೆ. ಪೂರ್ವ ವಲಯದಲ್ಲಿ ಅರುಣಾಚಲ ಪ್ರದೇಶ, ಸಿಕ್ಕಿಂ, ಮಧ್ಯ ವಲಯದಲ್ಲಿ ಉತ್ತರಾಖಂಡ್ ಮತ್ತು ಹಿಮಾಚಲಪ್ರದೇಶ ಹಾಗೂ ಪಶ್ಚಿಮ ವಲಯದಲ್ಲಿ ಲಡಾಖ್ ಜೊತೆಗೆ ಗಡಿರೇಖೆಯನ್ನು ಹಂಚಿಕೊಳ್ಳಲಾಗಿದೆ.












Click it and Unblock the Notifications