Cyclone Biparjoy Landfall: ಪಾಕಿಸ್ತಾನಕ್ಕೂ ಶಾಕ್ ಕೊಟ್ಟ ‘ಬಿಪರ್ಜಾಯ್’ ಸೈಕ್ಲೋನ್!
ಕರಾಚಿ: ಭೀಕರ ಚಂಡಮಾರುತದ ಅಬ್ಬರಕ್ಕೆ ಗುಜರಾತ್ ಕರಾವಳಿ ತೀರ ತತ್ತರಿಸಿದೆ. ಆದರೆ ಈ ರಾಕ್ಷಸ ಗಾತ್ರದ ಸುಳಿಗಾಳಿ ಭಾರತಕ್ಕೆ ಮಾತ್ರವಲ್ಲ ನೆರೆಯ ದೇಶ ಪಾಕಿಸ್ತಾನಕ್ಕೂ ಶಾಕ್ ನೀಡಿದೆ. ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನ ಈಗ 'ಬಿಪರ್ಜಾಯ್' ಹೊಡೆತಕ್ಕೂ ಅಲ್ಲಾಡಿ ಹೋಗುತ್ತಿದೆ. ಹಾಗಾದ್ರೆ ಜನರ ಜೀವ ಉಳಿಸಲು ಪಾಕ್ ಸರ್ಕಾರ ಕೈಗೊಂಡಿರುವ ಕ್ರಮ ಏನು? ಮುಂದೆ ಓದಿ.
'ಬಿಪರ್ಜಾಯ್' ಅಬ್ಬರದಿಂದ ಭಾರತದ ಜೊತೆ ಪಾಕಿಸ್ತಾನಕ್ಕೂ ಕಂಟಕ ಕಾದಿದೆ ಎಂದು ಈಗಾಗಲೇ ಎಚ್ಚರಿಕೆ ನೀಡಲಾಗಿತ್ತು. ಹೀಗಾಗಿ ಪಾಕ್ ಸರ್ಕಾರವು ಒಂದಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಸುಮಾರು 80 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಿ, 40 ಸಾವಿರ ನಿರಾಶ್ರಿತರ ಕೇಂದ್ರ ತೆರೆದಿದೆ. ಹಾಗೇ ಪಾಕಿಸ್ತಾನ ಕರಾವಳಿ ಪ್ರದೇಶಕ್ಕೆ ಸೈಕ್ಲೋನ್ ಅಪ್ಪಳಿಸುವ ಕಾರಣ ಮೀನುಗಾರರಿಗೂ ಎಚ್ಚರಿಕೆ ಸಂದೇಶ ನೀಡಲಾಗಿದೆ. ಅಲ್ಲದೆ ಪಾಕ್ನ ಹಲವು ನಗರಗಳಲ್ಲಿ ವಿಪರೀತ ಮಳೆ ಬೀಳುವ ಬಗ್ಗೆಯೂ ವಾರ್ನಿಂಗ್ ಕೊಡಲಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದೆ. ಕೆಲವು ಗಂಟೆಗಳ ಹಿಂದಷ್ಟೇ ಗುಜರಾತ್ ಬಳಿ ಚಂಡಮಾರುತ ನೆಲಕ್ಕೆ ಅಪ್ಪಳಿಸಿದೆ.

ಸಿಂಧ್ನಿಂದ 67,000 ಜನರ ಸ್ಥಳಾಂತರ
ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 'ಬಿಪರ್ಜಾಯ್' ಚಂಡಮಾರುತದ ಪರಿಣಾಮ ಭಾರಿ ಮಳೆ ಬೀಳುವ ನಿರೀಕ್ಷೆ ಇದೆ. ಹೀಗಾಗಿ ಸಿಂಧ್ ಪ್ರಾಂತ್ಯದಿಂದ 67 ಸಾವಿರ ಜನರನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಅಲ್ದೆ ಥಟ್ಟಾ, ಸುಜವಾಲ್, ಬದಿನ್ ಜಿಲ್ಲೆಗಳಿಂದಲೂ ಜನರನ್ನ ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಿ ಸುಮಾರು 40 ಸಾವಿರ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಮೂಲಕ ಪಾಕ್ನ ಸಿಂಧ್ ಮತ್ತು ಬಲೂಚಿಸ್ತಾನದ ಜನರ ಪರಿಸ್ಥಿತಿಯು ಇಕ್ಕಟ್ಟಿಗೆ ಸಿಲುಕಿದಂತಾಗಿದೆ. ಮೊದಲೇ ಕೈಯಲ್ಲಿ ಕಾಸಿಲ್ಲದೆ ಪರದಾಡತ್ತಿದ್ದ ಪಾಕಿಸ್ತಾನದ ಜನರಿಗೆ ಚಂಡಮಾರುತ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.
ಸೈಕ್ಲೋನ್ಗೆ ಕೊಚ್ಚಿ ಹೋದ ಬದಕು
ಮೊದಲೇ ಹೇಳಿದಂತೆ ಈಗಾಗಲೇ ಪಾಕಿಸ್ತಾನ ಆರ್ಥಿಕವಾಗಿ ದಿವಾಳಿಯಾಗಿದೆ. ಅಲ್ಲಿನ ಜನ ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಇಲ್ಲಿ ಮೀನುಗಾರಿಕೆ ನಂಬಿಕೊಂಡೇ ಲಕ್ಷಾಂತರ ಕುಟುಂಬಗಳು ಜೀವನ ಸಾಗಿಸುತ್ತಿವೆ. ಆದರೆ ಈ ಡೆಡ್ಲಿ ಸೈಕ್ಲೋನ್ 'ಬಿಪರ್ಜಾಯ್' ಹೊಟ್ಟೆ ಮೇಲೆ ಹೊಡೆದಂತಾಗಿದೆ. ಅಲ್ಲದೆ ಈಗಾಗಲೇ ಕೈಗೆ ಬಂದಿದ್ದ ಬೆಳೆಯನ್ನೂ ಚಂಡಮಾರುತ ಕಿತ್ತುಕೊಂಡು ಹೋಗುತ್ತಿದೆ. ಪಾಕಿಸ್ತಾನದಲ್ಲಿ ಪಂಜಾಬ್ ಪ್ರಾಂತ್ಯದ ರೈತರು ಚಂಡಮಾರುತ ಹಾಗೂ ಅಕಾಲಿಕ ಮಳೆಯಿಂದ ಸಂಕಷ್ಟ ಎದುರಿಸಲಿದ್ದಾರೆ. ಪಾಕ್ ಕರಾವಳಿ ಜೊತೆಗೆ ರೈತರು ಕೂಡ ಸಂಕಷ್ಟಕ್ಕೆ ಸಿಲುಕಲಿದ್ದಾರೆ.

ಹಿಂಸಾಚಾರದ ಬಳಿಕ ಮತ್ತೊಮ್ಮೆ ಪೆಟ್ಟು
ಕಳೆದ ತಿಂಗಳು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನವಾಗಿತ್ತು. ನಂತರ ಇಡೀ ಪಾಕಿಸ್ತಾನ ಸುಮಾರು 1 ವಾರಗಳ ಕಾಲ ಸಂಪೂರ್ಣ ಹೊತ್ತಿ ಉರಿದಿತ್ತು. ಇಷ್ಟಲ್ಲದೆ ಕಂಡ ಕಂಡ ಕಡೆ ಬೆಂಕಿ ಇಟ್ಟಿದ್ದ ಇಮ್ರಾನ್ ಖಾನ್ ಬೆಂಬಲಿಗರು, ನೂರಾರು ಕೋಟಿ ರೂಪಾಯಿ ನಷ್ಟ ಮಾಡಿದ್ದರು. ಹೀಗೆ ಹಿಂಸಾಚಾರ ನಡೆದು 1 ತಿಂಗಳು ಕಳೆಯುವ ಒಳಗೆ ಭೀಕರ ಚಂಡಮಾರುತ ಕೂಡ ಪಾಕಿಸ್ತಾನದ ಜನರಿಗೆ ಶಾಕ್ ಕೊಡುತ್ತಿದೆ. ಎರ್ರಾಬಿರ್ರಿ ಮಳೆ ಸುರಿದು ಬೆಳೆಗಳು ನಾಶವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಮೀನುಗಾರರ ಸ್ಥಿತಿ ಮತ್ತಷ್ಟು ಭೀಕರವಾಗಿದೆ.
ಒಟ್ಟಾರೆ ಗುಜರಾತ್ ನಂತರ ಪಾಕಿಸ್ತಾನದಲ್ಲೇ ಈ ಚಂಡಮಾರುತದ ಪರಿಣಾಮ ಅತಿಹೆಚ್ಚು ನಷ್ಟ ಸಂಭವಿಸಲಿದೆ ಎಂದಿದ್ದಾರೆ ಹವಾಮಾನ ತಜ್ಞರು. ಹೀಗಾಗಿ ಪಾಕ್ ಸರ್ಕಾರ ಕೂಡ ಒಂದಷ್ಟು ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಆದರೆ ಪರಿಸ್ಥಿತಿ ಅದೆಷ್ಟು ವ್ಯತಿರಿಕ್ತವಾಗುತ್ತೆ ಅನ್ನೋದು ಇನ್ನೂ ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ. ಹೀಗಾಗಿ ಜನ ಜೀವ ಕೈಲಿಡಿದು 'ಬಿಪರ್ಜಾಯ್' ಚಂಡಮಾರುತ ತೊಲಗಲಿ ಅಂತಾ ಕಾಯುತ್ತಿದ್ದಾರೆ.











Click it and Unblock the Notifications