ಶ್ರೀಲಂಕಾದಲ್ಲಿ ರಕ್ತದೋಕುಳಿ; ಆತ್ಮಹತ್ಯಾ ದಾಳಿ ನಿಂತಿದ್ದ ನೆಲದಲ್ಲಿ ಮತ್ತದೇ ಭೂತ

ಎಲ್ಲೆಲ್ಲೂ ರಕ್ತ.. ಗೋಡೆ ಹಾಗೂ ನೆಲಕ್ಕೆ ಅಂಟಿಕೊಂಡ ಮಾಂಸದ ಕಮಟು.. ಗಾಯಾಳುಗಳ ಆರ್ತನಾದ... ಚರ್ಚ್ ನ ಛಾವಣಿಯೇ ಛಿದ್ರ ಛಿದ್ರ, ಯಾರನ್ನೂ ರಕ್ಷಿಸಲಾಗಲಿಲ್ಲವೇನೋ ಎಂದು ನೊಂದು ನಿಂತಂತೆ ಕಾಣುವ ಏಸುವಿನ ಪ್ರತಿಮೆ. ಶ್ರೀಲಂಕಾದ ಆ ಚರ್ಚ್ ನ ಚಿತ್ರ ನೋಡುತ್ತಿದ್ದರೆ ಆದೆಂಥ ಪ್ರಬಲ ಬಾಂಬ್ ಸ್ಫೋಟ ಎಂದು ತಿಳಿಯುತ್ತಿತ್ತು.

ಏಪ್ರಿಲ್ ಇಪ್ಪತ್ತೊಂದರ ಭಾನುವಾರ ಬೆಳಗ್ಗೆ ಶ್ರೀಲಂಕಾದಲ್ಲಿ ಕ್ರಿಶ್ಚಿಯನ್ನರ ಈಸ್ಟರ್ ಆಚರಣೆ ಸಂಭ್ರಮ ಇತ್ತು. ಭಕ್ತರಿಂದ ತುಂಬಿದ್ದ ಚರ್ಚ್ ಗಳಲ್ಲಿ, ಐಷಾರಾಮಿ ಹೋಟೆಲ್ ಗಳಲ್ಲಿ ಭೀಕರ ಬಾಂಬ್ ಸ್ಫೋಟ. ಒಂದಲ್ಲ ಎರಡಲ್ಲ. ಒಟ್ಟು ಎಂಟು ಬಾಂಬ್ ಸ್ಫೋಟ. ಈ ದುರ್ಘಟನೆಯಲ್ಲಿ ತೀರಿಕೊಂಡವರ ಸಂಖ್ಯೆ ಇನ್ನೂರು ದಾಟಿ ಹೋಗಿದೆ. ಗಾಯಗೊಂಡವರು ನಾನೂರಕ್ಕೂ ಹೆಚ್ಚು.

ಮೂವರು ಭಾರತೀಯರು ಈ ದುರ್ಘಟನೆಯಲ್ಲಿ ಸಾವಿಗೀಡಾಗಿದ್ದಾರೆ. ಲೋಕಾಶಿನಿ, ನಾರಾಯಣ್ ಚಂದ್ರಶೇಖರ್ ಹಾಗೂ ರಮೇಶ್ ಮೃತರು. ಕೇರಳದ ಮತ್ತೊಬ್ಬರು ಮಹಿಳೆ, ಸದ್ಯಕ್ಕೆ ದುಬೈನಲ್ಲಿ ವಾಸಿಸುತ್ತಿದ್ದರು.

ಎರಡು-ಎರಡೂ ಕಾಲು ಕೋಟಿ ಜನಸಂಖ್ಯೆ ಇರುವ ಶ್ರೀಲಂಕಾ ಎಂಬ ದ್ವೀಪ ರಾಷ್ಟ್ರ ಪ್ರವಾಸಿಗರಿಗೆ ಅಚ್ಚುಮೆಚ್ಚು. ಅಂಥ ದೇಶದಲ್ಲಿ ರಕ್ತದೋಕುಳಿ. ಎಲ್ಲೆಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೋ ಅಂಥ ಸ್ಥಳಗಳನ್ನೇ ಗುರಿ ಮಾಡಿಕೊಂಡು, ಒಂದೇ ಗುಂಪು ನಡೆಸಿರುವ ಹೀನ ಕೃತ್ಯ ಇದು ಎಂಬುದು ಗುಮಾನಿ.

ಶ್ರೀಲಂಕಾಗೆ ಆತ್ಮಹತ್ಯಾ ಬಾಂಬರ್ ದಾಳಿಗಳು ಹೊಸದಲ್ಲ

ಶ್ರೀಲಂಕಾಗೆ ಆತ್ಮಹತ್ಯಾ ಬಾಂಬರ್ ದಾಳಿಗಳು ಹೊಸದಲ್ಲ

ಈಗಲೂ ಆತ್ಮಹತ್ಯಾ ಬಾಂಬರ್ ನಿಂದ ಆಗಿರುವ ದಾಳಿ ಇದು ಎಂಬ ಮಾತು ಕೇಳಿಬರುತ್ತಿದೆ. ಶ್ರೀಲಂಕಾಗೆ ಆತ್ಮಹತ್ಯಾ ಬಾಂಬರ್ ದಾಳಿಗಳು ಹೊಸದಲ್ಲ. ಆದರೆ ಎಲ್ ಟಿಟಿಇಯನ್ನು ಸಂಪೂರ್ಣ ಸದೆ ಬಡಿದ ನಂತರ ಕಳೆದ ಹತ್ತು ವರ್ಷಗಳಲ್ಲೇ ಆದ ಭೀಕರ ದಾಳಿಯಿದು. ಶ್ರೀಲಂಕಾದಲ್ಲಿ ನಡೆಸುತ್ತಿದ್ದ ಆತ್ಮಹತ್ಯಾ ದಾಳಿಯ ವಿಧಾನವನ್ನೇ ಅಧ್ಯಯನ ನಡೆಸಿ, ಮಧ್ಯಪೂರ್ವ ದೇಶಗಳಲ್ಲಿ ಬಳಸುತ್ತಿದ್ದರು. ಕಳೆದ ಹತ್ತು ವರ್ಷಗಳಲ್ಲಿ ಇಂಥದ್ದೊಂದು ಭೀಕರ ಅನಾಹುತ ನಾವು ನೋಡಿಲ್ಲ ಎನ್ನುತ್ತಾರೆ ಶ್ರೀಲಂಕಾದ ರಕ್ಷಣಾ ಕಾರ್ಯದರ್ಶಿ ಹೇಮಸಿರಿ ಫರ್ನಾಂಡೋ.

ಸೇಂಟ್ ಆಂಥೋನಿ ಚರ್ಚ್ ನಲ್ಲಿ ಮೊದಲ ಬಾಂಬ್ ಸ್ಫೋಟ

ಸೇಂಟ್ ಆಂಥೋನಿ ಚರ್ಚ್ ನಲ್ಲಿ ಮೊದಲ ಬಾಂಬ್ ಸ್ಫೋಟ

ಭಾನುವಾರ ಬೆಳಗ್ಗೆ 8.45ಕ್ಕೆ ಸರಣಿ ಬಾಂಬ್ ನ ಮೊದಲ ಅನಾಹುತ ಸಂಭವಿಸಿತು. ಕೊಲಂಬೋದಲ್ಲಿರುವ ರೋಮನ್ ಕ್ಯಾಥೋಲಿಕ್ ಕ್ರಿಶ್ಚಿಯನ್ನರ ಸೇಂಟ್ ಆಂಥೋನಿ ಚರ್ಚ್ ನಲ್ಲಿ ಮೊದಲ ಬಾಂಬ್ ಸ್ಫೋಟವಾಯಿತು. ನಂತರ ನೆಗೊಂಬೋದ ಸೇಂಟ್ ಸೆಬಾಸ್ಟಿಯನ್ ಚರ್ಚ್, ಬಟ್ಟಿಕಲೋವಾದ ಝಿಯಾನ್ ಚರ್ಚ್- ಇವುಗಳೆಲ್ಲದರ ಜತೆಗೆ ವಿಲಾಸಿ ಹೋಟೆಲ್ ಗಳಾದ ಶಾಂಗ್ರಿ ಲಾ, ದ ಸಿನ್ನಮೊನ್ ಗ್ರ್ಯಾಂಡ್ ಹಾಗೂ ಕಿಂಗ್ಸ್ ಬರಿ ಹೋಟೆಲ್ ಗಳಲ್ಲಿ. ಇವೆಲ್ಲವೂ ಕೊಲಂಬೋದಲ್ಲೇ ಇವೆ.

ಶಂಕಿತ ಏಳು ಮಂದಿಯ ಬಂಧನ

ಶಂಕಿತ ಏಳು ಮಂದಿಯ ಬಂಧನ

ಈ ಬಾಂಬ್ ಸ್ಫೋಟಗಳಿಗೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ರಕ್ಷಣಾ ಸಚಿವ ರುವಾನ್ ವಿಜಯವರ್ಧನೆ ಹೇಳಿದ್ದಾರೆ. ಈ ದುಷ್ಕೃತ್ಯದ ಹಿಂದೆ ಇರುವುದು ಆತ್ಮಹತ್ಯಾ ಬಾಂಬರ್ ಗಳೇ ಎಂದು ಕೂಡ ಸೇರಿಸಿದ್ದಾರೆ. ಸುಳ್ಳು ಸುದ್ದಿ ಹರಡುವುದು ಬೇಡ ಎಂಬ ಮುಂಜಾಗ್ರತೆಯಲ್ಲಿ ಪ್ರಮುಖವಾದ ಎಲ್ಲ ಸಾಮಾಜಿಕ ಮಾಧ್ಯಮ ಮತ್ತು ಮೆಸೇಜ್ ಸೇವೆ, ವಾಟ್ಸ್ ಆಪ್, ಫೇಸ್ ಬುಕ್ ಎಲ್ಲದರ ಸೇವೆಯನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ ಎಂದು ಅಧ್ಯಕ್ಷರ ಕಾರ್ಯದರ್ಶಿ ಉದಯ ಸೆನೆವಿರತ್ನೆ ಹೇಳಿದ್ದಾರೆ.

ಇಪ್ಪತ್ತೇಳು ಮಂದಿ ವಿದೇಶೀಯರು

ಇಪ್ಪತ್ತೇಳು ಮಂದಿ ವಿದೇಶೀಯರು

ಕೊಲಂಬೋ ಹಾಗೂ ಸುತ್ತಮುತ್ತ ಸಾವನ್ನಪ್ಪಿದ ಇನ್ನೂರಕ್ಕೂ ಹೆಚ್ಚು ಮಂದಿ ಪೈಕಿ ಇಪ್ಪತ್ತೇಳು ಮಂದಿ ವಿದೇಶೀಯರು. ಅದರಲ್ಲಿ ಬ್ರಿಟಿಷ್, ಚೈನೀಸ್, ಡಚ್, ಪೋರ್ಚುಗೀಸರು ಇದ್ದಾರೆ ಎಂದು ಶ್ರೀಲಂಕಾದ ನ್ಯಾಷನಲ್ ಆಸ್ಪತ್ರೆ ಮೂಲಗಳು ತಿಳಿಸಿವೆ. ಹಬ್ಬದ ಸಂಭ್ರಮದಲ್ಲಿದ್ದವರ ಬದುಕು ಕಸಿದ ಆ ಕ್ರೂರ ಸಂಘಟನೆ ಯಾವುದು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದ್ದು, ಶ್ರೀಲಂಕಾ ಜನರು ಈ ದುಃಸ್ವಪ್ನದಿಂದ ಹೊರಬರಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+