Bangladesh Protest: ಬಾಂಗ್ಲಾದೇಶದಲ್ಲಿ ಕೈಮೀರಿದ ಘರ್ಷಣೆ- ಒಂದೇ ದಿನ 100 ಜನ ಸಾವು!
ಢಾಕಾ ಆಗಸ್ಟ್ 5: ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸಿ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ಚುರುಕಾಗಿದೆ. ಕಳೆದ ಕೆಲ ದಿನಗಳಿಂದ ಪ್ರತಿಭಟನಾಕಾರರು ಹಾಗೂ ಆಡಳಿತ ಪಕ್ಷದ ಬೆಂಬಲಿಗರ ನಡುವೆ ಸಂಘರ್ಷ ನಡೆಯುತ್ತಿದೆ. ಭಾನುವಾರ ನಡೆದ ಘರ್ಷಣೆಯಿಂದಾಗಿ 100 ಮಂದಿ ಸಾವನ್ನಪ್ಪಿದ್ದಾರೆ.
1971ರ ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಭಾಗಿಯಾದವರಿಗೆ ಸರಕಾರಿ ಉದ್ಯೋಗದಲ್ಲಿ ಮೀಸಲು ನೀಡುವ ನಿರ್ಧಾರವನ್ನು ವಿದ್ಯಾರ್ಥಿ ಒಕ್ಕೂಟ ಬಲವಾಗಿ ಖಂಡಿಸಿದೆ. ಸರ್ಕಾರ ನಿರ್ಧರಿಸಿದ್ದ ಶೇ.30ರಷ್ಟು ಮೀಸಲಾತಿಯನ್ನು ಸುಪ್ರೀಂ ಶೇ.5ಕ್ಕೆ ಇಳಿಸಿದೆ. ಆ ತೀರ್ಪಿನ ಬಳಿಕವೂ ಹೋರಾಟ ಮುಂದುವರಿದಿದ್ದು, ಭಾನುವಾರ ದೇಶದ ವಿವಿಧೆಡೆ ಘರ್ಷಣೆ ತೀವ್ರಗೊಂಡಿದೆ. ಪ್ರತಿಭಟನಾಕಾರರು ಮತ್ತು ಆಡಳಿತ ಪಕ್ಷದ ಬೆಂಬಲಿಗರ ನಡುವೆ ಭಾನುವಾರ ನಡೆದ ಭೀಕರ ಘರ್ಷಣೆಯಲ್ಲಿ 14 ಪೊಲೀಸರು ಸೇರಿದಂತೆ ಸುಮಾರು 100 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಅಲ್ಲದೆ ಈ ಸಂಘರ್ಷದಲ್ಲಿ ನೂರಾರು ಜನರು ಗಾಯಗೊಂಡಿದ್ದು, ಪರಿಸ್ಥಿತಿ ಶಾಂತಗೊಳಿಸಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ಅನಿರ್ದಿಷ್ಟ ಅವಧಿಗೆ ಕರ್ಫ್ಯೂ ಘೋಷಣೆ ಮಾಡಲಾಗಿದ್ದು, ಮೊಬೈಲ್ ಇಂಟರ್ನೆಟ್ ಸಂಪರ್ಕ ಸ್ಥಗಿತಗೊಳಿಸಲಾಗಿದೆ.
1971ರ ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಭಾಗಿಯಾದವರಿಗೆ ಸರಕಾರಿ ಉದ್ಯೋಗದಲ್ಲಿ ಮೀಸಲು ನೀಡುವ ವ್ಯವಸ್ಥೆಗೆ ಸಂಬಂಧಿಸಿದಂತೆ ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸಿ ವಿದ್ಯಾರ್ಥಿಗಳು ಭಾನುವಾರ ಪ್ರತಿಭಟನೆ ನಡೆಸಿದರು. ಭಾನುವಾರ ಬೆಳಿಗ್ಗೆ ನಡೆದ ಪ್ರತಿಭಟನೆಯನ್ನು ಅವಾಮಿ ಲೀಗ್, ಛತ್ರ ಲೀಗ್ ಜುಬೋ ಲೀಗ್ ಕಾರ್ಯಕರ್ತರು ವಿರೋಧಿಸಿದರು. ಇದರಿಂದಾಗಿ ಪ್ರತಿಭಟನಾಕಾರರು ಹಾಗೂ ಆಡಳಿತ ಪಕ್ಷದ ಬೆಂಬಲಿಗರ ನಡುವೆ ಘರ್ಷಣೆ ತೀವ್ರಗೊಂಡಿದೆ.
ದೇಶಾದ್ಯಂತ ಘರ್ಷಣೆಗಳು ತೀವ್ರಗೊಂಡ ಬೆನ್ನಲ್ಲೆ ಗುಂಡಿನ ದಾಳಿಗಳು ನಡೆದು 100 ಜನರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ 14 ಪೊಲೀಸರು ಕೊಲ್ಲಲ್ಪಟ್ಟಿದ್ದಾರೆ. ಅವರಲ್ಲಿ 13 ಮಂದಿ ಸಿರಾಜ್ಗಂಜ್ನ ಎನಾಯೆತ್ಪುರ ಪೊಲೀಸ್ ಠಾಣೆಯಲ್ಲಿ ಕೊಲ್ಲಲ್ಪಟ್ಟರೆ, ಕೊಮಿಲ್ಲಾದ ಎಲ್ಲಿಯೋಟ್ಗಂಜ್ನಲ್ಲಿ ಒಬ್ಬ ಪೊಲೀಸ್ ಅನ್ನು ಕೊಲ್ಲಲಾಗಿದೆ. ಜೊತೆಗೆ 300ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ.

ಹಿಂಸಾತ್ಮಕ ಘರ್ಷಣೆ ಶುರುವಾಗಿದ್ದು ಹೀಗೆ...
1971 ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದವರ ಸಂಬಂಧಿಕರಿಗೆ ಸರ್ಕಾರಿ ಉದ್ಯೋಗಗಳಲ್ಲಿ 30 ಪ್ರತಿಶತವನ್ನು ಮೀಸಲಿಡಲು ಸ್ಥಳೀಯ ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ಈ ಕೋಟಾ ವ್ಯವಸ್ಥೆಯನ್ನು ವಿರೋಧಿಸಿ ವಿದ್ಯಾರ್ಥಿಗಳು ಹೋರಾಟ ಆರಂಭಿಸಿದರು. ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡು ಪೊಲೀಸರು ಮತ್ತು ವಿದ್ಯಾರ್ಥಿ ಪ್ರತಿಭಟನಾಕಾರರ ನಡುವಿನ ತೀವ್ರ ಘರ್ಷಣೆಯಲ್ಲಿ 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಇದಾದ ಕೆಲ ದಿನಗಳ ನಂತರ ಅಂದರ ಭಾನುವಾರ ನಡೆದ ಘರ್ಷಣೆಯಲ್ಲಿ 100 ಜನ ಸಾವನ್ನಪ್ಪಿದ್ದಾರೆ.
ಪ್ರತಿಭಟನಾಕಾರರು ಪೊಲೀಸ್ ಠಾಣೆಗಳಿಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ. ಅನೇಕ ಆಡಳಿತ ಪಕ್ಷದ ಕಚೇರಿಗಳು, ನಾಯಕರ ನಿವಾಸಗಳ ಮೇಲೆ ದಾಳಿ ಮಾಡಿ, ಹಲವಾರು ವಾಹನಗಳನ್ನು ಸುಟ್ಟು ಹಾಕಿದ್ದಾರೆ. ಇದರ ಬೆನ್ನಲ್ಲೆ ಭಾನುವಾರ ಸಂಜೆ 6 ರಿಂದ ಅನಿರ್ದಿಷ್ಟ ಅವಧಿಗೆ ಬಾಂಗ್ಲಾದೇಶದಾದ್ಯಂತ ಪ್ರಮುಖ ನಗರಗಳು ಮತ್ತು ಸಣ್ಣ ಪಟ್ಟಣಗಳಲ್ಲಿ ಕರ್ಫ್ಯೂಗೆ ವಿಧಿಸಲಾಗಿದೆ.

ಅರೆಸೇನಾ ಗಡಿ ಕಾವಲುಗಾರರು BGB ಮತ್ತು ಅಪರಾಧ ವಿರೋಧಿ ರಾಪಿಡ್ ಆಕ್ಷನ್ ಬೆಟಾಲಿಯನ್, ಪೊಲೀಸರೊಂದಿಗೆ ಗಸ್ತು ತಿರುಗುತ್ತಿದ್ದಾರೆ. ಮೆಟಾ ಪ್ಲಾಟ್ಫಾರ್ಮ್ಗಳಾದ ಫೇಸ್ಬುಕ್, ಮೆಸೆಂಜರ್, ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಮ್ ಅನ್ನು ಸ್ಥಗಿತಗೊಳಿಸಲು ಸರ್ಕಾರ ಆದೇಶಿಸಿದೆ. 4G ಮೊಬೈಲ್ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸುವಂತೆ ಮೊಬೈಲ್ ಆಪರೇಟರ್ಗಳಿಗೆ ಆದೇಶಿಸಲಾಗಿದೆ.












Click it and Unblock the Notifications