ಸಿಬಿಐ ನ್ಯಾಯಾಲಯದ ಕಟಕಟೆಗೆ ಶ್ರೀನಿವಾಸನ್
ಹೈದರಾಬಾದ್, ಸೆ.12: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ ತಣ್ಣಾಗುತ್ತಿದ್ದಂತೆ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದ ಎನ್.ಶ್ರೀನಿವಾಸನ್ ಗೆ ಈಗ ಸಿಬಿಐ ವಿಚಾರಣೆ ಬಿಸಿ ತಟ್ಟಲಿದೆ. ವೈಎಸ್ ಜಗನ್ ಮೋಹನ್ ರೆಡ್ಡಿ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀನಿವಾಸನ್ ಅವರ ಹೆಸರು ಚಾರ್ಜ್ ಶೀಟ್ ನಲ್ಲಿ ಕಾಣಿಸಿಕೊಂಡಿರುವುದರಿಂದ ನಾಂಪಲ್ಲಿ ಕೋರ್ಟಿಗೆ ಶ್ರೀನಿ ಬರಲೇಬೇಕಿದೆ.
ವೈಎಸ್ ಆರ್ ಪಕ್ಷದ ಅಧ್ಯಕ್ಷ ಹಾಗೂ ಕಡಪ ಸಂಸದ ಜಗಮೋಹನ್ ರೆಡ್ಡಿ ಒಡೆತನದ ಕಂಪೆನಿಯಲ್ಲಿ ಕಾನೂನು ಬಾಹಿರವಾಗಿ ಇಂಡಿಯಾ ಸಿಮೆಂಟ್ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸನ್ ಅವರು ಹಣ ಹೂಡಿಕೆ ಮಾಡಿರುವುದು ತನಿಖೆಯಿಂದ ಸಾಬೀತಾಗಿದೆ. ಸಿಬಿಐ ತಂಡ ಶ್ರೀನಿವಾಸನ್ ಅವರನ್ನು ಬಂಧಿಸಿ ವಿಚಾರಣೆ ನಡೆಸಲಿದೆ ಎಂಬ ಸುದ್ದಿ ಕೂಡಾ ಹಬ್ಬಿದೆ.
ಇತ್ತೀಚೆಗೆ ಸಿಬಿಐ ಹೈದರಾಬಾದ್ ನ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (ಚಾರ್ಜ್ ಶೀಟ್) ಸಲ್ಲಿಸಿತ್ತು. ಜಗನ್ ಮೋಹನ್ ರೆಡ್ಡಿ, ಎನ್.ಶ್ರೀನಿವಾಸನ್, ಕೈಗಾರಿಕೋದ್ಯಮಿ ಪೆನ್ನ ಪ್ರತಾಪ್ ರೆಡ್ಡಿ, ಪ್ರೋತ್ಸಾಹಕ ರಘುರಾಮ್, ಇಬ್ಬರು ಐಎಎಸ್ ಆಧಿಕಾರಿಗಳಾದ ಎಂ.ಸ್ಯಾಮ್ಯುಯಲ್, ಆದಿತ್ಯನಾಥ್ ದಾಸ್, ನಿವೃತ್ತ ಐಎಎಸ್ ಅಧಿಕಾರಿ ಬಿ.ಕೃಪಾನಂದಮ್ ಸೇರಿದಂತೆ ಮತ್ತಿತರರ ಮೇಲೆ ದೂರು ಸಲ್ಲಿಸಲಾಗಿತ್ತು. ರೆಡ್ಡಿ ಒಡೆತನದ ಕಂಪೆನಿಯಲ್ಲಿ ಎನ್.ಶ್ರೀನಿವಾಸನ್ ಹಾಗೂ ಮತ್ತಿತರರು ಕಾನೂನು ಬಾಹಿರವಾಗಿ ಹಣ ಹೂಡಿಕೆ ಮಾಡಿದ್ದಾರೆ.
ಇಂಡಿಯಾ ಸಿಮೆಂಟ್ಸ್ ಮಾಲೀಕರು ರಘುರಾಮ್ ಮತ್ತು ಪೆನ್ನ ಸಿಮೆಂಟ್ಸ್ ಹೆಸರಿನಲ್ಲಿ ಅಕ್ರಮವಾಗಿ ಹೂಡಿಕೆ ಮಾಡಿರುವುದನ್ನು ಸಿಬಿಐ ಪತ್ತೆ ಮಾಡಿದೆ.

ಇದೀಗ ದೋಷಾರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವುದರಿಂದ ಹೈದರಾಬಾದ್ ನಿಂದ ನಾಂಪಲ್ಲಿಯರುವ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಎನ್.ಶ್ರೀನಿವಾಸನ್ ಸೇರಿದಂತೆ ಅನೇಕರು ಹಾಜರಾಗಬೇಕಿದೆ.
ಬಂಧನ ಸಾಧ್ಯತೆ: ಒಂದು ವೇಳೆ ಹೆಚ್ಚಿನ ಮಾಹಿತಿಗಾಗಿ ಇವರನ್ನು ವಿಚಾರಣೆಗೊಳಪಡಿಸಬೇಕೆಂದು ಸಿಬಿಐ ನ್ಯಾಯಾಲಯಕ್ಕೆ ಕೋರಿದರೆ ಬಂಧನವಾಗುವ ಸಾಧ್ಯತೆ ಹೆಚ್ಚಾಗಿದೆ. ಆಂಧ್ರ ಪ್ರದೇಶ ಹೈಕೋರ್ಟ್ ನ ಸಹಾಯಕ ಸಾಲಿಸಿಟರ್ ಜನರಲ್ ಪಿ.ವಿಷ್ಣುವರ್ಧನ್ ರೆಡ್ಡಿ ಹೇಳಿರುವಂತೆ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿರುವ ಎಲ್ಲ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.
ಈಗಾಗಲೇ ಅವರ ವಿರುದ್ಧ ಸಮನ್ಸ್ ಜಾರಿಯಾಗಿದೆ. ನ್ಯಾಯಾಲಯ ಜಾಮೀನು ನೀಡದಿದ್ದರೆ ಬಂಧನವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಪ್ರಕರಣದ ಗಂಭೀರತೆಯನ್ನು ನ್ಯಾಯಾಲಯ ಅರಿತು ಜಾಮೀನು ನಿರ್ಧಾರ ಮಾಡುತ್ತದೆ. ಆರೋಪಿಗಳಿಗೆ ಜಾಮೀನು ನೀಡಲು ನಿರಾಕರಿಸಿದರೆ ಸಿಬಿಐ ಬಂಧಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಜಗನ್ ಜಾಮೀನು ಅರ್ಜಿ: ಸಿಬಿಐ ವಿಶೇಷ ನ್ಯಾಯಾಲಯ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗನ್ ಮೋಹನ್ ರೆಡ್ಡಿ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸೆ.18 ರಂದು ಕೈಗೆತ್ತಿಕೊಳ್ಳಲಿದೆ. ಕಳೆದ ವರ್ಷ ಮೇ 27ರಂದು ಜಗನ್ ಅವರನ್ನು ಬಂಧಿಸಲಾಗಿತ್ತು. ಸದ್ಯ ಹೈದರಾಬಾದಿನ ಚಂಚಲಗುಡ ಜೈಲಿನಲ್ಲಿದ್ದಾರೆ.
ನ್ಯಾಯಾಂಗ ಬಂಧನ ಸೆ.20ರ ತನಕ ಇದ್ದು ಸಿಬಿಐ ಮತ್ತೆ ಮತ್ತೆ ಚಾರ್ಜ್ ಶೀಟ್ ಸಲ್ಲಿಕೆ ಮಾಡುವ ಮೂಲಕ ಪ್ರಕರಣವನ್ನು ವಿಳಂಬಗೊಳಿಸುತ್ತಿದೆ. ನಾಲ್ಕು ತಿಂಗಳೊಳಗೆ ಪ್ರಕರಣ ಇತ್ಯರ್ಥಗೊಳಿಸುವಂತೆ ಸಿಬಿಐಗೆ ಕೋರ್ಟ್ನಿ ನಿರ್ದೇಶನ ನೀಡಿದೆ. ಆಂಧ್ರಪ್ರದೇಶದ ಅಳಿವು ಉಳಿವಿನ ಹೋರಾಟ ನಡೆಯುತ್ತಿದ್ದು ರಾಜಕೀಯ ಮುಖಂಡನಾಗಿ ನಾನು ಹೋರಾಟದಲ್ಲಿ ಭಾಗಿಯಾಗಲು ಅವಕಾಶ ನೀಡಬೇಕು ಎಂದು ಜಗನ್ ಅರ್ಜಿ ಹಾಕಿದ್ದಾರೆ.












Click it and Unblock the Notifications