ಸಿಎಎ ವಾಪಸ್ ಪಡೆಯಿರಿ; 20 ಪ್ರತಿಪಕ್ಷಗಳ ಒಮ್ಮತದ ನಿರ್ಣಯ
ನವದೆಹಲಿ, ಜನವರಿ 13 : ಪೌರತ್ವ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯಬೇಕು, ದೇಶಾದ್ಯಂತ ತಕ್ಷಣದಿಂದ ಎನ್ಪಿಆರ್ ನೋಂದಣಿ ಸ್ಥಗಿತಗೊಳಿಸಬೇಕು ಎಂದು 20 ಪ್ರತಿಪಕ್ಷಗಳು ಒಮ್ಮತದಿಂದ ನಿರ್ಣಯವನ್ನು ಕೈಗೊಂಡಿದ್ದು, ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ.
ಸೋಮವಾರ ಕಾಂಗ್ರೆಸ್ ನೇತೃತ್ವದಲ್ಲಿ 20 ವಿರೋಧ ಪಕ್ಷಗಳು ಸಭೆ ನಡೆಸಿದವು. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರು ವಿರೋಧ ಪಕ್ಷಗಳ ಸಭೆಯಲ್ಲಿ ಪಾಲ್ಗೊಂಡಿದ್ದರು.
ಪೌರತ್ವ ತಿದ್ದುಪಡಿ ಕಾಯ್ದೆ: ಗಾಳಿಸುದ್ದಿ ಗುಟ್ಟು ರಟ್ಟುಗೊಳಿಸಿದ ಮೋದಿ
"ಸಿಎಎ, ಎನ್ಪಿಆರ್ ಮತ್ತು ಎನ್ಆರ್ಸಿ ಎಲ್ಲಾವೂ ಸಂವಿಧಾನ ವಿರೋಧಿಯಾಗಿದೆ. ಈ ಎಲ್ಲವೂ ಬಡವರು, ಎಸ್ಸಿ/ಎಸ್ಟಿಯವರು, ಹಿಂದುಳಿದ ವರ್ಗದವರು, ಅಲ್ಪ ಸಂಖ್ಯಾತರನ್ನು ಗುರಿಯಾಗಿಸಿವೆ" ಎಂದು ಪ್ರತಿಪಕ್ಷಗಳು ಹೇಳಿವೆ.
ಸಿಎಎ ಪ್ರತಿಗಳನ್ನು ಸುಟ್ಟು ಪ್ರತಿಭಟನೆ: ಜಿಗ್ನೇಶ್ ಮೇವಾನಿ
"ಎನ್ಆರ್ಸಿಯನ್ನು ವಿರೋಧಿಸಿರುವ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಎನ್ಪಿಆರ್ ಸಹ ವಿರೋಧಿಸಬೇಕು. ಸರ್ಕಾರ ಎನ್ಪಿಆರ್ ನೋಂದಣಿ ಕುರಿತ ಪ್ರಕ್ರಿಯೆ ತಕ್ಷಣ ನಿಲ್ಲಿಸಬೇಕು" ಎಂದು ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.
ಸಿಎಎ, ಎನ್ಆರ್ಸಿ ಪರ ಜಾಗೃತಿ ಮೂಡಿಸಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ
ಸಭೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ, "ಕೇಂದ್ರ ಸರ್ಕಾರವು ಜಾತಿ-ಧರ್ಮಗಳ ಆಧಾರದಲ್ಲಿ ಜನರನ್ನು ವಿಭಜಿಸಲು ಹೊರಟಿದೆ. ಬಿಜೆಪಿ ನೇತೃತ್ವದ ಸರ್ಕಾರ ದಬ್ಬಾಳಿಕೆಯ ಆಳ್ವಿಕೆ ನಡೆಸುತ್ತಿದೆ. ದ್ವೇಷ ಬಿತ್ತುವ ಕೆಲಸ ಮಾಡುತ್ತಿದೆ" ಎಂದು ಆರೋಪಿಸಿದ್ದಾರೆ.
ಸಿಎಎ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಕೈಗೊಂಡ ಕ್ರಮಗಳನ್ನು ಸೋನಿಯಾ ಗಾಂಧಿ ಖಂಡಿಸಿದರು. "ಉತ್ತರ ಪ್ರದೇಶ ಮತ್ತು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಜೊತೆ ಪೊಲೀಸರು ನಡೆದುಕೊಂಡ ರೀತಿ ಪಕ್ಷಪಾತದಿಂದ ಕೂಡಿದೆ" ಎಂದು ಸೋನಿಯಾ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರೋಧ ಪಕ್ಷಗಳ ಸಭೆಗೆ ಗೈರಾಗಿದ್ದರು. ಕೋಲ್ಕತ್ತಾದಲ್ಲಿ ಅವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.