ಸಂಸತ್ ಅಧಿವೇಶನ; ಲೋಕಸಭೆ, ರಾಜ್ಯಸಭೆಯಲ್ಲಿ ಇಂದಿನ ಚರ್ಚೆಗಳು
ನವದೆಹಲಿ, ಡಿಸೆಂಬರ್ 7; ಸಂಸತ್ ಚಳಿಗಾಲದ ಅಧಿವೇಶನದ 7ನೇ ದಿನದ ಕಲಾಪ ಮಂಗಳವಾರ ನಡೆಯಲಿದೆ. 12 ರಾಜ್ಯಸಭಾ ಸದಸ್ಯರನ್ನು ಅಮಾನತು ಮಾಡಿದ ವಿಚಾರದಲ್ಲಿ ಗದ್ದಲ ಉಂಟಾಗಿ ರಾಜ್ಯಸಭೆಯ ಸೋಮವಾರದ ಕಲಾಪವನ್ನು ಮುಂದೂಡಲಾಗಿತ್ತು.
ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾರತೀಯ ಸೇನೆಯಿಂದ ನಾಗಾಲ್ಯಾಂಡ್ನಲ್ಲಿ ನಡೆದ ಉಗ್ರ ನಿಗ್ರಹ ಕಾರ್ಯಾಚರಣೆ ವೇಳೆ ನಾಗರಿಕರ ಮೇಲೆ ಗುಂಡಿನ ದಾಳಿ ನಡೆದ ಪ್ರಕರಣದ ಬಗ್ಗೆ ಹೇಳಿಕೆ ನೀಡಿದ್ದರು.
ಇಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಹೈಕೋರ್ಟ್ ನ್ಯಾಯಾಧೀಶರ (ಸಂಬಳಗಳು ಮತ್ತು ಸೇವಾ ಷರತ್ತುಗಳು) ಕಾಯ್ದೆ 1954 ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರ (ಸೇವೆಯ ವೇತನಗಳು ಮತ್ತು ಷರತ್ತುಗಳು) ಕಾಯ್ದೆ 1958 ತಿದ್ದುಪಡಿ ಮಾಡಲು ಮಸೂದೆಯನ್ನು ಮಂಡಿಸಲಿದ್ದಾರೆ.

ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸಂತಾನೋತ್ಪತ್ತಿ ನೆರವು ತಂತ್ರಜ್ಞಾನ (ನಿಯಂತ್ರಣ) ಮಸೂದೆಯನ್ನು ಮಂಡಿಸಲಿದ್ದಾರೆ. ಬಾಡಿಗೆ ತಾಯ್ತನ ನಿಯಂತ್ರಣ ಮಸೂದೆ -2020 ಮತ್ತು ವೈದ್ಯಕೀಯ ಗರ್ಭಪಾತ ತಿದ್ದುಪಡಿ ಮಸೂದೆ -2020ಕ್ಕೆ ಅನುಮೋದನೆ ದೊರೆಯುವ ನಿರೀಕ್ಷೆ ಇದೆ.
ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆ 2020 ರಲ್ಲಿ ಕೇಂದ್ರ ಮಟ್ಟದಲ್ಲಿ ರಾಷ್ಟ್ರೀಯ ಮಂಡಳಿ ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಜ್ಯ ಮಂಡಳಿಗಳು ಮತ್ತು ಸೂಕ್ತ ಪ್ರಾಧಿಕಾರಗಳನ್ನು ಸ್ಥಾಪಿಸುವ ಮೂಲಕ ಭಾರತದಲ್ಲಿ ಬಾಡಿಗೆ ತಾಯ್ತನ ನಿಯಂತ್ರಿಸಲು ಪ್ರಸ್ತಾಪಿಸಲಾಗಿದೆ.
ಈ ಮಸೂದೆಗಳು ಈಗಾಗಲೇ ಸಂಸತ್ನ ಎರಡೂ ಸದನಗಳ ಪ್ರತ್ಯೇಕ ಆಯ್ಕೆ ಸಮಿತಿಗಳ ಮೂಲಕ ಪರಿಶೀಲನೆಗೆ ಒಳಪಟ್ಟಿವೆ. ಈಗ ಮತ್ತೆ ಸಂಸತ್ತಿನಲ್ಲಿ ಮಂಡನೆ ಮಾಡಿ, ಚರ್ಚಿಸಿ ಒಪ್ಪಿಗೆ ಪಡೆಯಲಾಗುತ್ತದೆ.












Click it and Unblock the Notifications