'ಚೀನಾ ಪೇ ಚರ್ಚಾ' ಯಾವಾಗ: ಮೋದಿ ಸರ್ಕಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ
ನವದೆಹಲಿ, ಡಿಸೆಂಬರ್ 17: ಭಾರತ ಹಾಗೂ ಚೀನಾ ಗಡಿಯಲ್ಲಿ ಉದ್ವಗ್ನ ಪರಿಸ್ಥಿತಿ ಏರ್ಪಟ್ಟಿದೆ. ಭಾರತೀಯ ಯೋಧರು ಹಾಗೂ ಚೀನಾ ಸೈನಿಕರ ನಡುವೆ ಬಡಿದಾಟಗಳಾಗಿವೆ ಎಂದು ವರದಿಯಾಗಿದೆ. ಈ ಕುರಿತು ಪ್ರಧಾನಿ ಮೋದಿ ಸರ್ಕಾರವನ್ನು ವಿರೋಧ ಪಕ್ಷಗಳ ನಾಯಕರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಭಾರತವು 'ಚೀನಾ ಪೇ ಚರ್ಚಾ' ಯಾವಾಗ ಮಾಡಲಿದೆ ಎಂದು ಕೇಳಿದ್ದಾರೆ.

ರಾಷ್ಟ್ರೀಯ ಭದ್ರತೆಗೆ ಅತ್ಯಂತ ಕಳವಳಕಾರಿ ವಿಚಾರ
ರಾಜ್ಯಸಭೆಯಲ್ಲಿ ಅರುಣಾಚಲ ಪ್ರದೇಶದ ತವಾಂಗ್ನಲ್ಲಿ ಭಾರತ-ಚೀನಾ ಘರ್ಷಣೆಯ ಬಗ್ಗೆ ಚರ್ಚಿಸಲು ಸದನದ ಅಧ್ಯಕ್ಷರು ಒಪ್ಪಿದ್ದರು. ಅದರೆ, ಈ ಬಗ್ಗೆ ಮಾತನಾಡಲು ನನಗೆ ಅವಕಾಶವನ್ನೇ ನೀಡಲಿಲ್ಲ ಎಂದು ಖರ್ಗೆ ಆರೋಪಿಸಿದ್ದಾರೆ.
ಡೋಕ್ಲಾಮ್ ಪ್ರದೇಶದ ಆಯಕಟ್ಟಿನ ಸಿಲಿಗುರಿ ಕಾರಿಡಾರ್ಗೆ ಸಮೀಪದಲ್ಲಿರುವ ಜಂಫೇರಿ ಪರ್ವತದವರೆಗೆ ಚೀನಾ ಪಡೆಗಳು ಕಟ್ಟಡಗಳನ್ನು ನಿರ್ಮಿಸುತ್ತಿವೆ ಎಂದು ಖರ್ಗೆ ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಈ ವಿಚಾರವು ನಮ್ಮ ರಾಷ್ಟ್ರೀಯ ಭದ್ರತೆಗೆ ಅತ್ಯಂತ ಕಳವಳಕಾರಿ ವಿಚಾರ' ಎಂದು ಅವರು ಹೇಳಿದರು.

ಸತ್ಯಗಳನ್ನು ಮರೆಮಾಚುತ್ತಿರುವ ಮೋದಿ ಸರ್ಕಾರ
ರಾಜಸ್ಥಾನದಲ್ಲಿ ಶುಕ್ರವಾರ ಮಾತನಾಡಿರುವ ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ, ಚೀನಾ ಯುದ್ಧಕ್ಕೆ ತಯಾರಿ ನಡೆಸುತ್ತಿದೆ. ಆದರೆ, ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಚೀನಾ ಬೆದರಿಕೆಯನ್ನು ನಿರ್ಲಕ್ಷಿಸುತ್ತಿದೆ. ಸತ್ಯಗಳನ್ನು ಮರೆಮಾಚುತ್ತಿದೆ ಎಂದು ಹೇಳಿದ್ದಾರೆ.
'ಚೀನಾ ಕೇವಲ ಆಕ್ರಮಣಕ್ಕೆ ತಯಾರಿ ನಡೆಸುತ್ತಿಲ್ಲ. ಆದರೆ, ಅದು ಪೂರ್ಣ ಪ್ರಮಾಣದ ಯುದ್ಧಕ್ಕೆ ತಯಾರಿ ನಡೆಸುತ್ತಿದೆ. ಬೆದರಿಕೆ ಸ್ಪಷ್ಟವಾಗಿದೆ. ಆದರೆ, ನಮ್ಮ ಸರ್ಕಾರವು ಬೆದರಿಕೆಯನ್ನು ನಿರ್ಲಕ್ಷಿಸುತ್ತಿದೆ' ಎಂದು ಹರಿಹಾಯ್ದಿದ್ದಾರೆ.
ಕೇಂದ್ರ ಸರ್ಕಾರವು ನಮ್ಮಿಂದ ಸತ್ಯಗಳನ್ನು ಮರೆಮಾಡಲು ಪ್ರಯತ್ನಿಸುತ್ತಿದೆ. ಆದರೆ. ಇಂತಹ ಗಂಭೀರ ವಿಚಾರಗಳನ್ನು ಹೆಚ್ಚು ಕಾಲ ಮುಚ್ಚಿಡಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
'ಚೀನಾ ಬಗ್ಗೆ ಎಚ್ಚರಿಕೆ ವಹಿಸುವಂತೆ ನಾನು ಈ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದೇನೆ. ಅವರು ಲಡಾಕ್ ಮತ್ತು ಅರುಣಾಚಲದ ಕಡೆ ಚೀನಾ ಪಡೆಗಳು ಸಿದ್ಧತೆಗಳನ್ನು ನಡೆಸುತ್ತಿವೆ. ಆದರೆ, ಭಾರತ ಸರ್ಕಾರ ಮಾತ್ರ ನಿದ್ದೆ ಮಾಡುತ್ತಿದೆ' ಎಂದು ಟೀಕಿಸಿದ್ದಾರೆ.

ಗೊಂದಲ ಹರಡಲು ರಾಹುಲ್ ಯತ್ನ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ತಿರುಗೇಟು ನೀಡಿರುವ ಬಿಜೆಪಿ, ಗೊಂದಲ ಹರಡಲು ಕಾಂಗ್ರೆಸ್ ನಾಯಕ ಯತ್ನಿಸುತ್ತಿದ್ದಾರೆ ಎಂದು ಹೇಳಿದೆ.
ಬಿಜೆಪಿ ವಕ್ತಾರ ರಾಜವರ್ಧನ್ ಸಿಂಗ್ ರಾಥೋಡ್ ವಾಗ್ದಾಳಿ ನಡೆಸಿದ್ದು, 'ರಾಹುಲ್ ಗಾಂಧಿ ಚೀನಾದೊಂದಿಗೆ ಸಾಮೀಪ್ಯ ಹೊಂದಿರಬಹುದು ಎಂದು ನಾನು ಭಾವಿಸಿದ್ದೇನೆ. ಈಗ ಅವರು ಚೀನಾ ದೇಶಕ್ಕೆ ತುಂಬಾ ನಿಕಟವಾಗಿದ್ದಾರೆ. ಹೀಗಾಗಿ, ಚೀನಾ ಏನು ಮಾಡುತ್ತದೆ ಎಂದು ಅವರಿಗೆ ತಿಳಿದಿದೆ' ಎಂದು ಟೀಕಿದ್ದಾರೆ.

ಬಿಜೆಪಿ ಸರ್ಕಾರ ಪಾರದರ್ಶಕವಾಗಿರಲಿ
ರಾಹುಲ್ ವಿರುದ್ಧದ ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್, 'ಬಿಜೆಪಿ ಸರ್ಕಾರವು ಪ್ರಾಮಾಣಿಕವಾಗಿರಬೇಕು ಮತ್ತು ತನ್ನ ಬೆನ್ನುಮೂಳೆಯನ್ನು ಗಟ್ಟಿ ಮಾಡಿಕೊಳ್ಳಬೇಕು. ಬಾಲಿಶ ಹೇಳಿಕೆಗಳೊಂದಿಗೆ ರಾಹುಲ್ ಗಾಂಧಿಗೆ ಪ್ರತಿಕ್ರಿಯಿಸುವ ಬದಲು ಅವರು ಹೇಳಿದ್ದನ್ನು ಕೇಳುವ ಧೈರ್ಯವನ್ನು ಹೊಂದಿರಿ' ಎಂದು ತಿಳಿಸಿದ್ದಾರೆ.
ಭಾರತದ ಗಡಿಯಲ್ಲಿ ಚೀನಾ ತನ್ನ ಉಪಟಳವನ್ನು ಮುಂದುವರಿಸಿದೆ. ಅರುಣಾಚಲ ಪ್ರದೇಶದ ಗಡಿಯಲ್ಲಿ ಮಾದರಿ ಗ್ರಾಮಗಳನ್ನು ನಿರ್ಮಿಸುವ ಮೂಲಕ ಭಾರತಕ್ಕೆ ಸವಾಲೊಡ್ಡುವ ಪ್ರಯತ್ನದಲ್ಲಿ ಚೀನಾ ತೊಡಗಿದೆ. ಆದರೆ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದನ್ನು ಅಲ್ಲಗಳಿಯುತ್ತಲೇ ಬಂದಿದೆ. ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ವಿರೋಧ ಪಕ್ಷಗಳ ನಾಯಕರು ಚೀನಾ ವಿಚಾರದ ಕುರಿತು ಸಂಸತ್ನಲ್ಲಿ ಚರ್ಚೆಯಾಗಲಿ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಎರಡು ವರ್ಷಗಳ ಹಿಂದೆ ಅರುಣಾಚಲ ಪ್ರದೇಶದ ಗಾಲ್ವಾನ್ ಕಣಿವೆಯಲ್ಲಿ ಭಾರತದ 20 ಯೋಧರನ್ನು ಚೀನಾ ಸೈನಿಕರು ಹತ್ಯೆ ಮಾಡಿದ್ದರು.












Click it and Unblock the Notifications