ಹಿಂದೂ, ಮುಸ್ಲಿಂ ಮತ ಓಲೈಕೆ: ಬಿಜೆಪಿ, ಟಿಎಂಸಿ ನೈತಿಕತೆಯ ಅಧಃಪತನ
ಪಂಚ ರಾಜ್ಯಗಳ ಅಸೆಂಬ್ಲಿ ಚುನಾವಣೆ ನಡೆಯುತ್ತಿದೆ. ಮತದಾರರನ್ನು ಓಲೈಸಲು ಎಲ್ಲಾ ಪಕ್ಷಗಳು ಪೈಪೋಟಿಗೆ ಬಿದ್ದಿವೆ. ಬಿಜೆಪಿ ಮತ್ತು ಅದರ ಮಿತ್ರಕೂಟ ಒಂದು ಕಡೆಯಾದರೆ, ಇನ್ನೊಂದು ಕಡೆ ಕಾಂಗ್ರೆಸ್, ಟಿಎಂಸಿ,ಡಿಎಂಕೆ ಸೇರಿದಂತೆ ಇತರ ಪಕ್ಷಗಳು.
ಅಭಿವೃದ್ದಿ, ಜನಪರ ಕೆಲಸ, ದೇಶಕಟ್ಟುವ ವಿಚಾರವನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗುವುದನ್ನು ಬಿಟ್ಟು, ರಾಜಕೀಯ ಪಕ್ಷಗಳು ಮಾಡುತ್ತಿರುವುದು ವಿರೋಧಿಗಳ ಟೀಕೆ, ಜಾತಿ ರಾಜಕಾರಣ.
ನಿರ್ದಿಷ್ಟ ಜಾತಿ/ಕೋಮುಗಳು ಒಂದು ಪಕ್ಷವನ್ನು ಬೆಂಬಲಿಸಿಕೊಂಡು ಬರುತ್ತಿರುವುದಕ್ಕೆ ಭಾರತದಲ್ಲಿ ಇತಿಹಾಸವೇ ಇದೆ. ಹಾಗಾಗಿ, ತಾವೆಷ್ಟೇ ಜಾತ್ಯಾತೀತರು ಎಂದು ಹೇಳಿಕೊಂಡು ಬಂದರೂ, ಚುನಾವಣೆಯ ವೇಳೆ ಜಾತಿ ಓಲೈಕೆಗೆ ಮುಂದಾಗುವುದು ಸಾಮಾನ್ಯ.
ಅಂತದ್ದೇ ಉದಾಹರಣೆ ಈಗಿನ ಅಸೆಂಬ್ಲಿ ಚುನಾವಣೆಯಲ್ಲೂ ನೋಡಬಹುದಾಗಿದೆ. ಅದರಲ್ಲೂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಒಂದು ಕಡೆಯಾದರೆ, ಕೇರಳದಲ್ಲಿ ಬಿಜೆಪಿ ಆ ಕೆಲಸವನ್ನು ಮಾಡುತ್ತಿದೆ.

ಮಮತಾ ಬ್ಯಾನರ್ಜಿ ಅಧಿಕಾರಕ್ಕೆ ಬರಲು ಮುಸ್ಲಿಂ ಮತದಾರರ ಕೊಡುಗೆ ಅಪಾರ
ಪಶ್ಚಿಮ ಬಂಗಾಳದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಶೇ. 27ರಷ್ಟಿದೆ. ಮಮತಾ ಬ್ಯಾನರ್ಜಿ ಅಧಿಕಾರಕ್ಕೆ ಬರಲು ಇವರ ಕೊಡುಗೆ ಅಪಾರ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯಿಂದ ತೀವ್ರ ಪೈಪೋಟಿ ಏರ್ಪಟ್ಟಿದ್ದರಿಂದ, ಮಮತಾ ಅವರು ಮುಸ್ಲಿಂರಲ್ಲಿ ಮನವಿಯನ್ನು ಮಾಡಿದ್ದರು. ಹೂಗ್ಲಿ ಜಿಲ್ಲೆಯ ಚುನಾವಣಾ ಪ್ರಚಾರದ ವೇಳೆ, ಮುಸ್ಲಿಮರು ಟಿಎಂಸಿಗೆ ಮತ ಚಲಾಯಿಸಿ, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಸಹಾಯ ಮಾಡಬೇಕೆಂದು ಮನವಿ ಮಾಡಿದ್ದರು. (ಚಿತ್ರ:ಪಿಟಿಐ)

ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ
ಈ ರೀತಿ ನೇರವಾಗಿ ಒಂದು ಕೋಮಿನವರನ್ನು ತಮ್ಮ ಪಕ್ಷದ ಪರವಾಗಿ ಮತ ಚಲಾಯಿಸಿ ಎಂದು ಕೇಳುವುದು ತಪ್ಪು. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ಬಿಜೆಪಿ, ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಟಿಎಂಸಿ ವಿರುದ್ದ ಕ್ರಮ ಜರಗಿಸಬೇಕೆಂದು ಬಿಜೆಪಿ ಮುಖಂಡ ಮುಕ್ತಾರ್ ಅಬ್ಬಾಸ್ ನಖ್ವಿ ಆಯೋಗಕ್ಕೆ ದೂರು ನೀಡಿದ್ದಾರೆ. ಆದರೆ, ಬಿಜೆಪಿ ಕೇರಳದಲ್ಲಿ ಮಾಡುತ್ತಿರುವುದು ಏನು? (ಚಿತ್ರ:ಪಿಟಿಐ)

ನಳಿನ್ ಕುಮಾರ್ ಕಟೀಲ್ ಹೇಳಿಕೆ
ಕರ್ನಾಟಕ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕೇರಳದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡುತ್ತಾ, " ಕೇರಳದಲ್ಲಿ ಬಿಜೆಪಿ ಹಿಂದೂಗಳ ಬೆಂಬಲದಿಂದ ಹತ್ತಕ್ಕೂ ಹೆಚ್ಚು ಕ್ಷೇತ್ರದಲ್ಲಿ ಜಯ ಸಾಧಿಸಲಿದೆ"ಎಂದು ಹೇಳಿದ್ದಾರೆ. ಕಟೀಲ್ ಅವರ ಹೇಳಿಕೆಗೆ ಎಲ್ಡಿಎಫ್ ಮತ್ತು ಯುಡಿಎಫ್ ಆಕ್ಷೇಪ ವ್ಯಕ್ತ ಪಡಿಸಿದೆ.
Recommended Video

ಹಿಂದೂ, ಮುಸ್ಲಿಂ ಮತ ಓಲೈಕೆ: ಬಿಜೆಪಿ, ಟಿಎಂಸಿಗೆ ಅದ್ಯಾವ ನೈತಿಕತೆ ಇದೆ
ಮಮತಾ ಹೇಳಿಕೆಯನ್ನು ಆಕ್ಷೇಪಿಸಿ ಆಯೋಗದ ಕದ ತಟ್ಟುವ ಬಿಜೆಪಿ, ಕೇರಳದಲ್ಲಿ ಮಾಡುತ್ತಿರುವುದು ಜಾತಿ ಓಲೈಕೆ ಅಲ್ಲವೇ ಎನ್ನುವುದಿಲ್ಲಿ ಪ್ರಶ್ನೆ. ಚುನಾವಣಾ ಆಯೋಗ ಬಿಜೆಪಿಯ ಕೈಗೊಂಬೆಯಂತೆ ಕೆಲಸ ಮಾಡುತ್ತಿದೆ ಎನ್ನುವ ಆರೋಪಕ್ಕೆ ವಿರುದ್ದವಾಗಿ, ಜಾತಿ ರಾಜಕಾರಣ ಮಾಡುವ ಪಕ್ಷಗಳ ವಿರುದ್ದ ಆಯೋಗ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ.












Click it and Unblock the Notifications