ಜನವರಿಯಿಂದಲೇ ಭಾರತೀಯರಿಗೆ ಕೊರೊನಾ ಲಸಿಕೆ ಸಿಗಲಿದೆ: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್
ನವದೆಹಲಿ, ಡಿಸೆಂಬರ್ 21: ದೇಶದಲ್ಲಿ ಜನವರಿಯಿಂದಲೇ ಭಾರತೀಯರಿಗೆ ಕೊರೊನಾ ಲಸಿಕೆ ನೀಡಲು ಪ್ರಾರಂಭಿಸಬಹುದು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಮೊದಲ ಆದ್ಯತೆಯು ಕೊರೊನಾ ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವ ಆಗಿದೆ ಎಂದಿದ್ದಾರೆ. '' ನಾನು ವೈಯಕ್ತಿಕವಾಗಿ ಹೇಳುವುದೇನೆಂದರೆ ಜನವರಿ ತಿಂಗಳಿನ ಯಾವುದೇ ವಾರದಲ್ಲಿ ಅಥವಾ ಹಂತದಲ್ಲಿ ದೇಶದಲ್ಲಿ ಜನರಿಗೆ ಕೋವಿಡ್ ಲಸಿಕೆ ನೀಡುವುದನ್ನು ಆರಂಭಿಸಬಹುದು'' ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.
ಕೋವಿಡ್-19 ಲಸಿಕೆ ಪಡೆಯಲು ನೋಂದಣಿ ಅಗತ್ಯ: ಯಾವುದೇ ಬಲವಂತವಿಲ್ಲ!
ತುರ್ತು ಬಳಕೆಗೆ ದೃಢೀಕರಣಕ್ಕಾಗಿ ಅರ್ಜಿ ಸಲ್ಲಿಸಿದವರು ಸೇರಿದಂತೆ ಆರೋಗ್ಯ ಕಾರ್ಯಕರ್ತರಿಗೆ ಪ್ರಮುಖ ಆದ್ಯತೆ ನೀಡಲು ಲಸಿಕೆ ನಿಯಂತ್ರಕದಿಂದ ತಯಾರಿ ನಡೆಸಲಾಗಿದೆ ಎಂದು ವ್ಯಾಕ್ಸಿನೇಷನ್ ಚಾಲನೆ ಬಗ್ಗೆ ಹರ್ಷವರ್ಧನ್ ಹೇಳಿದರು.
''ಕೋವಿಡ್ 19 ಲಸಿಕೆ ಮತ್ತು ಸಂಶೋಧನೆಗೆ ಸಂಬಂಧಿಸಿದಂತೆ ಭಾರತವು ಯಾವುದೇ ದೇಶಕ್ಕಿಂತ ಕಡಿಮೆಯಿಲ್ಲ. ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವವೇ ನಮ್ಮ ಮೊದಲ ಆದ್ಯತೆ. ಅದರಲ್ಲಿ ಯಾವುದೆಲ್ಲ ಒಳಗೊಂಡಿರಬೇಕೆಂದು ನಾವು ಬಯಸುವುದಿಲ್ಲ. ನಮ್ಮ ನಿಯಂತ್ರಕರು ಅವುಗಳ ಗಂಭೀರತೆಯಿಂದ ವಿಶ್ಲೇಷಿಸುತ್ತಿದ್ದಾರೆ'' ಎಂದಿದ್ದಾರೆ.
ಮುಂಬರುವ ಆರರಿಂದ ಏಳು ತಿಂಗಳಲ್ಲಿ ಭಾರತವು ಸುಮಾರು 30 ಕೋಟಿ ಜನರಿಗೆ ಲಸಿಕೆ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ಸಚಿವರು ಈ ಹಿಂದೆ ಹೇಳಿದ್ದಾರೆ. ದೇಶದ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ದೇಶದ ವಿಜ್ಞಾನಿಗಳು ಮತ್ತು ಆರೋಗ್ಯ ತಜ್ಞರು ಕೆಲಸ ಮಾಡಿದ್ದಾರೆ.