ಉತ್ತರಾಖಂಡ: 24 ಗಂಟೆ ವಿದ್ಯುತ್, ಪ್ರಣಾಳಿಕೆಯಲ್ಲಿ ಬಿಜೆಪಿ ಘೋಷಣೆ
ಉತ್ತರಾಖಂಡ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. 24 ಗಂಟೆ ವಿದ್ಯುತ್ ಪೂರೈಕೆ, ಭ್ರಷ್ಟಾಚಾರ ವಿರೋಧಿ ಘಟಕ ಸ್ಥಾಪನೆ ಮಾಡುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ತಿಳಿಸಿದೆ.
ಡೆಹ್ರಾಡೂನ್, ಫೆಬ್ರವರಿ 5: 24 ಗಂಟೆ ವಿದ್ಯುತ್ ಪೂರೈಕೆ, ಭ್ರಷ್ಟಾಚಾರ ವಿರೋಧಿ ಘಟಕ ಸ್ಥಾಪನೆ ಮಾಡುವುದಾಗಿ ಬಿಜೆಪಿ ತನ್ನ ಉತ್ತರಾಖಂಡ ಪ್ರಣಾಳಿಕೆಯಲ್ಲಿ ತಿಳಿಸಿದೆ. [ಸಮೀಕ್ಷೆ: ಉತ್ತರಖಂಡ, ಮಣಿಪುರದಲ್ಲಿ ಬಿಜೆಪಿ ಅಧಿಕಾರಕ್ಕೆ]
ಶನಿವಾರ ಹಣಕಾಸು ಸಚಿವ ಅರುಣ್ ಜೇಟ್ಲಿ ಉತ್ತರಾಖಂಡ ವಿಧಾನಸಭೆ ಚುನಾವಣೆ 2017ರ ಪ್ರಾಣಾಳಿಕೆಯನ್ನು ಬಿಡುಗಡೆ ಮಾಡಿದರು. ಈ ಸಂದರ್ಭ ರಾಜ್ಯದಲ್ಲಿ ಬಿಜೆಪಿ ಚುನಾವಣಾ ಪ್ರಚಾರಕ್ಕೆ ಕೂಡಾ ಜೇಟ್ಲಿ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು ಆಡಳಿತರೂಢ ಕಾಂಗ್ರೆಸ್ ಸರಕಾರ ಅಭಿವೃದ್ಧಿಗಿಂತ ಜಾಸ್ತಿ ಹಗರಣಗಳಲ್ಲೇ ತೊಡಗಿಸಿಕೊಂಡಿದೆ ಎಂದು ದೂರಿದ್ದಾರೆ. [ಉತ್ತರಖಂಡ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ಪ್ರತಿಷ್ಠೆಯೇ ಹೈಲೈಟ್]

ಬಿಜೆಪಿಯ ಭರವಸೆಗಳೇನು?
ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರಮುಖವಾಗಿ ಶಿಕ್ಷಣ, ಉದ್ಯೋಗ, ಸ್ವಚ್ಛತೆ ಮತ್ತು ಭ್ರಷ್ಟಾಚಾರ ಮುಕ್ತ ಸರಕಾರ ನೀಡುವುದಾಗಿ ಪ್ರಣಾಳಿಕೆ ಬಿಡುಗಡೆ ಮಾಡಿ ಅರುಣ್ ಜೇಟ್ಲಿ ಹೇಳಿದ್ದಾರೆ.

ಶಿಕ್ಷಣಕ್ಕೆ ಉತ್ತೇಜನ
ಬಿಜೆಪಿ ಪ್ರಣಾಳಿಕೆಯಲ್ಲಿ ಶಿಕ್ಷಣವನ್ನೇ ಗುರಿಯಾಗಿಸಿದೆ. ಬಡ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿವರೆಗೆ ಉಚಿತ ಶಿಕ್ಷಣ ನೀಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಜತೆಗೆ ಶೈಕ್ಷಣಿಕವಾಗಿ ಸಾಧನೆ ಮಾಡುವವರಿಗೆ ಉಚಿತ ಲ್ಯಾಪ್ ಟಾಪ್ ಮತ್ತು ಸ್ಮಾರ್ಟ್ ಫೋನ್ ನೀಡುವುದಾಗಿಯೂ ಹೇಳಿದೆ.

ಆಂಬ್ಯುಲೆನ್ಸ್ ಸೇವೆ
ಸಂಸ್ಕೃತ, ವೈದ್ಯಕೀಯ ಮತ್ತು ಜ್ಯೋತಿಷ್ಯ ಶಿಕ್ಷಣಕ್ಕೂ ಒತ್ತು ನೀಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಹೇಳಿರುವುದು ವಿಶೇಷ. ಟೆಲಿ ಮೆಡಿಸಿನ್, ಏರ್ ಅಂಬ್ಯುಲೆನ್ಸ್ ಮತ್ತು ಇ-ಅಂಬ್ಯುಲೆನ್ಸ್ ಸೇವೆಗಳನ್ನು ಆರಂಭ ಮಾಡುವುದಾಗಿಯೂ ಬಿಜೆಪಿ ಹೇಳಿದೆ.

24 ಗಂಟೆ ವಿದ್ಯುತ್
ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ 24 ಗಂಟೆಯೂ ಕಡಿತವಿಲ್ಲದಂತೆ ವಿದ್ಯುತ್ ಪೂರೈಕೆ ಮಾಡುವುದಾಗಿ ಬಿಜೆಪಿ ಹೇಳಿದೆ. ಇದರ ಜತೆಗೆ ರಾಜ್ಯದಲ್ಲಿ ಭ್ರಷ್ಟಾಚಾರ ವಿರೋಧಿ ಘಟಕ ತೆರೆಯುತ್ತೇವೆ. ಯುವಕರಿಗಾಗಿ ಹೊಸ ಪಾಲಿಸಿ ಜಾರಿಗೆ ತರುವುದಾಗಿಯೂ ಹೇಳಿದೆ.

ಅಭಿವೃದ್ಧಿಯೇ ನಮ್ಮ ಮಂತ್ರ
ಉತ್ತರಾಖಂಡದ ಸಮಗ್ರ ಅಭಿವೃದ್ಧಿಗೆ ಬೇಕಾದ ನೀಲನಕ್ಷೆ ತಯಾರಿಸುತ್ತೇವೆ. ಎಲ್ಲಾ ರಾಜ್ಯ ವಿಶ್ವವಿದ್ಯಾಲಯಗಳಲ್ಲೂ ವೈ-ಫೈ ಸೌಲಭ್ಯ ನೀಡಲಾಗುವುದು. ಜಿಲ್ಲಾ ಕೇಂದ್ರಗಳಲ್ಲಿ ಬಾಲಕಿಯರಿಗೆ ವಸತಿ ಶಾಲೆಗಳನ್ನು ತೆರೆಯಲಾಗುವುದು. ಅತಿಥಿ ಉಪನ್ಯಾಸಕರನ್ನು ನಿರಂತರವಾಗಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಬಿಜೆಪಿ ಹೇಳಿದೆ.

ರೈತ ಪರ
ರೈತರಿಗೆ ಬಡ್ಡಿ ರಹಿತ ಸಾಲ ನೀಡುತ್ತೇವೆ. ಸಾವಯವ ಕೃಷಿಗೆ ಉತ್ತೇಜನ ನೀಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ರಾಜ್ಯದ ಎರಡು ನಗರಗಳಲ್ಲಿ ಟ್ರೂಮಾ ಕೇಂದ್ರ ಸ್ಥಾಪನೆ ಮಾಡಲಾಗುವುದು. ಬಿಪಿಎಲ್ ಕಾರ್ಡುದಾರರಿಗೆ ಆರೋಗ್ಯ ಕಾರ್ಡುಗಳನ್ನು ನೀಡಲಾಗುವುದು ಎಂದು ಸರಕಾರ ಭರವಸೆ ನೀಡಿದೆ.












Click it and Unblock the Notifications