ಉತ್ತರಾಖಂಡದಲ್ಲಿ ಯುವತಿ ಹತ್ಯೆ ಕೇಸ್: ಬಿಜೆಪಿ ಮುಖಂಡನ ಪುತ್ರ ಲಾಕ್!
ಹರಿದ್ವಾರ, ಸೆಪ್ಟೆಂಬರ್ 24: ಉತ್ತರಾಖಂಡದ ಪೌರಿ ಜಿಲ್ಲೆಯ ಋಷಿಕೇಶ ಬಳಿಯ ರೆಸಾರ್ಟ್ನಲ್ಲಿ ರಿಸೆಪ್ಷನಿಸ್ಟ್ ಆಗಿದ್ದ 19 ವರ್ಷದ ಯುವತಿ ಹತ್ಯೆ ಪ್ರಕರಣದಲ್ಲಿ ಬಿಜೆಪಿಯ ಹಿರಿಯ ನಾಯಕ ವಿನೋದ್ ಆರ್ಯ ಪುತ್ರ ಪುಲ್ಕಿತ್ ಆರ್ಯ ಅನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಯುವತಿ ಕಾಣೆಯಾಗಿರುವ ಬಗ್ಗೆ ಕುಟುಂಬ ಸದಸ್ಯರು ದೂರು ನೀಡಿದ್ದು, ತನಿಖೆ ಸಂದರ್ಭದಲ್ಲಿ ಯುವತಿ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ.
ಇಬ್ಬರು ಸಹಚರರ ಜೊತೆ ಸೇರಿಕೊಂಡು ಯುವತಿ ಕೊಲೆ ಮಾಡಲಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ಕುಟುಂಬ ಸದಸ್ಯರು ಈಗಾಗಲೇ ಯುವತಿ ಹತ್ಯೆಯಲ್ಲಿ ಪುಲ್ಕಿತ್ ಆರ್ಯ ಕೈವಾಡವಿರುವ ಬಗ್ಗೆ ಶಂಕಿಸಿದ್ದಾರೆ.
ಇದರ ಮಧ್ಯೆ ರೆಸಾರ್ಟ್ ಬಳಿಯ ನೀರಿನ ಚಾನಲ್ನಲ್ಲಿ ಯುವತಿ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಆರೋಪಿಯ ತಂದೆ ರಾಜ್ಯದ ಆಡಳಿತ ಪಕ್ಷ ಬಿಜೆಪಿ ಮತ್ತು ಆರ್ಎಸ್ಎಸ್ಗೆ ಸೇರಿದ ಕಾರಣ" ನಿಷ್ಕ್ರಿಯತೆಯ ಆರೋಪಗಳ ಮಧ್ಯೆ ಉದ್ದೇಶದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಿಜೆಪಿ ನಾಯಕ, ಮಾಜಿ ಸಚಿವರ ಪುತ್ರ ಶಾಮೀಲು
ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ವೈರಲ್ ಆದ ನಂತರ ಪೊಲೀಸರು ಚುರುಕಿನ ತನಿಖೆ ನಡೆಸಿದ್ದಾರೆ. ಸದ್ಯ ಪುಲ್ಕಿತ್ ಆರ್ಯ ತಂದೆ ವಿನೋದ್ ಆರ್ಯ ಸರ್ಕಾರದ ಯಾವುದೇ ಹುದ್ದೆಯಿಲ್ಲದೆ ಹಿರಿಯ ಸ್ಥಾನವನ್ನು ಹೊಂದಿದ್ದಾರೆ. ವಿನೋದ್ ಆರ್ಯ ಈ ಹಿಂದೆ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಕುಂಬಾರಿಕೆ ಪ್ರಚಾರಕ್ಕಾಗಿ ಸರ್ಕಾರಿ ಸಂಸ್ಥೆಯಾದ ಉತ್ತರಾಖಂಡದ ಮತಿ ಕಲಾ ಮಂಡಳಿಯ ಅಧ್ಯಕ್ಷರಾಗಿದ್ದರು. ಪುಲ್ಕಿತ್ ಸಹೋದರ ಅಂಕಿತ್ ಆರ್ಯ ಕೂಡ ಬಿಜೆಪಿ ನಾಯಕರಾಗಿದ್ದಾರೆ.

ಯುವತಿ ಹತ್ಯೆ ಕೇಸ್ ವರ್ಗಾವಣೆ ಆಗಿದ್ದೇ ಗುರುವಾರ
"ಈ ರೆಸಾರ್ಟ್, ವನಂತ್ರ ಇರುವ ಪ್ರದೇಶವು ಸಾಮಾನ್ಯ ಪೊಲೀಸ್ ವ್ಯಾಪ್ತಿಗೆ ಬರುವುದಿಲ್ಲ. ಅಂತಹ ಪ್ರದೇಶಗಳಲ್ಲಿ ಎಫ್ಐಆರ್ ಅನ್ನು ದಾಖಲಿಸುವ ಪಟ್ವಾರಿ ಅಥವಾ ಭೂ ಕಂದಾಯ ಅಧಿಕಾರಿ ವ್ಯವಸ್ಥೆಯನ್ನು ನಾವು ಹೊಂದಿದ್ದೇವೆ. ನಾಪತ್ತೆಯಾಗಿರುವ ವ್ಯಕ್ತಿಯ ಎಫ್ಐಆರ್ ಅನ್ನು ರೆಸಾರ್ಟ್ ಮಾಲೀಕರೇ ದಾಖಲಿಸಿದ್ದಾರೆ. ರೆಸಾರ್ಟ್ ಮುಖ್ಯ ಪಟ್ಟಣ ರಿಷಿಕೇಶದಿಂದ ಸುಮಾರು 10 ಕಿಮೀ ದೂರದಲ್ಲಿದೆ," ಎಂದು ರಾಜ್ಯ ಪೊಲೀಸ್ ಮುಖ್ಯಸ್ಥ ಅಶೋಕ್ ಕುಮಾರ್ ವಿವರಿಸಿದರು.
"ನಿನ್ನೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಕರಣವನ್ನು ನಮಗೆ ವರ್ಗಾಯಿಸಿದ್ದಾರೆ. ನಾವು ಅದನ್ನು 24 ಗಂಟೆಗಳ ಒಳಗೆ ಕೆಲಸ ಮಾಡಿದ್ದೇವೆ. ರೆಸಾರ್ಟ್ ಮಾಲೀಕರು ಇತರ ಇಬ್ಬರೊಂದಿಗೆ ಆರೋಪಿಗಳಾಗಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ," ಎಂದು ಪೊಲೀಸ್ ಮುಖ್ಯಸ್ಥರು ಹೇಳಿದರು.

ರೆಸಾರ್ಟ್ ವೇಶ್ಯಾವಾಟಿಕೆ ಅಡ್ಡೆ ಆಗಿತ್ತೇ?
ಹದಿಹರೆಯದ ಯುವತಿಯರನ್ನು ವೇಶ್ಯಾವಾಟಿಕೆಗೆ ಒತ್ತಾಯಿಸಲಾಗುತ್ತಿದೆ ಎಂಬ ಆರೋಪವಿದೆ, ಆದರೆ ಪೊಲೀಸರು ಈ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಇಂದು ವ್ಯಕ್ತಿಗಳನ್ನು ಬಂಧಿಸಿದಾಗ, ಪ್ರತಿಭಟನಾನಿರತ ಸ್ಥಳೀಯರು ಪೊಲೀಸ್ ವಾಹನವನ್ನು ಸುತ್ತುವರೆದರು ಮತ್ತು ಪೊಲೀಸರು ಅವರನ್ನು ಕರೆದೊಯ್ಯುವ ಮೊದಲು ಅವರ ಮೇಲೆ ಹಲ್ಲೆ ನಡೆಸಿದರು.
ಆರೆಸ್ಸೆಸ್-ಬಿಜೆಪಿ ಜೊತೆಗಿನ ಸಂಬಂಧದಿಂದ ಪೊಲೀಸರು ನಿಧಾನವಾಗಿದ್ದಾರೆ ಎಂದು ಪ್ರತಿಪಕ್ಷ ಕಾಂಗ್ರೆಸ್ ದೂಷಿಸಿದೆ. "ಇದು ಭಯಾನಕವಾಗಿದ್ದು, ಸೆಪ್ಟೆಂಬರ್ 18 ರಂದು ಹುಡುಗಿ ಕಾಣೆಯಾಗಿದ್ದು, ಪೊಲೀಸರು ಸೆಪ್ಟೆಂಬರ್ 21 ರಂದು ಎಫ್ಐಆರ್ ಅನ್ನು ಏಕೆ ದಾಖಲಿಸಿದರು?," ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಗರಿಮಾ ಮೆಹ್ರಾ ದಸೌನಿ ಪ್ರಶ್ನಿಸಿದ್ದಾರೆ. ಬಿಜೆಪಿ ಮತ್ತು ಆರ್ಎಸ್ಎಸ್ ನಾಯಕರ ಈ ನಿರ್ಲಜ್ಜ ಅಧಿಕಾರ ದುರುಪಯೋಗ ಎಲ್ಲಿಯವರೆಗೆ ಮುಂದುವರಿಯುತ್ತದೆ?," ಎಂದು ಕಿಡಿ ಕಾರಿದ್ದಾರೆ.

ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಎಂದ ಸಿಎಂ ಧಾಮಿ
ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ "ಕಠಿಣ ಕ್ರಮ" ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಭರವಸೆ ನೀಡಿದ್ದಾರೆ. "ಇದು ಅತ್ಯಂತ ದುಃಖಕರ ಹಾಗೂ ಅತ್ಯಂತ ಘೋರ ಅಪರಾಧವಾಗಿದೆ. ಪೊಲೀಸರು ಬಂಧನಕ್ಕೆ ಸಂಬಂಧಿಸಿದಂತೆ ಎಲ್ಲಾ ಕೆಲಸಗಳನ್ನು ಮಾಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಅಪರಾಧಿ ಯಾರೇ ಆಗಿದ್ದರೂ ಬಿಡುವುದಿಲ್ಲ," ಎಂದು ಅವರು ತಿಳಿಸಿದ್ದಾರೆ.
ಪುಲ್ಕಿತ್ ಆರ್ಯ ಅಲ್ಲದೆ, ರೆಸಾರ್ಟ್ ಮ್ಯಾನೇಜರ್ ಸೌರಭ್ ಭಾಸ್ಕರ್ ಮತ್ತು ಸಹಾಯಕ ವ್ಯವಸ್ಥಾಪಕ ಅಂಕಿತ್ ಗುಪ್ತಾ ಅನ್ನು ಬಂಧಿಸಲಾಗಿದೆ. "ಆರಂಭದಲ್ಲಿ, ಅವರು ಪೊಲೀಸರನ್ನು ದಾರಿತಪ್ಪಿಸಲು ಪ್ರಯತ್ನಿಸಿದರು, ಆದರೆ ಕಟ್ಟುನಿಟ್ಟಾಗಿ ವಿಚಾರಣೆ ನಡೆಸಿದಾಗ ಅವರು ಅಪರಾಧವನ್ನು ಒಪ್ಪಿಕೊಂಡರು," ಎಂದು ಪೌರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.












Click it and Unblock the Notifications