Universal Pension Scheme: ಸಾರ್ವತ್ರಿಕ ಪಿಂಚಣಿ ಯೋಜನೆ, ಏನಿದು, ವಿವರ
ನವದೆಹಲಿ, ಫೆಬ್ರವರಿ 27: ಕೇಂದ್ರ ಸರ್ಕಾರ ದೇಶದ ಜನರಿಗೆ ಶೀಘ್ರವೇ ಸಿಹಿಸುದ್ದಿಯೊಂದನ್ನು ನೀಡಲಿದೆ. 60 ವರ್ಷದ ದಾಟಿದ ಎಲ್ಲರಿಗೂ ಅನ್ವಯವಾಗುವ 'ಸಾರ್ವತ್ರಿಕ ಪಿಂಚಣಿ ಯೋಜನೆ'ಯನ್ನು ಜಾರಿಗೊಳಿಸಲು ಸರ್ಕಾರ ಸಿದ್ಧತೆಯನ್ನು ನಡೆಸಿದೆ. ಸ್ವಂತ ಇಚ್ಛೆಯ ಮೇರೆಗೆ ಜನರು ಈ ಯೋಜನೆಗೆ ಸೇರಿಕೊಳ್ಳಬಹುದು. ಕೇಂದ್ರ ಕಾರ್ಮಿಕ ಸಚಿವಾಲಯ ಯೋಜನೆಯ ರೂಪುರೇಷೆ ತಯಾರು ಮಾಡುತ್ತಿದೆ.
ವೃದ್ಧಾಪ್ಯದ ಸಂದರ್ಭದಲ್ಲಿ ಬದುಕು ಸಾಗಿಸಲು ಅನುಕೂಲ ಮಾಡಿಕೊಡುವ ಮಾದರಿಯಲ್ಲಿ 'ಸಾರ್ವತ್ರಿಕ ಪಿಂಚಣಿ ಯೋಜನೆ' ಜಾರಿಗೆ ಬರಲಿದೆ. ದುಡಿಯಲು ಕಷ್ಟವಾಗುವ ಸಂರ್ಭದಲ್ಲಿ ಆರೋಗ್ಯ ಹದಗೆಟ್ಟರೆ ಔಷಧಿಗಳನ್ನು ಕೊಳ್ಳಲು ಅನುಕೂಲವಾಗುವಂತೆ ಪಿಂಚಣಿ ಸಿಗುವಂತೆ ಯೋಜನೆ ಸಿದ್ಧಗೊಳ್ಳುತ್ತಿದೆ.

ಈ ಹೊಸ 'ಸಾರ್ವತ್ರಿಕ ಪಿಂಚಣಿ ಯೋಜನೆ' ಸಂಪೂರ್ಣ ಸುರಕ್ಷಿತವಾಗಿದ್ದು, ಯಾವುದೇ ಜನರು ಸ್ವ ಇಚ್ಛೆಯ ಮೇರೆಗೆ ಇದಕ್ಕೆ ಸೇರ್ಪಡೆಗೊಳ್ಳಬಹುದು. ಸದ್ಯ ಇದು ಪ್ರಾಥಮಿಕ ಹಂತದಲ್ಲಿದ್ದು, ವಿವಿಧ ಭಾಗೀದಾರರ ಜೊತೆ ಚರ್ಚಿಸಿದ ಬಳಿಕ ಅಂತಿಮ ರೂಪುರೇಷೆ ತಯಾರಾಗಲಿದೆ.
ಎಲ್ಲರಿಗೂ ಪಿಂಚಣಿ: ಸಂಘಟಿತ ಮತ್ತು ಅಸಂಘಟಿತ ವಲಯದ ಎಲ್ಲಾ ಕಾರ್ಮಿಕರು 'ಸಾರ್ವತ್ರಿಕ ಪಿಂಚಣಿ ಯೋಜನೆ' ವ್ಯಾಪ್ತಿಗೆ ಬರಲಿದ್ದಾರೆ. ಕಾರ್ಮಿಕ ಸಚಿವಾಲಯ ಸುದ್ದಿ ಸಂಸ್ಥೆಗಳ ಜೊತೆ ಈ ಕುರಿತು ಮಾಹಿತಿ ಹಂಚಿಕೊಂಡಿದೆ. ರಾಷ್ಟ್ರೀಯ ಮಾಧ್ಯಮಗಳು ಈ ಕುರಿತು ವರದಿ ಮಾಡಿವೆ.
ಮೂಲಗಳ ಮಾಹಿತಿ ಪ್ರಕಾರ ಸಾರ್ವತ್ರಿಕ ಪಿಂಚಣಿ ಯೋಜನೆಯಲ್ಲಿ ಕೇಂದ್ರ ಸರ್ಕಾರ ಯಾವುದೇ ಹೂಡಿಕೆ ಮಾಡುವುದಿಲ್ಲ. ಎಲ್ಲಾ ವರ್ಗದ ಉದ್ಯೋಗಿಗಳಿಗೂ ಕನಿಷ್ಠ ಪಿಂಚಣಿ ಸಿಗುವ ಮಾದರಿಯಲ್ಲಿ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ.
ಸ್ವಯಂ ಉದ್ಯೋಗ ಮಾಡುವವರು ಸಹ ಈ ಯೋಜನೆಗೆ ಸೇರಬಹುದಾಗಿದೆ. ಆದರೆ ಈಗ ಇರುವ ಇಪಿಎಫ್ಗಿಂತ ಈ ಯೋಜನೆ ಭಿನ್ನವಾಗಿ ಇರಲಿದೆ. ಪಿಂಚಣಿ/ ಉಳಿತಾಯ ವ್ಯವಸ್ಥೆಯನ್ನು ಸುವ್ಯವಸ್ಥಿತಗೊಳಿಸುವ ಉದ್ದೇಶದಿಂದ ಈ ಯೋಜನೆಯ ಪ್ರಸ್ತಾವನೆಯನ್ನು ರೂಪಿಸಲಾಗಿದೆ.
ಕೇಂದ್ರ ಸರ್ಕಾರ ಸದ್ಯ ಜಾರಿಗೊಳಿಸಿರುವ ಯಾವುದೇ ಪಿಂಚಣಿ ಯೋಜನೆಯಲ್ಲಿ 'ಸಾರ್ವತ್ರಿಕ ಪಿಂಚಣಿ ಯೋಜನೆ' ವಿಲೀನವಾಗುವುದಿಲ್ಲ. ಇದು ಬೇರೆಯ ಸ್ವರೂಪದಲ್ಲಿ ಇರಲಿದ್ದು, 60 ವರ್ಷ ದಾಟಿದ ಪ್ರತಿಯೊಬ್ಬರಿಗೂ ಕನಿಷ್ಠ ಪಿಂಚಣಿ ದೊರೆಯುವುದನ್ನು ಇದು ಖಚಿತಪಡಿಸುತ್ತದೆ.
ಯೋಜನೆ ರೂಪುರೇಷೆ ಪೂರ್ಣಗೊಂಡ ಬಳಿಕ ವಿವಿಧ ಭಾಗೀದಾರರ ಜೊತೆ ಚರ್ಚೆಯನ್ನು ನಡೆಸಿ ಇದನ್ನು ಅಂತಿಮಗೊಳಿಸಲಾಗುತ್ತದೆ. ಈ ಮಾದರಿ ಪಿಂಚಣಿಗೆ ಹೇಗೆ ಹೂಡಿಕೆ ಮಾಡಬೇಕು? ಎಂಬುದು ಸಹ ಇನ್ನೂ ಅಂತಿಮವಾಗಿಲ್ಲ.
ಸ್ವಯಂ ಪ್ರೇರಿತ ಕೊಡುಗೆಯನ್ನು ನೀಡಿ ಜನರು 'ಸಾರ್ವತ್ರಿಕ ಪಿಂಚಣಿ ಯೋಜನೆ'ಗೆ ಸೇರಿಕೊಳ್ಳಲಿದ್ದಾರೆಯೇ? ಎಂಬುದನ್ನು ಕಾದು ನೋಡಬೇಕಿದೆ. ಈ ಯೋಜನೆ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ವಿವಿಧ ವರ್ಗಗಳ ಕಾರ್ಮಿಕರಿಗೆ ಇದು ಸಹಾಯವನ್ನು ಮಾಡಲಿದೆ ಎಂದು ಅಂದಾಜಿಸಲಾಗಿದೆ.
ಕೇಂದ್ರ ಸರ್ಕಾರದ ಪ್ರಸ್ತಾವಿತ ಯೋಜನೆ ಸಿದ್ಧವಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಚರ್ಚಿಸಿ ಸಾರ್ವತ್ರಿಕ ಪಿಂಚಣಿ ಯೋಜನೆಯನ್ನು ಘೋಷಣೆ ಮಾಡಲಾಗುತ್ತದೆ. ಹಣ ಉಳಿತಾಯ, ಹೂಡಿಕೆಯನ್ನು ಪ್ರೋತ್ಸಾಹಿಸಲು ಇಂತಹ ಯೋಜನೆ ಜನರಿಗೆ ನೆರವಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.












Click it and Unblock the Notifications