ಸುಪ್ರೀಂ ಕೋರ್ಟಿಗೇ ಟಾಂಗ್ ಕೊಟ್ಟ ಆಧಾರ್ ನಿಲೇಕಣಿ

ಆಧಾರ್ ಗುರುತಿನ ಸಂಖ್ಯೆ ಯೋಜನೆಗೆ ಮಾನ್ಯತೆ ದಕ್ಕಿಸಿಕೊಳ್ಳಲು ಶತಾಯಗತಾಯ ಹೋರಾಡುತ್ತಿರುವ ನಂದನ್ ನಿಲೇಕಣಿ ಸಾರಥ್ಯದ Unique Identification Authority of India (UIDAI) ಸುಪ್ರೀಂ ಕೋರ್ಟಿಗೇ ತಿರುಮಂತ್ರ ಹೇಳಿದೆ.
ಒಂದು ವೇಳೆ ಆಧಾರ್ ಗುರುತಿನ ಸಂಖ್ಯೆಗೆ ಮಾನ್ಯತೆ ಪ್ರಾಪ್ತಿಯಾಗದಿದ್ದರೆ ಜನಪರ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಭಾರಿ ತೊಡಕುಗಳನ್ನು ಎದುರಿಸಬೇಕಾಗುತ್ತದೆ ಎಂದೂ ಕೋರ್ಟ್ ಅಂಗಳದಲ್ಲೇ ಬೆದರಿಕೆಯ ದನಿಯಲ್ಲಿ ಹೇಳಿದೆ. ಅಷ್ಟಕ್ಕೂ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರೇ ಕಳೆದ ವಾರ ಆಧಾರ್ ಗುರುತಿನ ಸಂಖ್ಯೆ ಯೋಜನೆಗೆ ಎಳ್ಳುನೀರು ಬಿಡಲಾಗಿದೆ ಎಂದಿದ್ದರು.
ಇಷ್ಟಕ್ಕೂ ಸುಪ್ರೀಂ ಕೋರ್ಟಿನಲ್ಲಿ UIDAI ವಾದವೇನು ಗೊತ್ತಾ? ಸೆ. 23ರಂದು ಸುಪ್ರೀಂ ಕೋರ್ಟ್ ಏನೋ ಆಧಾರ್ ಕಾರ್ಡ್ ಬೇಡವೇ ಬೇಡ ಎಂದು ಸ್ಪಷ್ಟವಾಗಿ ಹೇಳಿದೆ. ಆದರೆ 2011ರಲ್ಲಿ ಇದೇ ಸುಪ್ರೀಂ ಕೋರ್ಟ್ ಭಿನ್ನ ರೀತಿಯ ಆದೇಶ ನೀಡಿದೆ ಎಂದು ಗಮನ ಸೆಳೆದಿದೆ.
ಪಡಿತರ ವಿತರಣೆಯಲ್ಲಿ ನಡೆಯುತ್ತಿರುವ ಅಕ್ರಮಗಳ ಸಂಬಂಧ 2011ರ ಸೆ. 14ರಂದು ಪಿಐಎಲ್ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಆಧಾರ್ ಮಾಹಿತಿಯನ್ನಾಧರಿಸಿ ಪಡಿತರ ವಿತರಣೆಯನ್ನು ಕಂಪ್ಯೂಟರೀಕರಣಗೊಳಿಸಬೇಕು. ಪಡಿತರ ಪಡೆಯಲು ಆಧಾರ್ ಗುರುತಿನ ಸಂಖ್ಯೆಯನ್ನು ಮಾನದಂಡವಾಗಿಸುವುದರಿಂದ ಬೋಗಸ್ ವ್ಯಕ್ತಿಗಳು ಪಡಿತರ ಪಡೆಯುವುದು ತಪ್ಪುತ್ತದೆ ಎಂದು ಆದೇಶದಲ್ಲಿ ತಿಳಿಸಿತ್ತು.
ಆದರೆ ಸುಪ್ರೀಂ ಕೋರ್ಟಿನ ಇತ್ತೀಚಿನ ಮಧ್ಯಂತರ ಆದೇಶವು ಮೇಲಿನ ಈ ಆದೇಶದ ಆಶಯಕ್ಕೆ ವಿರುದ್ಧವಾಗಿದ್ದು, ದ್ವಂದ್ವಕ್ಕೆ ಕಾರಣವಾಗಿದೆ. ಈ ಎರಡೂ ಆದೇಶಗಳಲ್ಲಿ ವೈರುಧ್ಯತೆಯಿದೆ. ಹಾಗಾಗಿ ಮರುಪರಿಶೀಲಿಸಿ, ಗೊಂದಲ ನಿವಾರಿಸಬೇಕು ಎಂದು UIDAI ಸುಪ್ರೀಂ ಕೋರ್ಟಿಗೆ ಮೊರೆ ಹೋಗಿದೆ. ನೋಡಬೇಕು... ಏನಾಗುತ್ತದೋ?
ಈ ಮಧ್ಯೆ, ಅಕ್ರಮ ವಲಸಿಗರಿಗೆಲ್ಲಾ ಆಧಾರ್ ಗುರುತಿನ ಸಂಖ್ಯೆಯನ್ನು ನೀಡಬೇಡಿ ಎಂದು ಇತ್ತೀಚಿನ ಸುಪ್ರೀಂ ಆದೇಶವನ್ನು ಒಪ್ಪದ UIDAI, ಆಧಾರ್ ಗುರುತಿನ ಸಂಖ್ಯೆ ವ್ಯಕ್ತಿಯ ಗುರುತಿಗೆ ದಾಖಲೆಯಷ್ಟೇ ಹರಿತು ರಾಷ್ಟ್ರದ ನಾಗರಿಕ ಎಂಬುದಕ್ಕೆ ಪುರಾವೆಯಲ್ಲ ಎಂದೂ (ವಿತಂಡ)ವಾದ ಮಂಡಿಸಿದೆ.












Click it and Unblock the Notifications