ಸೀಟಿಗೆ ರಕ್ತ ಅಂಟುತ್ತದೆಂದು ಗಾಯಾಳುಗಳನ್ನು ರಸ್ತೆಯಲ್ಲೇ ಬಿಟ್ಟ ಪೊಲೀಸರು
ಲಖನೌ, ಜನವರಿ 20: ಕಷ್ಟದಲ್ಲಿದ್ದವರಿಗೆ ಸಹಾಯಮಾಡಿ ಮಾನವೀಯತೆ ಮೆರೆಯಬೇಕಾಗಿದ್ದ ಪೊಲೀಸರೆ ಅಮಾನವೀಯತೆಯ ಪರಾಕಾಷ್ಟತೆಯನ್ನು ತೋರಿಸಿದ್ದಾರೆ. ಪೊಲೀಸರ ಅಮಾನವೀಯ ನಡೆಯಿಂದ ಇಬ್ಬರು ಯುವಕರು ಪ್ರಾಣವನ್ನೇ ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಕಾರಿನ ಸೀಟಿಗೆ ರಕ್ತ ಅಂಟುತ್ತದೆಂದು ಅಪಘಾತದಲ್ಲಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕರನ್ನು ಪೊಲೀಸರು ರಸ್ತೆಯಲ್ಲೇ ಬಿಟ್ಟು ಹೊದ ಘಟನೆ ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರ ಕೃತ್ಯಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ.
ಬೈಕ್ನಲ್ಲಿ ಸಂಚರಿಸುತ್ತಿದ್ದ ಯುವಕರಿಬ್ಬರು ಗುರುವಾರ ರಾತ್ರಿ ಅಪಘಾತಕ್ಕೀಡಾಗಿದ್ದರು. ಸ್ಥಳದಲ್ಲಿದ್ದ ಕೆಲವರು ಸಹಾಯಕ್ಕಾಗಿ ಪೊಲೀಸರನ್ನು ಕೂಗಿ ಕರೆದಿದ್ದಾರೆ. ಆದರೆ, ಕಾರಿಗೆ ರಕ್ತದ ಕಲೆಯಾಗುತ್ತದೆ ಎಂಬ ಕಾರಣಕ್ಕಾಗಿ ಗಾಯಾಳುಗಳನ್ನು ಕಾರಿಗೆ ಹತ್ತಿಸಿಕೊಳ್ಳಲು ಪೊಲೀಸರು ನಿರಾಕರಿಸಿದ್ದಾರೆ.

'ಸರ್, ನಿಮ್ಮ ಕಾರನ್ನು ತೊಳೆಯಬಹುದು. ದಯಮಾಡಿ ಬಾಗಿಲು ತೆಗೆಯಿರಿ' ಎಂದು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಅಂಗಲಾಚಿದ್ದರು. ಇದಕ್ಕೆ ಉತ್ತರಿಸಿದ್ದ ಪೊಲೀಸರು, 'ಕಾರನ್ನು ತೊಳೆಯಲು ಕೊಟ್ಟರೆ ನಾನೆಲ್ಲಿ ಕುಳಿತುಕೊಳ್ಳಲಿ' ಎಂದು ದರ್ಪದ ಉತ್ತರ ನೀಡಿದ್ದಾರೆ. ಈ ಸಂಭಾಷಣೆ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.
ಅಪಘಾತಕ್ಕೊಳಗಾಗಿದ್ದ ಸಂಬಂಧಿಯೊಬ್ಬ 'ಪ್ಲೀಸ್, ಪ್ಲೀಸ್ ಹತ್ತಿಸಿಕೊಳ್ಳಿ, ಕಾಲಿಗೆ ಬೀಳುತ್ತೇನೆ' ಎಂದು ಅಂಗಲಾಚಿದರೂ ಕರಗದ ಆ ಕಲ್ಲು ಹೃದಯಿ ಪೊಲೀಸರು, ಯಾವುದಾದರೂ ಆಟೊ ಮಾಡಿಕೊಂಡು ಹೋಗು ಎಂದು ಹೇಳಿದ್ದಾರೆ.

ಆ ನಂತರ ಸ್ಥಳೀಯರೇ ಆಟೊವೊಂದರಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಅಷ್ಟರಲ್ಲಿ ಇಬ್ಬರೂ ಯುವಕರು ಮೃತಪಟ್ಟಿದ್ದಾರೆ.
ವಿಡಿಯೊ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ನಡುವಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ, ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಪೊಲೀಸ್ ಗೂಂಡಾಗಳು ಹೆಚ್ಚಾಗಿದ್ದಾರೆ ಎಂಬ ಟೀಕೆಗಳು ಎಲ್ಲೆಡೆಯಿಂದ ವ್ಯಕ್ತವಾಗುತ್ತಿವೆ.
ಘಟನೆಯ ವಿಡಿಯೊ ಸದ್ದು ಮಾಡುತ್ತಿದ್ದಂತೆ, ಯುವಕನಿಗೆ ಸಹಾಯ ಮಾಡಲು ನಿರಾಕರಿಸಿದ ಮೂರು ಜನ ಪೊಲೀಸರನ್ನು ಅಮಾನತು ಮಾಡಿ ಉತ್ತರ ಪ್ರದೇಶ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.
ಪೊಲೀಸರ ಅಮಾನವೀಯತೆಯ ವಿಡಿಯೋ












Click it and Unblock the Notifications