ಜಮ್ಮು ಕಾಶ್ಮೀರದಲ್ಲಿ ಸರಣಿ ಬಾಂಬ್ ಸ್ಫೋಟ: ಭಾರತ್ ಜೋಡೋ ಯಾತ್ರೆ ಮಾರ್ಗದಲ್ಲಿ ಬದಲಾವಣೆಯಿಲ್ಲ ಎಂದ ಕಾಂಗ್ರೆಸ್
ಶ್ರೀನಗರ, ಜನವರಿ, 22: ಶುಕ್ರವಾರ ಮತ್ತು ಶನಿವಾರ ತಡರಾತ್ರಿಯಲ್ಲಿ ಜಮ್ಮು ಕಾಶ್ಮಿರದಲ್ಲಿ ಸರಣಿ ಬಾಂಬ್ ಸ್ಫೋಟಗಳು ಸಂಭವಿಸುತ್ತಿವೆ. ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆಯ ಬೆನ್ನಲ್ಲೇ ಈ ಸ್ಫೋಟಗಳು ನಡೆಯುತ್ತಿದ್ದು, ಯಾತ್ರೆಯ ಮೇಲೆ ಪರಿಣಾಮ ಬೀರಲಿದೆ ಎಂದು ಭಾವಿಸಲಾಗಿತ್ತು.
ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿ (ಜೆಕೆಪಿಸಿಸಿ) ವಕ್ತಾರ ರವೀಂದರ್ ಶರ್ಮಾ, ಕಾಂಗ್ರೆಸ್ ಯಾತ್ರೆಯ ಪಯಣದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Bharat Jodo: ಜಮ್ಮುವಿನಲ್ಲಿ ಹೈ ಅಲರ್ಟ್ ನಡುವೆ ಕಾರು ಸ್ಟೋಟದಿಂದ 6 ಮಂದಿ ಗಾಯ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಕಥುವಾ ಜಿಲ್ಲೆಯ ಹೀರಾನಗರ ಮೋರ್ನಿಂದ ಸಾಂಬಾದ ದುಗ್ಗರ್ ಹವೇಲಿಯವರೆಗೆ ಭಾರತ್ ಜೋಡೋ ಯಾತ್ರೆಯನ್ನು ಪುನರಾರಂಭಿಸಿದ್ದಾರೆ.
"ಇಲ್ಲಿಯವರೆಗೆ, ಭಾರತ್ ಜೋಡೋ ಯಾತ್ರೆಯ ಪ್ರವಾಸದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ಯಾತ್ರೆಯು ವೇಳಾಪಟ್ಟಿಯ ಪ್ರಕಾರ ಮುಂದುವರಿಯುತ್ತಿದೆ. ಹಾಗೇಯೇ ಮುಂದೆಯೂ ಮುಂದುವರೆಯಲಿದೆ. ಜಮ್ಮು ನಗರದಲ್ಲಿ ನಡೆದ ಅವಳಿ ಸ್ಫೋಟಗಳ ಕಾರಣ ಖಂಡಿತವಾಗಿಯೂ ನಮಗೆಲ್ಲರಿಗೂ ತೀವ್ರ ಕಳವಳಕ್ಕೆ ನೂಕಿದೆ. ಇದು ಭಾರೀ ಭದ್ರತೆ ನೀಡಿದ್ದೇವೆ ಎಂಬ ಸರ್ಕಾರದ ಹೇಳಿಕೆಗಳ ಪೊಳ್ಳನ್ನು ಎತ್ತಿ ತೋರಿಸುತ್ತಿದೆ" ಎಂದು ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿ (ಜೆಕೆಪಿಸಿಸಿ) ವಕ್ತಾರ ರವೀಂದರ್ ಶರ್ಮಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಮತ್ತು ಶನಿವಾರದ ಮಧ್ಯರಾತ್ರಿ ಜಮ್ಮುವಿನ ಬಜಾಲ್ಟಾದಲ್ಲಿ ಡಂಪರ್ನ ಯೂರಿಯಾ ಟ್ಯಾಂಕ್ ಸ್ಫೋಟಗೊಂಡು ಪೊಲೀಸ್ ಪೇದೆಯೊಬ್ಬರು ಗಾಯಗೊಂಡಿದ್ದಾರೆ. ಜಮ್ಮುವಿನಲ್ಲಿ ಮಧ್ಯರಾತ್ರಿಯೂ ಸ್ಫೋಟ ಸಂಭವಿಸಿದ್ದು, ಇದು ಒಂದು ದಿನದಲ್ಲಿ ನಡೆದ ಮೂರನೇ ಸ್ಫೋಟವಾಗಿದೆ. ಸಿದ್ರಾದ ಬಜಲ್ತಾ ಮೋರ್ನಲ್ಲಿಯೂ ಸ್ಫೋಟ ಸಂಭವಿಸಿದೆ. ಈ ಮೂರು ಸ್ಫೋಟಗಳಲ್ಲಿ ಒಬ್ಬ ಪೊಲೀಸ್ ಸೇರಿದಂತೆ ಒಟ್ಟು ಹತ್ತು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದ್ದು, ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರು ನಡೆಸಿದ ತನಿಖೆಯಲ್ಲಿ ಯೂರಿಯಾ ಟ್ಯಾಂಕ್ ಸ್ಫೋಟ ಅಪಘಾತವಲ್ಲ ಎಂದು ಕಂಡುಬಂದಿದ್ದು, ಸ್ಫೋಟಕ ಕಾಯ್ದೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ನಗ್ರೋಟಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಇನ್ನು, ಭಾನುವಾರ ಮಧ್ಯಾಹ್ನ ಜಮ್ಮು ಕಾಶ್ಮೀರದ ಎಐಸಿಸಿ ಉಸ್ತುವಾರಿ ರಜನಿ ಪಾಟೀಲ್ ಮತ್ತು ಜೆಕೆಪಿಸಿಸಿ ಅಧ್ಯಕ್ಷ ವಿಕಾರ್ ರಸೂಲ್ ವಾನಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರಾಹುಲ್ ಗಾಂಧಿ ಸಾಂಬಾದಲ್ಲಿನ ಚಕ್ ನಾನಕ್ನಲ್ಲಿ ರಾತ್ರಿ ವಾಸ್ತವ್ಯ ಹೂಡಲಿದ್ದು, ಜನವರಿ 23 ರಂದು ಸಾಂಬಾದ ವಿಜಯಪುರದಿಂದ ಜಮ್ಮು ನಗರದ ಸತ್ವಾರಿ ಚೌಕ್ಗೆ ತಮ್ಮ ಪ್ರಯಾಣವನ್ನು ಪುನರಾರಂಭಿಸಲಿದ್ದಾರೆ. ಅಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.