ಜಯಾ ಅನಾರೋಗ್ಯ: ವಾಹಿನಿಗಳ ವಿರುದ್ದ ದೇವೇಗೌಡ ಕಿಡಿ
ತ್ವರಿತವಾಗಿ ಸುದ್ದಿ ಪ್ರಕಟಿಸುವ ಮತ್ತು ಟಿಆರ್ಪಿ ಹಿಂದೆ ಬಿದ್ದಿರುವ ವಾಹಿನಿಗಳು ತಮ್ಮ ಜವಾಬ್ದಾರಿಯನ್ನು ಮರೆತಿವೆ, ಜೆಡಿಎಸ್ ವರಿಷ್ಠ ದೇವೇಗೌಡ ಬೇಸರ.
ನವದೆಹಲಿ, ಡಿ 5: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅನಾರೋಗ್ಯದ ಬಗ್ಗೆ ಸುಳ್ಳು ಸುದ್ದಿ ಪ್ರಕಟಿಸಿದ ವಾಹಿನಿಗಳ ವಿರುದ್ದ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಕಿಡಿಕಾರಿದ್ದಾರೆ.
ನವದೆಹಲಿಯಲ್ಲಿ ಸೋಮವಾರ (ಡಿ 5) ಮಾತನಾಡುತ್ತಿದ್ದ ದೇವೇಗೌಡ, ತ್ವರಿತವಾಗಿ ಸುದ್ದಿ ಪ್ರಕಟಿಸುವ ಮತ್ತು ಟಿಆರ್ಪಿ ಹಿಂದೆ ಬಿದ್ದಿರುವ ವಾಹಿನಿಗಳು ತಮ್ಮ ಜವಾಬ್ದಾರಿಯನ್ನು ಮರೆತಿವೆ. (ಜಯಾ ಟಿವಿಯಿಂದಲೇ ಮೊದಲಿಗೆ ಗಾಳಿ ಸುದ್ದಿ ಹಬ್ಬಿದ್ದು)
ಅಪೋಲೋ ಆಸ್ಪತ್ರೆ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಜಯಾಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದರೂ, ಜಯಾ ನಿಧನಹೊಂದಿದ್ದಾರೆಂದು ಕೆಲವು ತಮಿಳು ವಾಹಿನಿಗಳು ಪ್ರಸಾರ ಮಾಡಿವೆ ಎಂದು ಗೌಡ್ರು ಬೇಸರ ವ್ಯಕ್ತ ಪಡಿಸಿದ್ದಾರೆ.

ಸಮಾಜಕ್ಕೆ ವಸ್ತುನಿಷ್ಠ ವರದಿ ನೀಡುವುದು ವಾಹಿನಿಗಳ ಕರ್ತವ್ಯ, ಆದರೆ ಇಂದು ವಾಹಿನಿಗಳು ತಮ್ಮ ಜವಾಬ್ದಾರಿಯನ್ನು ಮರೆತಿವೆ. ಜಯಾ ಶೀಘ್ರ ಗುಣಮುಖವಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆಂದು ದೇವೇಗೌಡ ಹೇಳಿದ್ದಾರೆ.
ಜಯಲಲಿತಾ ನಿಧನರಾದ ಸುದ್ದಿ ಜಯಾ ಟಿವಿಯ ಅಧೀನದ ಜಯಾ ಪ್ಲಸ್ ವಾಹಿನಿಯಿಂದ ಸೋಮವಾರ ಸಂಜೆ ಪ್ರಸಾರವಾಗಿ ಭಾರಿ ಗೊಂದಲಕ್ಕೆ ಕಾರಣವಾಯಿತು. ಇದಾದ ನಂತರ ತಮಿಳಿನ ತಂತಿ ವಾಹಿನಿ ಕೂಡಾ ಜಯಾ ವಿಧಿವಶರಾಗಿದ್ದಾರೆಂದು ಪ್ರಸಾರ ಮಾಡಿತ್ತು.
ವರದಿಯ ಸತ್ಯಾಸತ್ಯತೆಯ ಬಗ್ಗೆ ಪರೀಕ್ಷಿಸದೆ ಎಐಡಿಎಂಕೆ ಕಚೇರಿಯಲ್ಲಿ ಪಕ್ಷದ ಧ್ವಜವನ್ನು ಅರ್ಧಕ್ಕೆ ಇಳಿಸಿ ಗೌರವ ಸಂತಾಪ ಸೂಚಿಸಲಾಗಿತ್ತು. ಇದಾದ ನಂತರ ಅಪೋಲೋ ಆಸ್ಪತ್ರೆ ತನ್ನ ಪತ್ರಿಕಾ ಪ್ರಕಟಣೆ ನೀಡಿದ ನಂತರವಷ್ಟೇ ಈ ಸುದ್ದಿಗೆ ಬ್ರೇಕ್ ಬಿದ್ದಿದ್ದು.












Click it and Unblock the Notifications