ಅಮಾಯಕರನ್ನು ಬಲಿತೆಗೆದುಕೊಂಡವರನ್ನು ಅಮರನಾಥನೇ ಶಿಕ್ಷಿಸಲಿ...
ಶ್ರೀನಗರ(ಜಮ್ಮು-ಕಾಶ್ಮೀರ), ಜುಲೈ 11: ಅಮರನಾಥದಲ್ಲಿರುವ ಹಿಮಲಿಂಗವನ್ನು ನೋಡಬೇಕು ಅನ್ನೋದು ಹಲವರಿಗೆ ಜೀವಮಾನದ ಕನಸು. ದುಡಿದದ್ದನ್ನೆಲ್ಲ ಕೂಡಿಟ್ಟುಕೊಂಡು, ಅಮರನಾಥನನ್ನು ಕಣ್ತುಂಬಿಸಿಕೊಳ್ಳಲು ಹೊರಡುವ ಭಕ್ತರಿಗೆ ಆ ಮಹಾಮಹಿಮನ ದರ್ಶನ ಸಿಕ್ಕರೆ ಸಾಕು, ಬದುಕು ಸಾರ್ಥಕ ಎಂಬ ಭಾವ ಹುಟ್ಟಿಕೊಳ್ಳುತ್ತದೆ.
ಆ ಮೈ ಕೊರೆವ ಚಳಿ, ಆಗಾಗ ಬೀಳುವ ಮಳೆ, ಕಲ್ಲುಮಣ್ಣಿನ ಹಾದಿ, ಎತ್ತರೆತ್ತರದ ಪರ್ವತಗಳು ಈ ಎಲ್ಲದಕ್ಕಿಂತ ಭಯಾನಕವಾದುದು ಭಯೋತ್ಪಾದಕರ ಕರಿನೆರಳು. ಈ ಎಲ್ಲ ಸಂಕಷ್ಟಗಳನ್ನೂ, ಅಡೆತಡೆಗಳನ್ನು ಮೀರಿಯೂ ಅದೇನೋ ಸೆಳೆತ ಅಮರನಾಥವೆಂದರೆ.
ಜಮ್ಮು ಕಾಶ್ಮೀರದ ಶ್ರೀನಗರದಿಂದ 141 ಕಿ.ಮೀ. ದೂರದಲ್ಲಿರುವ, ಸಮುದ್ರ ಮಟ್ಟದಿಂದ 3888 ಮೀ. ಎತ್ತರದಲ್ಲಿರುವ, ಸುಮಾರು 5000 ವರ್ಷಗಳ ಇತಿಹಾಸವಿರುವ ಅಮರನಾಥ ಗುಹೆ ಎಂದರೆ ಹಲವರಿಗೆ ಅದೇನೋ ಬಣ್ಣನೆಗೆ ಸಿಗದ ಆಕರ್ಷಣೆ.
ಆದರೆ ಆ ಕೈಲಾಸನಾಥನನ್ನು ನೋಡಿ, ಕಣ್ತುಂಬಿಸಿಕೊಳ್ಳುವ ಮೊದಲೇ 'ರಕ್ತಪಿಪಾಸು'ಗಳ ದಾಹಕ್ಕೆ ಅಮಾನವೀಯವಾಗಿ ಹತರಾಗಬೇಕಾದ ದುರ್ದೈವ ಹಲವರ ಹಣೆಯಲ್ಲಿ ಬರೆದಿತ್ತು. ಆ ಹಿಮಲಿಂಗಕ್ಕೆ ಕೈಮುಗಿದು ಜೀವನ ಸಾರ್ಥಕಗೊಳಿಸಿಕೊಳ್ಳುವ ಜೀವಮಾನದ ಆಸೆ ಭಯೋತ್ಪಾದಕರ ಬಂದೂಕಿನ ಅಟ್ಟಹಾಸದೆದುರು ಕಮರಿಹೋಗಿತ್ತು!
ಹೌದು, ಜುಲೈ 10 ರಂದು ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬಟೆಂಗೊ ಎಂಬಲ್ಲಿ ನಡೆದ ಉಗ್ರರ ದಾಳಿಯಲ್ಲಿ 7 ಜನ ಅಮರನಾಥ ಯಾತ್ರಿಗಳು ಅಸುನೀಗಿದ್ದು, ಭಕ್ತರ ಸಾವಿಗೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ತನ್ನ ದರ್ಶನಕ್ಕೆಂದು ಬರುತ್ತಿದ್ದ ಭಕ್ತರು ಈ ಪರಿ ಹಿಂಸೆಗೆ ಸಿಕ್ಕಿ ನಲುಗಿಹೋಗಿದ್ದು, ಸ್ವತಃ ಅಮರನಾಥನಿಗೂ ಕಣ್ಣೀರು ತರಿಸಿರಲಿಕ್ಕೆ ಸಾಕು!
ಗುಜರಾತ್ ಮೂಲದ ಭಕ್ತರಿದ್ದ ಬಸ್ಸಿನ ಹಿಂದೆ ಬೆಂಗಾವಲಾಗಿದ್ದ ಪೊಲೀಸರನ್ನು ಗುರಿಯಾಗಿಸಿಕೊಂಡು ನಡೆದ ಗುಂಡಿನ ದಾಳಿಯಲ್ಲಿ. ಮಧ್ಯೆ ಸಿಲುಕಿಕೊಂಡ ಬಸ್ಸಿನಲ್ಲಿದ್ದ ಅಮರನಾಥ ಯಾತ್ರಿಗಳು ಬಲಿಯಾಗಿದ್ದಾರೆ. ಸಂಭ್ರಮ ಮತ್ತು ಸಾರ್ಥಕತೆಯನ್ನೇ ತುಂಬಿಕೊಂಡಿದ್ದ ಅಮರನಾಥ ಯಾತ್ರೆಗೆ ಇದೀಗ ಸೂತಕದ ಬಿಗಿಮೌನ ಆವರಿಸಿದೆ.

ಅಮರನಾಥದ ತುಂಬ ಮೌನದ್ದೇ ಮಾತು!
ನಿನ್ನೆ ನಡೆದ ಭಯೋತ್ಪಾದಕ ದಾಳಿಯಿಂದಾಗಿ ಅಮರನಾಥದ ತುಂಬ ಮೌನವೇ ಮಾತನಾಡುತ್ತಿದೆ! ಭಯದ ನಡುವಲ್ಲೂ ಅಮರನಾಥನ ಆಶೀರ್ವಾದ ಪಡೆವ ಇಂಗಿತ ಮಾತ್ರ ತಗ್ಗಿಲ್ಲ. ನಿನ್ನೆ ಭಯೋತ್ಪಾದಕ ದಾಳಿಯಿಂದ ಗಾಯಗೊಂಡವರ ಚಿಕಿತ್ಸೆ ಕ್ಯಾಂಪ್ ಗಳಲ್ಲಿ ನಡೆಯುತ್ತಿದೆ.

ಸಾವು-ಬದುಕಿನ ನಡುವೆ ಹೋರಾಟ
ಉಗ್ರರ ಗುಂದಿನ ದಾಳಿಯಿಂದ ಹಲವರಿಗೆ ಗಾಯವಾಗಿದ್ದು, ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ದಾಳಿಯಲ್ಲಿ ಗಾಯಗೊಂಡ ಮಹಿಳೆಯೊಬ್ಬರು ಚಿಕಿತ್ಸೆಯ ಸಮಯದಲ್ಲಿ ಸಹಿಸಲಾರದ ನೋವನ್ನು ಮುಳಭಾವದಲ್ಲಿ ವ್ಯಕ್ತಪಡಿಸಿದ್ದು ಹೀಗೆ.

ಬಿಗಿಬಂದೋಬಸ್ತ್
ಘಟನೆ ನಡೆಯುತ್ತಿದ್ದಂತೆಯೇ ಕಟ್ಟೆಚ್ಚರಗೊಂಡ ಭದ್ರತಾ ಪಡೆಯ ಸಿಬ್ಬಂದಿಗಳು ಭಯೋತ್ಪಾದಕರ ದಮನಕ್ಕೆ ಮತ್ತು ಭಕ್ತರ ಸುರಕ್ಷತೆಗೆ ಕಂಕಣಬದ್ದರಾದರು. ಈ ಸಂದರ್ಭದಲ್ಲಿ ಭದ್ರತಾ ಪಡೆಯ ಸಿಬ್ಬಂದಿಯೊಬ್ಬರು ಕಂಡುಬಂದಿದ್ದು ಹೀಗೆ.

ಕಲ್ಲು ಮಣ್ಣಿನ ಹಾದಿಯಲ್ಲಿ
ಅಮರನಾಥಕ್ಕೆ ಪ್ರತಿವರ್ಷ ಭೇಟಿ ನೀಡುವ ಲಕ್ಷಾಂತರ ಭಕ್ತರು ಕಲ್ಲು ಮಣ್ಣಿನ ಹಾದಿಯಲ್ಲೇ ನಡೆಯುತ್ತಾರೆ. ದೇವರ ದರ್ಶನ ಪಡೆವ ಉತ್ಕಟ ಬಯಕೆ ಎದುರು ಉಳಿದೆಲ್ಲ ಅಡೆತಡೆಗಳೂ ಗೌಣವಾಗುತ್ತವೆ.

ಅಮರನಾಥನೇ ಶಿಕ್ಷಿಸಲಿ
ಅಮಾಯಕ ಭಕ್ತರ ಮೇಲೆ ದಾಳಿ ನಡೆಸಿದ ಭಯೋತ್ಪಾದಕರನ್ನು ಅಮರನಾಥನೇ ಶಿಕ್ಷಿಸಲಿ ಎಂಬ ಮಾತು ದೇಶದೆಲ್ಲೆಡೆಯಿಂದ ಕೇಳಿಬರುತ್ತಿದೆ. ಎಷ್ಟೇ ಭದ್ರತೆ ಒದಗಿಸಿದರೂ ನಡೆದ ಈ ಭಯೋತ್ಪಾದಕ ದಾಳಿ ಭಾರತ ಸರ್ಕಾರಕ್ಕೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ.












Click it and Unblock the Notifications