ಮತ್ತೆ ಹೊಸ ವೇಷದಲ್ಲಿ ಎಲ್ಲರನ್ನು ಸೆಳೆದ ಸಂಸದ ನರಮಳ್ಳಿ ಶಿವಪ್ರಸಾದ್
ನವದೆಹಲಿ, ಡಿಸೆಂಬರ್ 18 : ಟಿಡಿಪಿ ಸಂಸದ ನರಮಳ್ಳಿ ಶಿವಪ್ರಸಾದ್ ಅವರು ಮತ್ತೊಮ್ಮೆ ಮಾಧ್ಯಮಗಳ ಗಮನ ಸೆಳೆದಿದ್ದಾರೆ. ಜಾನಪದ ಹಾಡುಗಾರನ ರೀತಿ ವೇಷ ತೊಟ್ಟು ಅವರು ಸಂಸತ್ಗೆ ಆಗಮಿಸಿದ್ದರು.
ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ತೆಲಗು ದೇಶಂ ಪಕ್ಷದ ಸಂಸದ ನರಮಳ್ಳಿ ಶಿವಪ್ರಸಾದ್ ಒತ್ತಾಯಿಸುತ್ತಿದ್ದಾರೆ. ಸಂಸತ್ ಕಲಾಪ ನಡೆಯುವಾಗ ವಿಚಿತ್ರವಾಗಿ ಅವರು ವೇಷ ತೊಟ್ಟು ಆಗಮಿಸುತ್ತಾರೆ. ಎಲ್ಲರ ಗಮನ ಸೆಳೆಯುತ್ತಾರೆ.
ಮಂಗಳವಾರ ಸಂಸತ್ ಭವನದ ಗಾಂಧಿ ಪ್ರತಿಮೆ ಮುಂದೆ ಟಿಡಿಪಿ ಸಂಸದರು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ನರಮಳ್ಳಿ ಶಿವಪ್ರಸಾದ್ ಜಾನಪದ ಹಾಡುಗಾರನಂತೆ ವೇಷತೊಟ್ಟು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಮೂಲತಃ ಸಿನಿಮಾ ನಟರಾಗಿದ್ದ ನರಮಳ್ಳಿ ಶಿವಪ್ರಸಾದ್ ಹಲವು ಬಾರಿ ವಿವಿಧ ವೇಷ ತೊಟ್ಟು ಸಂಸತ್ಗೆ ಬಂದು ಎಲ್ಲರ ಗಮನ ಸೆಳೆದಿದ್ದಾರೆ. ನಾರದಮುನಿ, ಮ್ಯಾಜಿಕ್ ಮಾಡುವ ವ್ಯಕ್ತಿ, ಸಾಯಿಬಾಬಾ, ರೈತ, ಹಿಟ್ಲರ್ನಂತೆ ಅವರು ವೇಷ ಧರಿಸಿ ಸಂಸತ್ಗೆ ಬಂದಿದ್ದರು.

ಚಿತ್ತೂರು ಕ್ಷೇತ್ರದ ಸಂಸದ
ನರಮಳ್ಳಿ ಶಿವಪ್ರಸಾದ್ ಅವರು ಟಿಡಿಪಿ ಪಕ್ಷದಿಂದ ಚಿತ್ತೂರು ಕ್ಷೇತ್ರದಿಂದ ಸಂಸತ್ಗೆ ಆಯ್ಕೆಯಾಗಿದ್ದಾರೆ. ವೃತ್ತಿಯಿಂದ ವೈದ್ಯರಾಗಿರುವ ಇವರು, ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. 1999ರಲ್ಲಿ ಶಾಸಕರಾಗಿ ಆಯ್ಕೆಯಾದರು. ಚಂದ್ರಬಾಬು ನಾಯ್ಡು ಅವರ ಸಂಪುಟದಲ್ಲಿ ಸಚಿವರಾಗಿದ್ದರು.

ವಿಶೇಷ ಸ್ಥಾನಮಾನಕ್ಕೆ ಒತ್ತಾಯ
ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂಬುದು ನರಮಳ್ಳಿ ಶಿವಪ್ರಸಾದ್ ಬೇಡಿಕೆ. 2018ರ ಆಗಸ್ಟ್ನಲ್ಲಿ ಮುಂಗಾರು ಅಧಿವೇಶನ ನಡೆಯುವಾಗ ಸರ್ವಾಧಿಕಾರಿ ಅಡಾಫ್ ಹಿಟ್ಲರ್ನಂತೆ ವೇಷ ಧರಿಸಿ ಬಂದು ಎಲ್ಲರ ಗಮನ ಸೆಳೆದಿದ್ದರು.

ಸಾಯಿಬಾಬಾ ವೇಷ
ನರಮಳ್ಳಿ ಶಿವಪ್ರಸಾದ್ ಅವರು ಒಮ್ಮೆ ಸಾಯಿಬಾಬಾ ವೇಷ ತೊಟ್ಟು ಸಂಸತ್ಗೆ ಬಂದಿದ್ದರು. ಮಾಧ್ಯಮಗಳು ಎದುರಾದಾಗ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆಯನ್ನು ಅವರು ಮುಂದಿಡುತ್ತಾರೆ. ಆದರೆ, ಕೇಂದ್ರ ಸರ್ಕಾರ ಇನ್ನೂ ಸ್ಥಾನಮಾನ ಕೊಟ್ಟಿಲ್ಲ.

ಕರುಣಾನಿಧಿ ವೇಷ
ನರಮಳ್ಳಿ ಶಿವಪ್ರಸಾದ್ ಡಿಸೆಂಬರ್ 14ರಂದು ಸಂಸತ್ಗೆ ಡಿಎಂಕೆ ನಾಯಕ, ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಎಂ.ಕರುಣಾನಿಧಿ ಅವರಂತೆ ವೇಷ ತೊಟ್ಟು ಬಂದು ಸಂಸತ್ನ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದ್ದರು.

ಅಂಬೇಡ್ಕರ್ ರೀತಿ ವೇಷ
2016ರ ಮೇ ತಿಂಗಳಿನಲ್ಲಿ ಮುಂಗಾರು ಅಧಿವೇಶನ ನಡೆದಾಗ ನರಮಳ್ಳಿ ಶಿವಪ್ರಸಾದ್ ಅವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ರೀತಿ ವೇಷ ತೊಟ್ಟು ಸಂಸತ್ಗೆ ಆಗಮಿಸಿದ್ದರು.












Click it and Unblock the Notifications