ಕಾರ್ಖಾನೆ ಮುಚ್ಚಲು ಆಗ್ರಹಿಸಿ ಪ್ರತಿಭಟನೆ: ತೂತುಕುಡಿ ಉದ್ವಿಗ್ನ, 8 ಸಾವು
ತೂತುಕುಡಿ, ಮೇ 22: ವೇದಾಂತ ಕಂಪೆನಿಗೆ ಸೇರಿದ ಸ್ಟೆರ್ಲೈಟ್ ಕಾಪರ್ ಫ್ಯಾಕ್ಟರಿಗೆ ಬೀಗ ಜಡಿಯುವಂತೆ ಆಗ್ರಹಿಸಿ ತಮಿಳುನಾಡಿನ ತೂತುಕುಡಿಯಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಂಡಿದೆ.
ಪ್ರತಿಭಟನಾಕಾರರನ್ನು ಚೆದುರಿಸಲು ಪೊಲೀಸರು ಹಾರಿಸಿದ ಗುಂಡಿಗೆ ಎಂಟು ಮಂದಿ ಬಲಿಯಾಗಿದ್ದಾರೆ.
ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪ್ರತಿಭಟನೆಯ ಕಾವು ಭುಗಿಲೇಳುತ್ತಿದ್ದು, ಉದ್ವಿಗ್ನದ ವಾತಾವರಣ ನಿರ್ಮಾಣವಾಗಿದೆ. ತಮಿಳುನಾಡಿನ ಕರಾವಳಿ ತೀರದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯಿದೆ.
ಸಾವಿರಾರು ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ್ದು, ಈ ವೇಳೆ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಗೋಲಿಬಾರ್ ನಡೆಸಿದರು. ಪೊಲೀಸರ ಗುಂಡಿಗೆ ಇದುವರೆಗೆ ಎಂಟು ಮಂದಿ ಸಾವನ್ನಪ್ಪಿದ್ದಾರೆ.

ಏನಿದು ಸ್ಟೆರ್ಲೈಟ್ ಕಾಪರ್ ಫ್ಯಾಕ್ಟರಿ?
ವೇದಾಂತ ಸಂಸ್ಥೆಯ ಸ್ಟೆರ್ಲೈಟ್ ಕಾಪರ್ ಕಾರ್ಖಾನೆಯು ಲೋಹ ಉತ್ಪಾದನೆ ಮತ್ತು ಗಣಿಗಾರಿಕೆಯನ್ನು ನಡೆಸುತ್ತದೆ. ಈ ಕಂಪೆನಿ ಭಾರತದಲ್ಲಿ ಮೊದಲು ಕಾರ್ಯಾರಂಭ ಮಾಡಿದ್ದು ತಮಿಳುನಾಡಿನ ಕರಾವಳಿ ತೀರದ ತೂತುಕುಡಿಯಲ್ಲಿ. 1996ರಲ್ಲಿ ಇಲ್ಲಿ ಕಂಪೆನಿ ಆರಂಭಗೊಂಡಿತು.
ತಾಮ್ರದ ಗಣಿಗಾರಿಕೆ, ಅದರ ಉತ್ಪನ್ನಗಳನ್ನು ತಯಾರಿಸುವ ಘಟಕಗಳನ್ನು ಅದು ಸ್ಥಾಪನೆ ಮಾಡಿದೆ. ಜತೆಗೆ ಬಾಕ್ಸೈಟ್, ಜಿಂಕ್ ಅದಿರುಗಳ ಗಣಿಗಾರಿಕೆ ಹಾಗೂ ಅಲ್ಯುಮಿನಿಯಂ ಉತ್ಪನ್ನಗಳ ತಯಾರಿಕೆಯನ್ನು ಕೂಡ ಇಲ್ಲಿ ಮಾಡಲಾಗುತ್ತಿದೆ. ವರ್ಷಕ್ಕೆ ನಾಲ್ಕು ಲಕ್ಷ ಟನ್ ತಾಮ್ರವನ್ನು ಇಲ್ಲಿ ತಯಾರಿಸಲಾಗುತ್ತದೆ.

ವಿವಾದದ ಕೇಂದ್ರಬಿಂದು
ತೂತುಕುಡಿಯಲ್ಲಿ ತಾಮ್ರವನ್ನು ಕರಗಿಸುವ ಕಾರ್ಖಾನೆಯಿದ್ದು, ಅದರಿಂದ ವಾತಾವರಣ ತೀವ್ರ ಕಲುಷಿತವಾಗುತ್ತಿದೆ ಎಂಬ ಆರೋಪ ಅದು ಆರಂಭವಾದಾಗಿನಿಂದಲೂ ಕೇಳಿಬಂದಿತ್ತು. ಕಾರ್ಖಾನೆ ಆರಂಭಕ್ಕೂ ಮುನ್ನವೇ ಸ್ಥಳೀಯ ಪರಿಸರವಾದಿಗಳು ಅದರ ವಿರುದ್ಧ ಧ್ವನಿ ಎತ್ತಿದ್ದರು.
ತಾಮ್ರ ಕರಗಿಸುವಿಕೆಯಿಂದ ವಿಷಕಾರಿ ಅಂಶ ಗಾಳಿಗೆ ಸೇರ್ಪಡೆಯಾಗುತ್ತಿದ್ದು, ಅದು ಆರೋಗ್ಯದ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಕ್ಯಾನ್ಸರ್ನಂತಹ ಮಾರಣಾಂತಿಕ ರೋಗಕ್ಕೆ ಎಡೆಮಾಡಿಕೊಡುತ್ತಿದೆ. ಅಲ್ಲದೆ, ಪರಿಸರಕ್ಕೆ ಸಂಬಂಧಿಸಿದ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

ಪುರಾವೆ ಇದ್ದರೂ ಸೋಲು
ಸ್ಟೆರ್ಲೈಟ್ ಕಾಪರ್ ಕಾರ್ಖಾನೆಯಿಂದಾಗಿ ಅಂತರ್ಜಲ ಕಲುಷಿತವಾಗುತ್ತಿದೆ. ಅಲ್ಲದೆ, ಗಾಳಿ ಮತ್ತು ಮಣ್ಣು ಸಹ ವಿಷಕಾರಿಯಾಗುತ್ತಿದೆ ಎಂಬುದಕ್ಕೆ ಪುರಾವೆಗಳನ್ನು 1998ರಲ್ಲಿಯೇ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ಎನ್ಇಇಆರ್ಐ) ಪತ್ತೆಹಚ್ಚಿತ್ತು. ಕಾರ್ಖಾನೆಯು ನಿಯಮಾವಳಿಗಳನ್ನು ಉಲ್ಲಂಘಿಸಿ ಕಾರ್ಯ ನಿರ್ವಹಿಸುತ್ತಿದೆ ಎಂದೂ ಅದು ತಿಳಿಸಿತ್ತು.
2010ರಲ್ಲಿ ಮದ್ರಾಸ್ ಹೈಕೋರ್ಟ್, ಈ ಘಟಕವನ್ನು ಮುಚ್ಚುವಂತೆ ಆದೇಶ ನೀಡಿತ್ತು. ಆದರೆ, ಈ ಆದೇಶವನ್ನು ರದ್ದು ಮಾಡಿದ್ದ ಸುಪ್ರೀಂಕೋರ್ಟ್ ಕಂಪೆನಿಯು ಪರಿಸರ ನಿಯಮಗಳ ಉಲ್ಲಂಘನೆ ಮಾಡಿದ್ದಕ್ಕೆ 100 ಕೋಟಿ ರೂಪಾಯಿ ದಂಡ ವಿಧಿಸಿತ್ತು. ಹೀಗಾಗಿ ಘಟಕ ಮತ್ತೆ ಕಾರ್ಯಾರಂಭ ಮಾಡಿತ್ತು. ಕಾರ್ಖಾನೆಯು ದೇಶದ ತಾಮ್ರದ ಉತ್ಪಾದನೆಯಲ್ಲಿ ಅತಿ ದೊಡ್ಡ ಪಾತ್ರ ವಹಿಸಿದೆ. 1300ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿದೆ ಎಂದು ಕಾರ್ಖಾನೆಯನ್ನು ಮುಚ್ಚುವಂತೆ ಆದೇಶ ನೀಡಲು ನಿರಾಕರಿಸಿತ್ತು.
1999ರಲ್ಲಿ ಎನ್ಇಇಆರ್ಐ ಮತ್ತೊಂದು ವರದಿ ನೀಡಿತ್ತು. ಕಂಪೆನಿಗೆ ಕ್ಲೀನ್ ಚಿಟ್ ನೀಡಿದ್ದ ವರದಿ, ಕಂಪೆನಿಯು ಪೂರ್ಣ ಪ್ರಮಾಣದ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಬಹುದು ಎಂದು ಹೇಳಿತ್ತು.

ಮುಚ್ಚಲು ಆದೇಶ
ಕಾರ್ಖಾನೆಯಲ್ಲಿ ಉಂಟಾದ ಅನಿಲ ಸೋರಿಕೆಯಿಂದ ಸ್ಥಳೀಯ ಜನರಲ್ಲಿ ಆರೋಗ್ಯದ ಸಮಸ್ಯೆ, ಚರ್ಮದ ಸಮಸ್ಯೆಗಳು ಉಂಟಾಗಿತ್ತು. ಇದರ ಆಧಾರದಲ್ಲಿ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಯು ತೂತುಕುಡಿ ತಾಮ್ರ ಕರಗಿಸುವ ಘಟಕವನ್ನು ಸ್ಥಗಿತಗೊಳಿಸುವಂತೆ 2013ರಲ್ಲಿ ಆದೇಶಿಸಿತ್ತು.
ಆದರೆ, ಆರೋಪವನ್ನು ನಿರಾಕರಿಸಿದ್ದ ಕಂಪೆನಿ, ಕಾರ್ಯಾಚರಣೆಯನ್ನು ಮುಂದುವರಿಸಿತ್ತು. ಅಲ್ಲದೆ ಘಟಕವನ್ನು ವಿಸ್ತರಣೆ ಮಾಡಲು ಮುಂದಾಗಿತ್ತು. ತಾನು ಯಾವುದೇ ನಿಯಮಗಳನ್ನು ಉಲ್ಲಂಘನೆ ಮಾಡಿಲ್ಲ. ಘಟಕದ ವಿಸ್ತರಣೆಗೆ ಅಗತ್ಯ ಎಲ್ಲ ಅನುಮೋದನೆಗಳನ್ನು ಪಡೆದುಕೊಳ್ಳಲಾಗಿದೆ ಎಂದು ಹೇಳಿಕೊಂಡಿತ್ತು.
ಜನರ ವಿರೋಧ ಹೆಚ್ಚಾಗಿದ್ದರಿಂದ ಕಂಪೆನಿಯು ನಿರ್ವಹಣಾ ಕಾರ್ಯದ ನಿಮಿತ್ತ ಮಾರ್ಚ್ 29ರಿಂದ 15 ದಿನಗಳ ಕಾಲ ಕಾರ್ಖಾನೆಯನ್ನು ಸ್ಥಗಿತಗೊಳಿಸಿತ್ತು. ಕಂಪೆನಿಯು ತನ್ನ ವಾರ್ಷಿಕ ಉತ್ಪಾದನೆಯನ್ನು ನಾಲ್ಕು ಲಕ್ಷದಿಂದ ಎಂಟು ಲಕ್ಷ ಟನ್ಗೆ ದುಪ್ಪಟ್ಟುಗೊಳಿಸುವ ಉದ್ದೇಶ ಹೊಂದಿದೆ.

ಕಂಗಾಲಾದ ಜನರು ಬೀದಿಗಿಳಿದರು
ಕಾನೂನಾತ್ಮಕ ಹೋರಾಟಗಳನ್ನು ನಡೆಸಿ ಸೋಲು ಅನುಭವಿಸಿದ್ದ ಸ್ಥಳೀಯರು ಪರಿಸರ ಹಾಗೂ ತಮ್ಮ ಆರೋಗ್ಯದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಲೆಕೆಡಿಸಿಕೊಳ್ಳದೆ ಇರುವುದರಿಂದ ಆಕ್ರೋಶಗೊಂಡಿದ್ದರು.
ಕಂಪೆನಿ ಆರಂಭವಾದ ಒಂದು ವರ್ಷದಲ್ಲಿಯೇ ಜನರು ತಲೆನೋವು, ಕೆಮ್ಮು, ಹೊಗೆಯಿಂದ ಉಸಿರಾಟದ ಸಮಸ್ಯೆಗಳಿಗೆ ಒಳಗಾಗತೊಡಗಿದ್ದರು. 1997ರಲ್ಲಿ ಸ್ಟರ್ಲೈಟ್ ಸಮೀಪದ ಒಣಹೂವಿನ ಉತ್ಪಾದನಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು, ಅನಿಲ ಸೋರಿಕೆಯಿಂದ ಕೆಟ್ಟ ಗಾಳಿ ಸೇವಿಸಿ ಅಸ್ವಸ್ಥಗೊಂಡಿದ್ದರು.
ಈ ರೀತಿ ಜನರು ಆರೋಗ್ಯದ ಸಮಸ್ಯೆಗೆ ಒಳಗಾದ ಹಲವಾರು ಘಟನೆಗಳು ವರದಿಯಾದರೂ ಕ್ರಮ ತೆಗೆದುಕೊಂಡಿರಲಿಲ್ಲ. ಇದರಿಂದ ಬೇಸೆತ್ತ ಜನರು ಬೀದಿಗಿಳಿದು ಹೋರಾಟ ನಡೆಸಿದರು. ಸುತ್ತಮುತ್ತಲಿನ ಸುಮಾರು 18 ಗ್ರಾಮಗಳ ಸಾವಿರಾರು ಜನರು ವ್ಯಾಪಕ ಪ್ರತಿಭಟನೆ ನಡೆಸಿದರು. ಈ ಹೋರಾಟ ಆರಂಭವಾಗಿ ಇಂದಿಗೆ (ಮೇ 22) ಸರಿಯಾಗಿ ನೂರು ದಿನ.

ಹೋರಾಟಕ್ಕೆ ಕಮಲ್, ರಜನಿ ಬೆಂಬಲ
ಸ್ಥಳೀಯ ಜನರ ಹೋರಾಟಕ್ಕೆ ವಿವಿಧ ಸಂಘಟನೆಗಳು, ವ್ಯಕ್ತಿಗಳು ಬೆಂಬಲ ವ್ಯಕ್ತಪಡಿಸಿದರು. ನಟರಾದ ಕಮಲ್ ಹಾಸನ್ ಮತ್ತು ರಜನಿಕಾಂತ್ ಕೂಡ ಹೋರಾಟಗಾರರ ಪರ ಧ್ವನಿಗೂಡಿಸಿದ್ದರು.
ಏಪ್ರಿಲ್ 1ರಂದು ತೂತುಕುಡಿ ಜಿಲ್ಲೆಯ ಕುಮಾರರೆಡ್ಡಿಯಪುರಂ ಗ್ರಾಮದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ್ದ ಕಮಲಹಾಸನ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಅಮೆರಿಕದ ದಲ್ಲಾಸ್, ಅಟ್ಲಾಂಟಾ, ನ್ಯೂಯಾರ್ಕ್, ವಾಷಿಂಗ್ಟನ್ ಡಿಸಿ, ಷಿಕಾಗೊ ಮುಂತಾದೆಡೆ ನೆಲೆಸಿರುವ ತಮಿಳರು ಕೂಡ ವಿವಿಧೆಡೆ ಪ್ರತಿಭಟನಾ ಸಮಾವೇಶಗಳನ್ನು ಮಾಡಿ ಜಗತ್ತಿನ ಗಮನ ಸೆಳೆಯಲು ಪ್ರಯತ್ನಿಸಿದ್ದರು.

ಜಿಲ್ಲಾಧಿಕಾರಿ ಕಚೇರಿಗೆ ಬೆಂಕಿ
ತಮ್ಮ ನೋವನ್ನು ಪರಿಹರಿಸದೆ ಇದ್ದರೆ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದರು. ಆದರೆ ಅದಕ್ಕೆ ಸರ್ಕಾರ ಸೊಪ್ಪು ಹಾಕಿರಲಿಲ್ಲ.
ಪ್ರತಿಭಟನೆ 100ನೇ ದಿನಕ್ಕೆ ಕಾಲಿಟ್ಟ ಸಂದರ್ಭದಲ್ಲಿ 18ಕ್ಕೂ ಹೆಚ್ಚು ಹಳ್ಳಿಗಳ ಸಾವಿರಾರು ಜನರು ತೂತುಕುಡಿಯತ್ತ ಪ್ರತಿಭಟನಾ ಮೆರವಣಿಗೆ ನಡೆಸಿದರು. ಅವರನ್ನು ತಡೆಯುವ ಪೊಲೀಸರು ಪ್ರಯತ್ನ ಸಫಲವಾಗಲಿಲ್ಲ. ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಿದ ಪ್ರತಿಭಟನಾಕಾರರು ಕಚೇರಿಯನ್ನು ಧ್ವಂಸಗೊಳಿಸಿದರು.
ಆರಂಭದಲ್ಲಿ ಲಾಠಿ ಚಾರ್ಜ್ ನಡೆಸಿದ ಪೊಲೀಸರು, ಜನರು ಅದಕ್ಕೆ ಬಗ್ಗದೆ ಇದ್ದಾಗ ಗುಂಡು ಹಾರಿಸಿದ್ದಾರೆ. ಇದರಿಂದ ಒಬ್ಬ ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಜನರು ಜಿಲ್ಲಾಧಿಕಾರಿ ಕಚೇರಿಗೆ ಬೆಂಕಿ ಹಚ್ಚಿದ್ದಾರೆ. ಪೊಲೀಸರ ವಾಹನಗಳಿಗೂ ಬೆಂಕಿ ಹಚ್ಚಲಾಗಿದೆ.
ಮತ್ತೊಂದೆಡೆ ಸ್ಟೆರ್ಲೈಟ್ ಕಾಪರ್ ಸ್ಥಾವರದ ಸಿಬ್ಬಂದಿ ವಾಸಿಸುವ ಕ್ವಾರ್ಟ್ರಸ್ಗೆ ದಾಳಿಯಿಟ್ಟ ಪ್ರತಿಭಟನಾಕಾರರು ಆರು ಮಹಡಿಯ ಕಟ್ಟಡಕ್ಕೆ ಬೆಂಕಿ ಹಚ್ಚಿದ್ದಾರೆ. ಅಲ್ಲಿ ಉಂಟಾಗಿರಬಹುದಾದ ಹಾನಿಯ ಬಗ್ಗೆ ತಿಳಿದುಬಂದಿಲ್ಲ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ












Click it and Unblock the Notifications