ಜಲ್ಲಿಕಟ್ಟು ಸುಗ್ರೀವಾಜ್ಞೆಗೆ ತಮಿಳುನಾಡು ರಾಜ್ಯಪಾಲರ ಅಸ್ತು
ಚೆನ್ನೈ, ಜನವರಿ 21: ಜಲ್ಲಿಕಟ್ಟು ಕ್ರೀಡೆಯನ್ನು ಕಾನೂನುಬದ್ಧಗೊಳಿಸಲು ಅನುಕೂಲವಾಗುವಂತೆ ತಮಿಳುನಾಡು ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಗೆ ಆ ರಾಜ್ಯದ ರಾಜ್ಯಪಾಲ ಸಿ. ವಿದ್ಯಾಸಾಗರ ರಾವ್ ಅವರು ಒಪ್ಪಿಗೆ ಕೊಟ್ಟಿದ್ದಾರೆ.
ಜಲ್ಲಿಕಟ್ಟು ಕ್ರೀಡೆಗೆ ಅಡ್ಡಿಯಾಗಿರುವ 1960ರ ಪಶು ಕ್ರೌರ್ಯ ತಡೆ ಕಾಯ್ದೆಗೆ ತಿದ್ದುಪಡಿ ತರುವಂತೆ ಕೋರಿ ತಮಿಳುನಾಡು ಸರ್ಕಾರ ಈ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಿದೆ.
ತಮಿಳುನಾಡು ಸರ್ಕಾರದ ಸುಗ್ರೀವಾಜ್ಞೆಯ ಈ ಕರಡು ಪ್ರತಿಗೆ ಕೇಂದ್ರ ಸರ್ಕಾರವು ಶುಕ್ರವಾರವೇ (ಜನವರಿ 20) ಒಪ್ಪಿಗೆ ಸೂಚಿಸಿತ್ತು. ಇದೀಗ, ರಾಜ್ಯಪಾಲರ ಒಪ್ಪಿಗೆಯೂ ಸಿಕ್ಕಿದ್ದು ಇದೇ ತಿಂಗಳ 23ರಂದು ತಮಿಳುನಾಡು ವಿಧಾನಸಭೆಯಲ್ಲಿ ಮಂಡನೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ಸುಗ್ರೀವಾಜ್ಞೆಗೆ ಒಪ್ಪಿಗೆ ಸಿಕ್ಕ ಹಿನ್ನೆಲೆಯಲ್ಲಿ ಮಧುರೈನ ಅಳಂಗನಲ್ಲೂರಿನಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಗೆ ಜಲ್ಲಿ ಕಟ್ಟು ಕ್ರೀಡೆಯನ್ನು ಅಧಿಕೃತವಾಗಿ ಆಯೋಜಿಸಲಾಗಿದೆ. ಆ ಕಾರ್ಯಕ್ರಮದ ಉದ್ಘಾಟನೆಗೆ ತಮಿಳುನಾಡು ಮುಖ್ಯಮಂತ್ರಿ ಪನೀಲ್ ಸೆಲ್ವಂ ಅವರು ಶನಿವಾರ ರಾತ್ರಿಯೇ ಮಧುರೈಗೆ ತೆರಳಲಿದ್ದಾರೆಂದು ಮೂಲಗಳು ಹೇಳಿವೆ.