Tamil Nadu: ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ವಿರುದ್ಧ ಅವಹೇಳನಕಾರಿ ಪೋಸ್ಟ್- ಬಿಜೆಪಿ ಕಾರ್ಯಕರ್ತೆಯ ಬಂಧನ
ಕೊಯಮತ್ತೂರು, ಜೂನ್ 20: ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಮಾಜಿ ಸಿಎಂ ಎಂ ಕರುಣಾನಿಧಿ ಮತ್ತು ದ್ರಾವಿಡ ಚಳವಳಿಯ ನಾಯಕ ಇವಿ ರಾಮಸಾಮಿ ( ಪೆರಿಯಾರ್ ) ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ಗಳನ್ನು ಹಂಚಿಕೊಂಡ ಆರೋಪದ ಮೇಲೆ ಬಿಜೆಪಿ ಕಾರ್ಯಕರ್ತೆಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಯಮತ್ತೂರು ಸಿಟಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿರುವ ಬಿಜೆಪಿ ಕಾರ್ಯಕರ್ತೆಯೂ ಸಾಮಾಜಿಕ ಮಾಧ್ಯಮದಲ್ಲಿ ಇನ್ಫ್ಲುಯೆನ್ಸರ್ ಆಗಿದ್ದಾರೆ.
ಕೊಯಮತ್ತೂರು ಜಿಲ್ಲೆಯ ಡಿಎಂಕೆ ಐಟಿ ವಿಭಾಗದ ಸಂಯೋಜಕರು ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಉಮಾ ಗಾರ್ಗಿಯನ್ನು ಬಂಧಿಸಲಾಗಿದೆ.

ಆಕೆಯ ಮೇಲೆ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 505 (1)(c) (ಜನಾಂಗೀಯ, ಧಾರ್ಮಿಕ, ಜಾತಿ ಅಥವಾ ಇತರ ಸಮುದಾಯ ಆಧಾರಿತ ದ್ವೇಷವನ್ನು ಉಂಟುಮಾಡುವ ವದಂತಿ ಅಥವಾ ಆತಂಕಕಾರಿ ಸುದ್ದಿಗಳನ್ನು ಒಳಗೊಂಡಿರುವ ಯಾವುದೇ ಹೇಳಿಕೆ ಅಥವಾ ವರದಿಯನ್ನು ತಯಾರಿಸುವುದು, ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತಿರುನಲ್ವೇಲಿ ಜಿಲ್ಲೆಯ ನಂಗುನೇರಿಯಲ್ಲಿ ವಿಶೇಷ ಆರ್ಥಿಕ ವಲಯ (ಎಸ್ಇಝಡ್) ಸ್ಥಾಪಿಸಲು ಮುಖ್ಯಮಂತ್ರಿಯಾಗಿದ್ದಾಗ ಹೈದರಾಬಾದ್ ಮೂಲದ ಕಂಪನಿಯಿಂದ 200 ಕೋಟಿ ರೂಪಾಯಿ 'ಕಮಿಷನ್' ಪಡೆದಿದ್ದಾರೆ ಎಂದು ಮಾಜಿ ಸಿಎಂ ಕರುಣಾನಿಧಿ ವಿರುದ್ಧ ಮಾನಹಾನಿಕರ ಕಾಮೆಂಟ್ಗಳನ್ನು ಉಮಾ ಪೋಸ್ಟ್ ಮಾಡಿದ್ದಾರೆ.

ಕಳೆದ ವಾರ ಬಿಜೆಪಿ ನಾಯಕ ಅರೆಸ್ಟ್
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಆರೋಪದ ಮೇಲೆ ತಮಿಳುನಾಡಿನ ಬಿಜೆಪಿ ಮುಖಂಡರೊಬ್ಬರನ್ನು ಶುಕ್ರವಾರ ಬಂಧಿಸಲಾಗಿತ್ತು. ಮಧುರೈನಲ್ಲಿ ನೈರ್ಮಲ್ಯ ಕಾರ್ಯಕರ್ತೆಯ ಸಾವಿನ ಬಗ್ಗೆ ಆರೋಪಿಸಿ ಟ್ವೀಟ್ ಮಾಡಿದ್ದಕ್ಕಾಗಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್ಜಿ ಸೂರ್ಯ ಅವರನ್ನು ಬಂಧಿಸಲಾಗಿದೆ.
ಆದರೆ, ಸೂರ್ಯ ಅವರ ಆರೋಪವನ್ನು ಜಿಲ್ಲೆಯಲ್ಲಿ ನಡೆಯುತ್ತಿರುವ ಘಟನೆಯನ್ನು ಮಧುರೈ ಜಿಲ್ಲಾ ಪೊಲೀಸರು ಅಲ್ಲಗಳೆದಿದ್ದಾರೆ.

ವಾಕ್ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಪೊಲೀಸರನ್ನು ಬಳಸಿಕೊಳ್ಳುತ್ತಿದೆ ಎಂದು ತಮಿಳುನಾಡು ಬಿಜೆಪಿ ಘಟಕ ಆರೋಪಿಸಿದೆ.
'ತಮಿಳುನಾಡು ರಾಜ್ಯ ಕಾರ್ಯದರ್ಶಿ ಸೂರ್ಯ ಅವರ ಬಂಧನವು ಅತ್ಯಂತ ಖಂಡನೀಯ. ಕಮ್ಯುನಿಸ್ಟರು ಮತ್ತು ಡಿಎಂಕೆಯ ಮಿತ್ರಪಕ್ಷಗಳ ಅಸಹ್ಯ ದ್ವಂದ್ವ ನೀತಿಯನ್ನು ಬಹಿರಂಗಪಡಿಸಿರುವುದು ಅವರ ಏಕೈಕ ತಪ್ಪು' ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಟ್ವಿಟರ್ನಲ್ಲಿ ಹೇಳಿದ್ದಾರೆ.
'ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ರಾಜ್ಯ ಯಂತ್ರವನ್ನು ಬಳಸುವುದು ಮತ್ತು ಸಣ್ಣದೊಂದು ಟೀಕೆಗೆ ತಬ್ಬಿಬ್ಬುಗೊಳಿಸುವುದು ಪ್ರಜಾಸತ್ತಾತ್ಮಕವಾಗಿ ಚುನಾಯಿತ ನಾಯಕನಿಗೆ ತಕ್ಕುದಲ್ಲ' ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications