ಇಂದು ಭಾರತಕ್ಕೆ ಸ್ವಿಸ್ ಅಧ್ಯಕ್ಷೆ; ಕಪ್ಪುಹಣದ ಬಗ್ಗೆ ಅಂತಿಮ ತೀರ್ಮಾನ?
ಸ್ವಿಸ್ ರಾಷ್ಟ್ರಪತಿ ಲುಥರ್ಡ್ ಅವರು ಮೂರು ದಿನಗಳ ಭಾರತ ಭೇಟಿಗಾಗಿ ನವದೆಹಲಿಗೆ ಆಗಮಿಸಿದ್ದಾರೆ. ಈ ಬಾರಿಯ ಭೇಟಿಯ ವೇಳೆ, ಅವರು ಕಪ್ಪು ಹಣದ ಬಗ್ಗೆ ಸಕಾರಾತ್ಮಕ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.
ನವದೆಹಲಿ, ಆಗಸ್ಟ್ 31: ಸ್ವಿಜರ್ಲೆಂಡ್ ನ ಅಧ್ಯಕ್ಷೆ ಡೋರಿಸ್ ಲುಥರ್ಡ್ ಅವರು ಮೂರು ದಿನಗಳ ಭಾರತ ಪ್ರವಾಸಕ್ಕಾಗಿ ಬುಧವಾರ ರಾತ್ರಿ (ಆಗಸ್ಟ್ 30) ನವದೆಹಲಿಗೆ ಆಗಮಿಸಿದ್ದಾರೆ. ಈ ವೇಳೆ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಉಭಯ ದೇಶಗಳ ನಡುವಿನ ಬಾಂಧವ್ಯಗಳ ಕುರಿತಂತೆ ಚರ್ಚಿಸಲಿದ್ದಾರೆ.
ಸ್ವಿಟ್ಜರ್ಲೆಂಡಲ್ಲಿ ನಾ ಕಂಡ ಐನ್ಸ್ಟೀನ್ ಎಂಬ ಕೌತುಕ!
ಇದೇ ವೇಳೆ, ಎರಡೂ ದೇಶಗಳ ನಡುವೆ ಕೆಲವಾರು ಒಡಂಬಡಿಕೆಗಳಿಗೆ ಸಹಿ ಬೀಳುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಎಲ್ಲರ ದೃಷ್ಟಿಕೋನ ಸ್ವಿಸ್ ಬ್ಯಾಂಕ್ ಗಳಲ್ಲಿರುವ ಭಾರತೀಯ ಕಾಳಧನದ ಮೇಲೆ ಬಿದ್ದಿದೆ. ಆ ಹಣ ಭಾರತಕ್ಕೆ ಹರಿದು ಬರುವ ಬಗ್ಗೆ ಎರಡೂ ದೇಶಗಳ ನಡುವೆ ಏನಾದರೂ ಒಪ್ಪಂದ ಏರ್ಪಡಲಿದೆಯೇ ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ.
ಏತನ್ಮಧ್ಯೆ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನೂ ಸ್ವಿಸ್ ಅಧ್ಯಕ್ಷರು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಈ ಭೇಟಿಯಲ್ಲಿಯೇ ಅನೇಕ ವಿಚಾರಗಳು ವಿನಿಮಯವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಇದರ ಜತೆಗೆ, ಪರಮಾಣು ಶಸ್ತ್ರಾಸ್ತ್ರ ದೇಶಗಳ ಒಕ್ಕೂಟದಲ್ಲಿ ಭಾರತವು ಸದಸ್ಯತ್ವ ಪಡೆಯಲು ಕೆಲ ವರ್ಷಗಳಿಂದ ಪ್ರಯತ್ನಿಸುತ್ತಿದ್ದು ಈವರೆಗೆ ಅದು ಸಾಧ್ಯವಾಗಿಲ್ಲ. ಇದೀಗ, ಆ ಒಕ್ಕೂಟದ ಅಧ್ಯಕ್ಷರೂ ಆಗಿರುವ ಲುಥರ್ಡ್ ಅವರ ಈ ಬಾರಿಯ ಭಾರತ ಭೇಟಿ, ಆ ನಿಟ್ಟಿನಲ್ಲಿ ಭಾರತಕ್ಕೆ ರಹದಾರಿಯನ್ನು ಕಲ್ಪಿಸಲಿದೆ ಎಂದು ಆಶಿಸಲಾಗಿದೆ.
2016ರ ಜೂನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಿಜರ್ಲೆಂಡ್ ಪ್ರವಾಸ ಕೈಗೊಂಡಿದ್ದರು. ಆಗಲೇ, ಸ್ವಿಸ್ ಬ್ಯಾಂಕ್ ಗಳಲ್ಲಿರುವ ಭಾರತೀಯರ ಕಪ್ಪು ಹಣದ ಹಸ್ತಾಂತರದ ಬಗ್ಗೆ ಚರ್ಚಿಸಲಾಗಿತ್ತು. ಆನಂತರ, ಅಲ್ಲಿನ ಬ್ಯಾಂಕುಗಳಲ್ಲಿರುವ ಕಪ್ಪು ಹಣದ ವರ್ಗಾವಣೆ ಬಗ್ಗೆ ಸ್ವಿಸ್ ಸರ್ಕಾರ ಒಲವು ತೋರಿತ್ತು.